ತಾಯಿಯೇ ಹೆತ್ತ ಮಗುವನ್ನು ಕೊಂದಿದ್ದು ಯಾಕೆ?
ಮಂಡ್ಯ,ಜನವರಿ,09: ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದ ಗಂಡು ಮಗುವಿಗೆ ಚಿಕಿತ್ಸೆಕೊಡಿಸಲು ಸಾಧ್ಯವಾಗದ ತಾಯಿಯೊಬ್ಬಳು ಹೆತ್ತ ಮಗುವನ್ನೇ ಉಸಿರುಗಟ್ಟಿಸಿ ಕೊಂದಿದ್ದಾಳೆ. ಈ ಘಟನೆ ಮಂಡ್ಯದ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟನ ತಾಲೂಕಿನ ಹಿರಿಸಾವೆ ಹೋಬಳಿಯ ಗೌಡಗೆರೆ ಗ್ರಾಮದ ಕೃಷ್ಣಮೂರ್ತಿ ಅವರ ಪತ್ನಿ ಪ್ರೇಮಕುಮಾರಿ ತಾನೇ ಹೆತ್ತ ಗಂಡು ಮಗುವನ್ನು ಹತ್ಯೆಗೈದು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. [18 ವರ್ಷದ ಮಗನ ಹುಡುಕಾಟಕ್ಕೆ ನಿಂತ ಮಹಾತಾಯಿ]
ಪ್ರೇಮಕುಮಾರಿ ಕೃಷ್ಣಮೂರ್ತಿ ಎಂಬುವರನ್ನು ಪ್ರೇಮಿಸಿ ವಿವಾಹವಾಗಿದ್ದರು. ಈ ದಂಪತಿಗೆ ಆರು ತಿಂಗಳ ಹಿಂದೆ ಗಂಡು ಮಗುವೊಂದು ಜನಿಸಿತ್ತು. ಆದರೆ ಮಗು ಅನಾರೋಗ್ಯದಿಂದ ಅಸ್ವಸ್ಥವಾಗುತ್ತಿತ್ತು. ಹಾಗಾಗಿ ಮಗುವಿಗೆ ಚಿಕಿತ್ಸೆ ನೀಡಲೆಂದು ನಾಗಮಂಗಲ ತಾಲೂಕಿನ ಬೆಳ್ಳೂರಿನ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ಮಗುವನ್ನು ಮೂರು ದಿನಗಳ ಹಿಂದೆ ದಾಖಲು ಮಾಡಿದ್ದರು.[ತೊಟ್ಟಿಗೆ ನವಜಾತ ಕಂದಮ್ಮನ ಬಿಸಾಕಿದ ನಿರ್ದಯಿ ಮಹಿಳೆ]
ಮಗುವನ್ನು ಪರೀಕ್ಷಿಸಿ ಕೆಲವು ದಾಖಲೆಗಳನ್ನು ಗಮನಿಸಿದ ವೈದ್ಯರು ಮಗುವಿಗೆ ಹೃದಯ ಸಂಬಂಧದ ತೊಂದರೆ ಇದೆ. ಗುಣಮುಖವಾಗಲು ಲಕ್ಷಾಂತರ ರೂಪಾಯಿ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಮೊದಲೇ ಬಡತನದಲ್ಲಿದ್ದ ಪ್ರೇಮಕುಮಾರಿಗೆ ಇದು ಬೇಸರ ತಂದಿತ್ತು. ಅಷ್ಟೊಂದು ಹಣ ಖರ್ಚು ಮಾಡಿ ಮಗುವನ್ನು ಉಳಿಸಿಕೊಳ್ಳುವುದು ಕಷ್ಟವಾಗಿತ್ತು.
ಗುರುವಾರ ಆಸ್ಪತ್ರೆಯಿಂದ ಹೊರಗೆ ಮಗುವಿನೊಂದಿಗೆ ಹೋದ ತಾಯಿ ಪ್ರೇಮಕುಮಾರಿ ಯಾರೂ ಇಲ್ಲದ ಸಂದರ್ಭ ನೋಡಿ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿ ಬಳಿಕ ತಾನಿದ್ದ ವಾರ್ಡ್ ಗೆ ಬಂದು ಮಗುವನ್ನು ಮಲಗಿಸಿ ಆ ನಂತರ ಮಗು ಸತ್ತುಹೋಗಿದೆ ಎಂದು ನಾಟಕವಾಡಿದ್ದಾಳೆ.[ಮೈಮೇಲೆ ಮನೆ ಬಿದ್ದಿದ್ರೂ ಮಗುವನ್ನು ಹೊಟ್ಟೆಯಲ್ಲಿ ರಕ್ಷಿಸಿದ ಮಹಾತಾಯಿ!]
ತಕ್ಷಣ ಬಂದು ಪರೀಕ್ಷಿಸಿದ ವೈದ್ಯರಿಗೆ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿದ್ದು ಗೊತ್ತಾಗಿದ್ದು, ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಬೆಳ್ಳೂರು ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತಾಯಿ ಪ್ರೇಮಕುಮಾರಿಯನ್ನು ಬಂಧಿಸಿದ್ದಾರೆ.