ಅಸಮಾಧಾನದ ಹೊಗೆ : ಕರ್ನಾಟಕ ಬಿಜೆಪಿಯ ನಾಯಕರಿಗೆ 8 ಪ್ರಶ್ನೆ
ಕರ್ನಾಟಕ ಬಿಜೆಪಿಯಲ್ಲಿ ಪ್ರತಿ ನಿತ್ಯವೂ ಒಂದಿಲ್ಲೊಂದು ಕಲಹ, ಅಸಮಾಧಾನ. ಪ್ರತಿಪಕ್ಷದ ಜವಾಬ್ದಾರಿ ನಿರ್ವಹಿಸಬೇಕಾದ ಆ ಪಕ್ಷದೊಳಗೇ ಭಿನ್ನಮತ. ಆಹಿನ್ನೆಲೆಯಲ್ಲಿ ಕರ್ನಾಟಕದ ಬಿಜೆಪಿ ನಾಯಕರಿಗೆ ಎಂಟು ಪ್ರಶ್ನೆಗಳನ್ನು ಕೇಳಲಾಗಿದೆ
ಬೆಂಗಳೂರು, ಜನವರಿ 27: ಬಿಜೆಪಿಯಲ್ಲಿ ಈಗಾಗಲೇ ಮುಂದಿನ ವಿಧಾನಸಭೆ ಚುನಾವಣೆ ಗೆದ್ದಂತೆ ಬೀಗುತ್ತಿದ್ದಾರೆ. ಬಿಎಸ್ ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿ ಎಂದು ಹೋದಲ್ಲಿ-ಬಂದಲ್ಲಿ, ಸಿಕ್ಕಸಿಕ್ಕವರು ಹೇಳಿದ್ದೇ ಹೇಳುತ್ತಿದ್ದಾರೆ. ಸುಮ್ನೆ ಹಾಗೇ ಯೋಚಿಸಿ, "ಹೌದು, ರಾಜ್ಯ ಬಿಜೆಪಿಯಲ್ಲಿ ಸಮಸ್ಯೆಗಳಿವೆ, ಸರಿಪಡಿಸಬೇಕು" ಎಂಬ ಹೇಳಿಕೆಯನ್ನು ಎಷ್ಟು ನಾಯಕರು ಕೊಟ್ಟಿದ್ದಾರೆ?
ಯಡಿಯೂರಪ್ಪನವರೂ ಸೇರಿದ ಹಾಗೆ ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ, ಡಿ.ವಿ.ಸದಾನಂದ ಗೌಡ..ಪಟ್ಟಿ ಹೀಗೇ ಬೆಳೆಯುತ್ತದೆ. ಹಾಗಿದ್ದರೆ ವಿರೋಧ ಪಕ್ಷದಲ್ಲಿದ್ದಾಗಲೇ ಇವರಿಗೆ ಇಷ್ಟೊಂದು ಅಸಮಾಧಾನವಿದೆ. ಒಂದು ವೇಳೆ ಅಧಿಕಾರಕ್ಕೆ ಬಂದುಬಿಟ್ಟರೆ ಪರಿಸ್ಥಿತಿ ಹೇಗಾಗಬಹುದು ಎಂಬ ಪ್ರಶ್ನೆ ಬರುವುದಿಲ್ಲವೇ?[ಬಿಎಸ್ ವೈ- ಈಶ್ವರಪ್ಪ ಸಂಧಾನ ಸಭೆಯಲ್ಲಿ ಆರೆಸ್ಸೆಸ್ ನ ಮುಕುಂದ]
ಹಾಗೆ ಶೇಕಡಾವಾರು ಪ್ರಮಾಣ ಗಮನಿಸಿದರೆ ಬಿಜೆಪಿ ಯಾವ ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆಯೋ ಅಲ್ಲೆಲ್ಲ ಪುನರಾಯ್ಕೆ ಸಾಧ್ಯತೆಗಳನ್ನು ಹೆಚ್ಚಿಸಿಕೊಂಡಿದೆ. ಆದರೆ ಕರ್ನಾಟಕದಲ್ಲಿ ಆಗಿದ್ದು ಮಾತ್ರ ಸ್ವಲ್ಪ ವಿಚಿತ್ರ. ಮೂರು ಮೂರು ಮುಖ್ಯಮಂತ್ರಿಗಳು ಬದಲಾದರು. ಸಾಲು ಬಂಡಾಯಗಳು, ಸ್ವತಃ ಯಡಿಯೂರಪ್ಪನವರೇ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂತು.
