ಮಂಡ್ಯ ಕಾಲೇಜು ವಿದ್ಯಾರ್ಥಿನಿಯ ಪ್ರಾಣಕ್ಕೆ ಕುತ್ತು ತಂದ ಹೊಟ್ಟೆನೋವು
ಮಂಡ್ಯ, ಮಾರ್ಚ್,02: ಯಾವಾಗಲೂ ಬಾಧಿಸುತ್ತಿದ್ದ, ಸದಾ ಜೀವ ಹಿಂಡುತ್ತಿದ್ದ ಹೊಟ್ಟೆನೋವನ್ನು ತಡೆದುಕೊಳ್ಳಲು ಸಾಧ್ಯವಾಗದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಕಾಲೇಜಿನಲ್ಲೇ ವಿಷಕಾರಿ ಮಾತ್ರೆ ಸೇವಿಸಿ ಸಾವನ್ನಪ್ಪಿದ ಘಟನೆ ಮಂಗಳವಾರ ಮಂಡ್ಯದ ಕೆ.ಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ.
ಎ. ಜಿ ನಮಿತಾ (21) ಹೊಟ್ಟೆನೋವಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿ ಗ್ರಾಮದ ಗೋವಿಂದಶೆಟ್ಟಿ ಮತ್ತು ವೆಂಕಟಲಕ್ಷ್ಮಮ್ಮ ದಂಪತಿಗಳ ಪುತ್ರಿಯಾದ ಈಕೆ ಕೆ.ಆರ್ ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ ಓದುತ್ತಿದ್ದಳು.[ಶಾಲೆ ಶೌಚಾಲಯದಲ್ಲೇ ಹೆಣ್ಣು ಮಗುವಿಗೆ ಜನ್ಮವಿತ್ತ ಬಾಲಕಿ]
ಏನಿದು ಘಟನೆ:
ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿ.ಎ.ತರಗತಿ ವ್ಯಾಸಂಗ ಮಾಡುತ್ತಿದ್ದ ನಮಿತಾ ಎಂದಿನಂತೆ ಸೋಮವಾರ ಕಾಲೇಜಿಗೆ ಬಂದಿದ್ದಾಳೆ. ಸುಮಾರು 11ಗಂಟೆ ಸಮಯದಲ್ಲಿ ತರಗತಿ ನಡೆಯುತ್ತಿದ್ದ ವೇಳೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ.[ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು]
ಆಗ ಆಕೆ ಪಾಠ ನಡೆಯುತ್ತಿದ್ದ ವೇಳೆ ಉಪನ್ಯಾಸಕ ಜಾನೇಗೌಡರ ಬಳಿ ಶೌಚಾಲಯಕ್ಕೆ ಹೋಗಿ ಬರುವುದಾಗಿ ಅನುಮತಿ ಕೇಳಿ ತರಗತಿಯಿಂದ ಹೊರಗೆ ಬಂದಿದ್ದಾಳೆ. ಬಳಿಕ ಶೌಚಾಲಯಕ್ಕೆ ತೆರಳಿದ ನಮಿತಾ ಶೌಚಾಲಯದಲ್ಲಿಯೇ ವಿಷಕಾರಿ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ.['ನನಗೆ ರೇಷ್ಮೆ ಸೀರೆ ಕೊಡ್ಸು ಎಂದ ಮಗಳೇ ಇಲ್ಲ' ಇದು ಅಪ್ಪನ ರೋದನ]
ತೀರಾ ಅಸ್ವಸ್ಥತೆಗೆ ಒಳಗಾಗಿದ್ದ ನಮಿತಾಳನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾಳೆ. ಘಟನೆ ಕುರಿತು ಮೃತಳ ತಂದೆ ಗೋವಿಂದಶೆಟ್ಟಿ ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಬ್ಇನ್ಸ್ ಪೆಕ್ಟರ್ ಹೆಚ್.ಎನ್.ವಿನಯ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.