ಕಾವೇರಿ ನದಿ ಸ್ವಚ್ಛತೆಗೆ 99 ಲಕ್ಷ ರೂ. ಯೋಜನೆ ಸಿದ್ದ- ಹೈಕೋರ್ಟ್ ಗೆ ಕಾವೇರಿ ನಿಗಮ ಹೇಳಿಕೆ
ಬೆಂಗಳೂರು,ಜು.8. ಕಾವೇರಿ ಹಾಗೂ ಕನ್ನಿಕೆ ನದಿಗಳ ಸ್ವಚ್ಛತೆ ಮತ್ತು ಪುನರುಜ್ಜೀವನಕ್ಕಾಗಿ 99 ಲಕ್ಷ ರೂ. ವೆಚ್ಚದ ಯೋಜನೆ ಸಿದ್ದಪಡಿಸಲಾಗಿದ್ದು, ಸರ್ಕಾರ ಅದಕ್ಕೆ ಅನುಮೋದನೆ ನೀಡಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮ ಹೈಕೋರ್ಟ್ಗೆ ತಿಳಿಸಿದೆ.
ನಿಗಮದ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, 2022ರ ಡಿಸೆಂಬರ್ 15ರೊಳಗೆ ನದಿ ಸ್ವಚ್ಛತೆ ಕಾರ್ಯ ಕೈಗೊಂಡು, 2023ರ ಜ.15ರೊಳಗೆ ವರದಿ ಸಲ್ಲಿಸಲು ಸೂಚಿಸಿ ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.
ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಸ್ವಚ್ಛತೆ ಮಾಡಲು ಆದೇಶಿಸುವಂತೆ ಕೋರಿ ಭಾಗಮಂಡಲ ಗ್ರಾಮದ ನಿವಾಸಿ ಎಸ್.ಇ.ಜಯಂತ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಲೋಕ್ ಆರಾಧೆ ಹಾಗೂ ನ್ಯಾ. ಜೆ.ಎಂ. ಖಾಜಿ ಅವರಿದ್ದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು, ಕೊಡಗು ಜಿಲ್ಲೆಯಾದ್ಯಂತ ಸದ್ಯ ಭಾರಿ ಮಳೆ ಬೀಳುತ್ತಿದೆ. ನವೆಂಬರ್ ವೇಳೆಗೆ ಮಳೆ ಕಡಿಮೆ ಆಗಲಿದೆ. ಮಳೆಗಾಲದಲ್ಲಿನದಿ ಸ್ವಚ್ಛತೆ ಕಾಮಗಾರಿ ಕೈಗೆತ್ತಿಕೊಂಡರೆ ಪ್ರಯೋಜನವಿಲ್ಲ. ಆದ್ದರಿಂದ ನವೆಂಬರ್ ತಿಂಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವುದು ಸೂಕ್ತ ಎಂದರು.
ಕಾವೇರಿ ನೀರಾವರಿ ನಿಗಮದ ಪರ ವಕೀಲರು, ಕಾವೇರಿ ಹಾಗೂ ಕನ್ನಿಕೆ ನದಿಗಳ ಸ್ವಚ್ಛತೆ ಮತ್ತು ಪುನರುಜ್ಜೀವನಕ್ಕಾಗಿ 99 ಲಕ್ಷ ರೂ. ವೆಚ್ಚದ ಯೋಜನೆಯನ್ನು ಸಿದ್ದಪಡಿಸಲಾಗಿದ್ದು, ಅದನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆ ದೊರೆತ ನಂತರ ಮಳೆ ತಗ್ಗಿದ ಮೇಲೆ ನದಿ ಸ್ವಚ್ಛತೆ ಕಾರ್ಯ ಆರಂಭಿಸಲಾಗುವುದು. ಅದಕ್ಕಾಗಿ ಡಿಸೆಂಬರ್ ತನಕ ಕಾಲಾವಕಾಶ ಬೇಕು ಎಂದು ಮನವಿ ಮಾಡಿದರು.
ಏನಿದು ಪ್ರಕರಣ:
ಅರ್ಜಿದಾರರು, ತಲಕಾವೇರಿ ಹಾಗೂ ಭಾಗಮಂಡಲಕ್ಕೆ ಬರುವ ಪ್ರವಾಸಿಗರಿಂದ ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ (ಗುಪ್ತ ಗಾಮಿನಿ) ನದಿಗಳು ಮಲಿನ ಆಗುತ್ತಿವೆ. ಒಳಚಂಡಿ ನೀರನ್ನು ನದಿ ಹರಿಸಲಾಗುತ್ತಿದೆ. ಈ ಮಧ್ಯೆ ಕಾವೇರಿ ನದಿಗೆ ಅಡ್ಡಲಾಗಿ ಭಾಗಮಂಡಲದ ಬಳಿ ಮಡಿಕೇರಿ-ತಲಕಾವೇರಿ ಮತ್ತು ನಾಪೋಕ್ಲು-ತಲಕಾವೇರಿ ರಸ್ತೆಗಳನ್ನು ಸಂಪರ್ಕ ಕಲ್ಪಿಸಲು 28.08 ಕೋಟಿ ರು. ವೆಚ್ಚದಲ್ಲಿಮೆಲ್ಸೇತುವೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇದರಿಂದ ನದಿಗಳು ಮತ್ತಷ್ಟು ಮಲಿನ ಆಗಲಿವೆ. ಸುತ್ತಲಿನ ಪರಿಸರದ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ಆರೋಪಿಸಿದ್ದಾರೆ.
ಜೊತೆಗೆ ಭಾಗಮಂಡಲದಲ್ಲಿ ತ್ರೀವೇಣಿ ಸಂಗಮ ಆಗುವ ಹಿಂದಿನ ಹಾಗೂ ನಂತರದ ಜಾಗದಲ್ಲಿ ನದಿಗಳ ನೀರನ್ನು ಸ್ವಚ್ಛಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದಾರೆ.