ಭೀಕರ ರಸ್ತೆ ಅಪಘಾತ, ನಾಲ್ವರು ಅಯ್ಯಪ್ಪ ಭಕ್ತರ ದುರ್ಮರಣ
ಚಾಮರಾಜನಗರ, ಡಿಸೆಂಬರ್, 17: ಲಾರಿ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೆಲವರು ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮೂಲೆಹೊಳೆ ಬಳಿ ಗುರುವಾರ ಮುಂಜಾನೆ ನಡೆದಿದೆ.
ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ವಿನಯ್, ಜಯಂತ್, ಉಲ್ಲಾಸ್, ಭರತ್ ಎಂಬುವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಸಿಮೆಂಟ್ ತುಂಬಿದ್ದ ಲಾರಿಗೆ 9 ಅಯ್ಯಪ್ಪಸ್ವಾಮಿ ಭಕ್ತರಿದ್ದ ತವೆರಾ ಕಾರ್ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.[ಕೆಎಸ್ಆರ್ ಟಿಸಿಯಿಂದ ಶಬರಿಮಲೆಗೆ ರಾಜಹಂಸ ಬಸ್ ಸೇವೆ]
ತವೆರಾ ಕಾರಿನಲ್ಲಿ 9 ಮಂದಿ ಅಯ್ಯಪ್ಪ ಸ್ವಾಮಿ ಭಕ್ತರು ಪ್ರಯಾಣ ಮಾಡುತ್ತಿದ್ದರು. ಮಂಗಳವಾರ ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನ ಪಡೆದು ಸುಲ್ತಾನ್ ಬತ್ತೇರಿ ಮೂಲಕ ಬರುತ್ತಿದ್ದರು. ಆಗ ಆಂಧ್ರದಿಂದ ಸಿಮೆಂಟ್ ತುಂಬಿದ್ದ ಲಾರಿ ಎದುರಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 9 ಜನರಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರು.[ಶಬರಿಮಲೆ ಯಾತ್ರೆ ಆರಂಭ, ಕರ್ನಾಟಕದ ಭಕ್ತರಿಗೆ ನೆರವು]
ರಸ್ತೆ ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೇರಳ ಪೊಲೀಸರು ಕಾರನ್ನು ತುಂಡರಿಸಿ, ಮೃತ ದೇಹ, ಗಾಯಾಳುಗಳನ್ನು ಹೊರತೆಗೆದಿದ್ದು ಸುಲ್ತಾನ್ ಬತ್ತೇರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಥಮ ಚಿಕಿತ್ಸೆ ಬಳಿಕ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.