ಈಗಿನ ಬಿಜೆಪಿ ಸ್ಥಿತಿ ಗಮನಿಸಿ, ಕೆಲವು ಪ್ರಶ್ನೆಗಳು ಉದ್ಭವಿಸಿದ್ದರಿಂದ ಅವುಗಳನ್ನು ಓದುಗರ ಮುಂದಿಡಲಾಗಿದೆ. ಉತ್ತರ ಕಂಡುಕೊಳ್ಳಬೇಕಾಗಿರುವುದು ಬಿಜೆಪಿಯೇ ಆದರೂ ವಿರೋಧ ಪಕ್ಷವಾಗಿ ಸಮರ್ಥವಾಗಿ ಕೆಲಸ ಮಾಡಬೇಕಾದ ಪಕ್ಷದೊಳಗೆ ಗೊಂದಲಗಳಿದ್ದರೆ ಜನರ ಸಮಸ್ಯೆಗಳಿಗೆ ಇವರೆಂಥ ದನಿಯಾಗುತ್ತಾರೆ ಎಂಬ ಅನುಮಾನ ಮೂಡುವುದಿಲ್ಲವೇ? ನಮ್ಮ ಪ್ರಶ್ನೆಗಳಿವು.[ಯಡಿಯೂರಪ್ಪ-ಈಶ್ವರಪ್ಪಗೆ ಅಮಿತ್ ಶಾರಿಂದ ಬುಲಾವ್]
ಸರ್ವಾಧಿಕಾರಿಯೇ ಅಥವಾ ಹಿತ್ತಾಳೆ ಕಿವಿಯೇ?
ಮಾಜಿ ಸಚಿವ ವಿ.ಸೋಮಣ್ಣ ಅವರ ಆರೋಪ ಏನೆಂದರೆ, "ಯಡಿಯೂರಪ್ಪ ಅವರದು ಸರ್ವಾಧಿಕಾರಿ ಧೋರಣೆ. ಹೇಳಿದವರ ಮಾತೆಲ್ಲ ಕೇಳುವ ಹಿತ್ತಾಳೆ ಕಿವಿ". ಹೇಳಿದವರ ಮಾತೆಲ್ಲ ಕೇಳುವ ಹಿತ್ತಾಳೆ ಕಿವಿಯವರು ಸರ್ವಾಧಿಕಾರಿ ಹೇಗಾದಾರು? ಈ ಹೇಳಿಕೆಯಲ್ಲೇ ಗೊಂದಲ ಇಲ್ಲವೆ? ಒಂದು ವೇಳೆ ಇದು ನಿಜವಾದರೆ, ಬಿಎಸ್ ವೈ ಸರ್ವಾಧಿಕಾರಿಯೂ ಹೌದು, ಹಿತ್ತಾಳೆ ಕಿವಿಯೂ ಹೌದು. ಹಾಗಿದ್ದರೆ ಅದು ಯಾವ ಯಾವ ಸಂದರ್ಭದಲ್ಲಿ ಅಂತ ವಿವರಿಸಬೇಕು.
ಆಗ ಬರದ ಸಿಟ್ಟು ಈಗೇಕೆ?
ಇನ್ನು ಈಶ್ವರಪ್ಪನವರ ಆರೋಪ ಏನೆಂದರೆ, ಪಕ್ಷದ ಹಿರಿಯರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಹೊಸಬರಿಗೆ ಮಣೆ ಹಾಕುತ್ತಿದ್ದಾರೆ. ಓಹ್, ಮೈಸೂರಿನ ಶಂಕರಲಿಂಗೇಗೌಡ ಅಂಥವರನ್ನು ಬಿಟ್ಟು ಒಂದೇ ಮನೆಯಲ್ಲಿ ಇಬ್ಬರನ್ನು (ಜನಾರ್ದನ ರೆಡ್ಡಿ, ಕರುಣಕರ ರೆಡ್ಡಿ) ಮಂತ್ರಿ ಮಾಡಿ, ಒಂದು ಜಿಲ್ಲೆಯಿಂದ ಮೂವರು ಸಚಿವರಾದರಲ್ಲ (ಶ್ರೀರಾಮುಲು), ಆಗ ನಿಮಗೆ ಹಿರಿಯರ ಅವಗಣನೆ ಅನ್ನಿಸಲಿಲ್ಲವಾ? ಆಗ ಸುಮ್ಮನಿದ್ದವರಿಗೆ ಈಗ ದಿಢೀರನೆ ಸಿಟ್ಟು ಬಂತಾ?
