ಯುವತಿಯ ಟಿಕ್ಟಾಕ್ ವಿಡಿಯೋ ಮನವಿಗೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ
ಬೆಂಗಳೂರು, ಏಪ್ರಿಲ್ 11: ಟಿಕ್ಟಾಕ್ ಎಂಬ ಸಾಮಾಜಿಕ ಜಾಲತಾಣ ಇತ್ತೀಚೆಗೆ ಸಾಕಷ್ಟು ಜನಪ್ರಿಯವಾಗುತ್ತಿದೆ . ಕೆಲವು ಬಳಕೆದಾರರು ಟಿಕ್ಟಾಕ್ನ್ನು ತಮ್ಮ ಕ್ರಿಯೇಟಿವಿಟಿ ತೋರಿಸಲಿಕ್ಕೆ ಬಳಸಿದರೆ, ಅನೇಕರು ಇದನ್ನು ಟೈಮ್ಪಾಸ್ಗೋಸ್ಕರ ಬಳಕೆ ಮಾಡುತ್ತಿದ್ದಾರೆ.
ಆದರೆ, ಇಲ್ಲೊಬ್ಬ ಯುವತಿ, ಟಿಕ್ಟಾಕ್ ಮೂಲಕ ರಾಜ್ಯದ ಮುಖ್ಯಮಂತ್ರಿ ಅವರನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡುವಲ್ಲಿ ಸಫಲಳಾಗಿದ್ದಾಳೆ.
ಕಿಡ್ನಿ ಕಾಯಿಲೆಗೆ ತುತ್ತಾಗಿರುವ ತನ್ನ ತಾಯಿಗೆ ಲಾಕ್ಡೌನ್ ನಿಂದ ಔಷಧಿ ಸಿಗದಿದ್ದಕ್ಕೆ ಮುನಿಸಿಕೊಂಡು ಟಿಕ್ಟಾಕ್ನಲ್ಲಿ ವಿಡಿಯೋ ಮಾಡಿ ಸಿಎಂ ಬಳಿ ಮನವಿ ಮಾಡಿಕೊಂಡಿದ್ದಳು ಬೆಳಗಾವಿಯ ಯುವತಿಯೊಬ್ಬಳು. ಅವಳ ಮನವಿ ಪರಿಗಣಿಸಿ ಅಧಿಕಾರಿಗಳ ಮೂಲಕ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಗೆ ಔಷಧಿ ತಲುಪುವಂತೆ ಮಾಡಿದ್ದಾರೆ.

ತಾಯಿಗೆ ಕಿಡ್ನಿ ಕಸಿ ಮಾಡಲಾಗಿತ್ತು
ಪವಿತ್ರ ಅರಂಭಾವಿ, ಈ ಹುಡುಗಿ ತಾಯಿ ಶೇಖವ್ವ ಅರಭಾವಿ. ಇವರು ಬೆಳಗಾವಿಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದವರು. ಶೇಖವ್ವ ಅರಭಾವಿ ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದರು. ಆ ಸಂದರ್ಭದಲ್ಲಿ ಶೇಖವ್ವ ಅರಭಾವಿಯ ಪತಿ, ತನ್ನ ಪತ್ನಿಗಾಗಿ ತಮ್ಮ ಒಂದು ಕಿಡ್ನಿ ದಾನ ಮಾಡಿದ್ದರು. ಜನವರಿ 17 ರಂದು ಹುಬ್ಬಳ್ಳಿಯ ಎಸ್ ಡಿಎಂ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಗಿತ್ತು.

ಟಿಕ್ಟಾಕ್ನಲ್ಲಿ ಮಗಳ ಕಣ್ಣೀರು
ಲಾಕ್ ಔಟ್ ಘೋಷಣೆಯ ಕಾರಣದಿಂದ ಶೇಖವ್ವ ಅರಭಾವಿಗೆ ಅಗತ್ಯ ಔಷಧಿಗಳು ದೊರೆಯದೆ ಅವರು ಸಾವು ಬದುಕಿನ ನಡುವೆ ಸೆಣಿಸುವಂತಾಗಿತ್ತು. ಇಂತಹ ಸಂಕಷ್ಟವನ್ನು ಶೇಖವ್ವ ಅರಭಾವಿಯ ಮಗಳು ಪವಿತ್ರ ಟಿಕ್ ಟಾಕ್ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನ ಸೆಳೆದು ಸಹಾಯ ಕೋರಿದ್ದಳು.

ಟಿಕ್ಟಾಕ್ ವಿಡಿಯೋ ನೋಡಿ ಸಿಎಂ ಕ್ರಮ
ಈ ಟಿಕ್ ಟಾಕ್ ನೋಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಬೆಳಗಾವಿಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರ ಅವರುಗಳಿಗೆ ಮೊಬೈಲ್ ಕರೆ ಮಾಡಿ ಶೇಖವ್ವ ಅರಭಾವಿ ಅವರಿಗೆ ತಕ್ಷಣ ಅಗತ್ಯ ಔಷಧಿಗಳನ್ನು ಒಂದು ತಿಂಗಳಿಗಾಗುವಷ್ಟು ಪೂರೈಸಿ ಎಂದು ಆದೇಶಿಸಿದರು. CM ಆದೇಶಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಶೇಖವ್ವ ಅರಭಾವಿ ಅವರಿಗೆ ಅಗತ್ಯ ಔಷಧ ಪೂರೈಸಿ, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದಾರೆ.

11 ಪ್ರಕಣಗಳು ಕಂಡು ಬಂದಿವೆ
ಬೆಳಗಾವಿ ಜಿಲ್ಲೆಯಲ್ಲಿಯೂ ಕೊರೊನಾ ಸಂಕಷ್ಟಕ್ಕೆ ತುತ್ತಾಗಿದೆ. ಅಲ್ಲಿ 11 ಪ್ರಕಣಗಳು ಕಂಡು ಬಂದಿವೆ. ಇದರಿಂದ ಲಾಕ್ಡೌನ್ನ್ನು ಸಂಪುರ್ಣ ಕಟ್ಟುನಿಟ್ಟುಗೊಳಿಸಲಾಗಿದೆ. ಸೋಂಕು ಹರಡದಂತೆ ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ.












Click it and Unblock the Notifications