ಮಹದಾಯಿ ಹೋರಾಟ: ಸೊರಬದಮಠ ಉಪವಾಸ ಅಂತ್ಯ
ನರಗುಂದ (ಗದಗ), ಜುಲೈ 22: ಮಹದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆ ಜಾರಿಗೆ ಆಗ್ರಹಿಸಿ ಜುಲೈ 17ರಂದು ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರು ಆರಂಭಿಸಿದ್ದ ಉಪವಾಸ ಸತ್ಯಾಗ್ರಹವನ್ನು ಮುಖ್ಯಮಂತ್ರಿಗಳ ಭರವಸೆ ಹಿನ್ನೆಲೆಯಲ್ಲಿ ಅಂತ್ಯಗೊಳಿಸಿದ್ದಾರೆ.
ಜುಲೈ 21 ರಂದು ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಕೂಡಲಸಂಗಮದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು ಯೋಜನೆ ಜಾರಿಗೆ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಹೇಳಿ ನಮ್ಮನ್ನ ಕಳುಹಿಸಿದ್ದಾರೆ. ಈ ಕುರಿತು ಸರ್ವ ಪಕ್ಷ ಸಭೆ ಕರೆದು ಚರ್ಚಿಸಿ ಯೋಜನೆಗೆ ಅಡ್ಡಿಯಾಗಿರುವ ವಿಚಾರಗಳ ಕುರಿತು ಚರ್ಚಿಸಲಾಗುವುದು.

ಸರ್ಕಾರದ ಮೇಲೆ ನಂಬಿಕೆ ಇಟ್ಟು ಸತ್ಯಾಗ್ರಹವನ್ನು ವಾಪಸ್ ಪಡೆಯಿರಿ, ಸಮಸ್ಯೆ ಬಗೆ ಹರಿಸಲು ಎಲ್ಲರೂ ಶ್ರಮಿಸೋಣ ಎಂದು ಮನವೊಲಿಸಿದರು. ನಂತರ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಸತ್ಯಾಗ್ರಹ ಹಿಂಪಡೆಯಲು ಒಪ್ಪಿದ ಸೊಬರದಮಠ ಅವರಿಗೆ ಸಚಿವ ವಿನಯ್ ಕುಲಕರ್ಣಿ ಎಳೆನೀರು ಕುಡಿಸುವ ಮೂಲಕ ಆಮರಣ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.

ಸರ್ವ ಪಕ್ಷ ಸಭೆ
ಉಪವಾಸ ಅಂತ್ಯಗೊಳಿಸಿ ಮಾತನಾಡಿದ ವೀರೇಶ ಸೊಬರದಮಠ, ಸರ್ಕಾರದ ಭರವಸೆ ಮೆರೆಗೆ ಸತ್ಯಾಗ್ರಹವನ್ನ ಹಿಂಪಡೆಯುತ್ತಿದ್ದೇನೆ. ಕೂಡಲೇ ಸರ್ಕಾರ ಸರ್ವ ಪಕ್ಷ ಸಭೆ ಕರೆಯಬೇಕು. ಈ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಸೇರಿದಂತೆ ರಾಜ್ಯದ ಒಟ್ಟು 28 ಸಂಸದರೂ ಭಾಗವಹಿಸಬೇಕು. ಈ ಸಭೆಯಲ್ಲಿ ಯೋಜನೆ ಕುರಿತು ಸ್ಪಷ್ಟ ಹಾಗೂ ಒಮ್ಮತದ ತೀರ್ಮಾನವಾಗಬೇಕು ಎಂದು ಒತ್ತಾಯಿಸಿದರು.












Click it and Unblock the Notifications