82ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ
ರಾಯಚೂರು, ನವೆಂಬರ್ 24: 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಯಚೂರು ನಗರ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಇಡೀ ನಗರದಲ್ಲಿ ಜಿಲ್ಲಾಡಳಿತ ವಿವಿಧ ಮಾದರಿಯ ಸಿದ್ದತೆ ನಡೆಸಿದೆ.
ರಾಯಚೂರಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 2 ರಿಂದ ಪ್ರಾರಂಭವಾಗಲಿದ್ದು, ಸಂಸ್ಕೃತಿ ಬಿಂಬಿಸುವ ಚಿತ್ರಗಳ ಪೇಟಿಂಗ್ ಕಾರ್ಯ, ಮುಖ್ಯ ವೇದಿಕೆ ಹಾಗೂ ಪರ್ಯಾಯ ವೇದಿಕೆಗಳು ಸಿದ್ದಗೊಳ್ಳುತ್ತಿವೆ. ರಾಯಚೂರು ನಗರದಲ್ಲಿ ಪೇಂಟಿಂಗ್ ಕಾರ್ಯ ನಡೆಯುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಸಮ್ಮೇಳನದ ಕಟೌಟ್ ಗಳು, ಜಾಹೀರಾತುಗಳು ರಾರಾಜಿಸುತ್ತಿವೆ.
ಅಲ್ಲದೆ ಸಮ್ಮೇಳನದ ಹಿನ್ನೆಲೆ ಅಲ್ಲಲ್ಲಿ ಅಸಮಾಧಾನದ ಮಾತುಗಳು ಕೇಳಿಬರುತ್ತಿದೆ. ತಮ್ಮನ್ನು ಸಮ್ಮೇಳನಕ್ಕೆ ಆಹ್ವಾನಿಸಿಲ್ಲ ಎಂದು ಮಂತ್ರಾಲಯ ಮಠದ ಪೀಠಾದಿಪತಿ ಸುಬುದೇಂದ್ರ ತೀರ್ಥರು ಅಸಮಾಧಾನ ಹೊರಹಾಕಿದ್ದಾರೆ.
ರಾಯಚೂರಿನಲ್ಲಿ ಶೇಕಡಾ 60 ರಷ್ಟು ರೂಂಗಳನ್ನ ಸಮ್ಮೇಳನದ ಅಥಿತಿಗಳಿಗೆ ನೀಡುತ್ತೇವೆ ಎಂದಿದ್ದ ನಗರದ ಹೋಟೆಲ್ ಮಾಲೀಕರು ದಿಢೀರ್ ಅಂತಾ ಹಿಂದೆ ಸರಿದಿದ್ದಾರೆ. ಬೇರೆ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.