ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸ್ನೇಹಿತನ ಪತ್ರ!
ಬೆಂಗಳೂರು, ಜನವರಿ 02 : ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ಪುನಾರಚನೆ ಸಮಯದಲ್ಲಿ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ. ಆದರೆ, ಅವರ ಸ್ನೇಹಿತರು ಅವರ ಬೆಂಬಲಕ್ಕೆ ನಿಂತಿದ್ದಾರೆ.
ಸಂಪುಟ ವಿಸ್ತರಣೆ ಬಳಿಕ ರಮೇಶ್ ಜಾರಕಿಹೊಳಿ ಸ್ನೇಹಿತರು ಮತ್ತು ಮಾಧ್ಯಮದವರ ಕೈಗೆ ಸಿಕ್ಕಿಲ್ಲ. ರಮೇಶ್ ಜಾರಕಿಹೊಳಿ ಅವರು ಎಲ್ಲಿದ್ದಾರೆ? ಎಂಬ ಪ್ರಶ್ನೆ ಕಾಡುತ್ತಿದೆ. ಮಂಬೈನಲ್ಲಿದ್ದಾರೆ, ದೆಹಲಿಯಲ್ಲಿ ಬಿಜೆಪಿ ನಾಯಕರ ಜೊತೆ ಇದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಸ್ನೇಹಿತರೊಬ್ಬರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಎಂಟು ದಿನಗಳಿಂದ ನಿಮ್ಮನ್ನು ಹುಡುಕಿ ಸಾಕಾಗಿದೆ' ಎಂದು ಅಶೋಕ್ ಚಂದರಗಿ ಎಂಬುವವರು ಪತ್ರ ಬರೆದಿದ್ದಾರೆ.
'ನೀವು ಕಾಂಗ್ರೆಸ್, ಬಿಜೆಪಿ ಯಾವುದೇ ಪಕ್ಷದಲ್ಲಾದರೂ ಇರಿ. ಆದರೆ, ಸದಾ ನಮ್ಮ ಕಣ್ಣ ಮುಂದೆ ಇರಿ. ರಮೇಶ್ ಜಾರಕಿಹೊಳಿ ಎಂದು ನಿಂತ ನೀರಲ್ಲ' ಎಂದು ಮಿತ್ರರು ಪತ್ರದಲ್ಲಿ ಬರೆದಿದ್ದಾರೆ. ಪತ್ರದಲ್ಲೇನಿದೆ? ಚಿತ್ರಗಳಲ್ಲಿ ನೋಡಿ....

ದೂರ ಉಳಿದಿರುವುದು ಸರಿಯಲ್ಲ
ಅಶೋಕ್ ಚಂದರಗಿ ಅವರು ಬರೆದಿರುವ ಪತ್ರದಲ್ಲಿ, 'ಕಳೆದ ಎಂಟು ದಿನಗಳಿಂದ ದೂರ ಉಳಿದಿರುವುದು ಸರಿಯಲ್ಲ. ಮಿತ್ರರಿಂದ ದೂರು ಉಳಿದಿರುವುದು ಏಕೆ?' ಎಂದು ಪ್ರಶ್ನೆ ಮಾಡಿದ್ದಾರೆ.

ಮಿಸ್ ಮಾಡಿಕೊಂಡಿದ್ದೇವೆ
'ನಿಮ್ಮ ನೇರ ಮಾತು, ನಿಷ್ಕಪಟ ನಡೆಯನ್ನು ನಾವು ಮಿಸ್ ಮಾಡಿಕೊಂಡಿದ್ದೇವೆ. ನಿಮ್ಮನ್ನು ಹುಡುಕಿ ಸಾಕಾಗಿದೆ. ನೀವು ಯಾವ ಪಕ್ಷದಲ್ಲಿ ಬೇಕಾದರು ಇರಿ. ಆದರೆ, ಸದಾ ನಮ್ಮ ಕಣ್ಣ ಮುಂದಿರಿ' ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕಾಂಗ್ರೆಸ್ನಿಂದ ಚಳ್ಳೆಹಣ್ಣು
ಕಾಂಗ್ರೆಸ್ ನಾಯಕರು ನಿಮಗೆ ಚಳ್ಳೆಹಣ್ಣು ತಿನ್ನಿಸಿರಬಹುದು. ಬಿಜೆಪಿಯವರು ನಿಮ್ಮನ್ನು ಆಸೆಗಣ್ಣಿನಿಂದ ನೋಡುತ್ತಿರಬಹುದು. ನಿಮ್ಮ ಧೀರ್ಘ ಕಾಲದ ಕಣ್ಮರೆ ದುಃಖ ತಂದಿದೆ ಎಂದು ಪತ್ರದಲ್ಲಿ ಸ್ನೇಹಿತರು ವಿವರಿಸಿದ್ದಾರೆ.

ರಾಜಕೀಯ ನಿಂತ ನೀರಲ್ಲ
ರಮೇಶ ರಾಜಕೀಯ ನಿಂತ ನೀರಲ್ಲ. ಸದಾ ಹರಿಯುತ್ತಲೇ ಇರುತ್ತದೆ. ಒಮ್ಮೊಮ್ಮೆ ಹರಿದು ಗಟಾರ ಸೇರುತ್ತದೆ. ಕೆಲವೊಮ್ಮೆ ಸಮುದ್ರ ಸೇರುತ್ತದೆ. ನಿನ್ನ ಇಚ್ಛೆ ಏನಿದೆಯೋ ಗೊತ್ತಿಲ್ಲ ಎಂದು ಸ್ನೇಹಿತ ಪತ್ರದಲ್ಲಿ ವಿವರಣೆ ನೀಡಿದ್ದಾರೆ.











Click it and Unblock the Notifications