ಸಿದ್ಧಾಂತದ ಜಾಹೀರಾತು
ನಾವು ಸಿದ್ಧಾಂತಕ್ಕಾಗಿ ಯಾರನ್ನಾದರೂ ಕೈ ಬಿಡಲು ಸಿದ್ಧ ಎಂದು ಕಳೆದ ಚುನಾವಣೆ ವೇಳೆ ಮಾಧ್ಯಮಗಳಲ್ಲಿ ಜಾಹೀರಾತು ನೀಡಿದ್ದ ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪನವರು ಮತ್ತೆ ಬೇಕು ಎನಿಸಿದ ಕಾರಣ ಏನು? ಜಾತಿಯಾ? ಅವರ ರಾಜಕೀಯ ಚಾತುರ್ಯವಾ? ಜನ ನಾಯಕನ ಇಮೇಜಾ? ಅದೇನು ಏನು ಏನು?
ಯಡಿಯೂರಪ್ಪನವರ ಪರ್ಯಾಯ ಯಾರಾಗಬಹುದು?
ಈಗಿಂದೀಗಲೇ ಯಡಿಯೂರಪ್ಪನವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತು ಬಿಸಾಕಿ, ಹೊಸದಾಗಿ ಮುಖ್ಯಮಂತ್ರಿ ಅಭ್ಯರ್ಥಿ ಇಂಥವರು ಅಂತ ಘೋಷಿಸಿ. ಇಡೀ ಕರ್ನಾಟಕಕ್ಕೆ ಸಲ್ಲುವಂತೆ ಯಾರನ್ನು ಘೋಷಿಸಬಹುದು? ಜಗದೀಶ್ ಶೆಟ್ಟರ್, ಸದಾನಂದ ಗೌಡ, ಈಶ್ವರಪ್ಪ, ಸುರೇಶ್ ಕುಮಾರ್, ಅನಂತಕುಮಾರ್...ಈ ಪೈಕಿ ಯಾರನ್ನು ಅಂತ ಹೇಳಬೇಕಲ್ಲವಾ?
ಏಕೆ ಅಸಮಾಧಾನ?
ಇನ್ನು ಯಡಿಯೂರಪ್ಪನವರ ವಿಚಾರಕ್ಕೆ ಬರೋಣ. ಬಳ್ಳಾರಿಯ ಗಣಿ ರೆಡ್ಡಿಗಳು ಬಂಡಾಯ ಎದ್ದಾಗಲೂ ಶೋಭಾ ಕರಂದ್ಲಾಜೆ ಅವರ ಹಸ್ತಕ್ಷೇಪದ ಬಗ್ಗೆಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಈಗಲೂ ಬಿಜೆಪಿಯೊಳಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವವರದೂ ಅದೇ ಧ್ವನಿ ಕೇಳುತ್ತಿದೆ. ಬಿಎಸ್ ವೈ ಸಿಟ್ಟು, ಏಕಪಕ್ಷೀಯ ನಿರ್ಧಾರದ ಬಗ್ಗೆ ಮತ್ತೆ ಮತ್ತೆ ಮಾತು ಕೇಳುಬರುತ್ತಿದೆ. ಈ ಬಗ್ಗೆ ಯಡಿಯೂರಪ್ಪನವರು ಏಕೆ ಕೇಳಿಸಿಕೊಂಡು, ಬದಲಾಗುವ ತಾಳ್ಮೆ ತೋರಿಸುತ್ತಿಲ್ಲ. ಯಾರೋ ಪಕ್ಷಕ್ಕೆ ಬಂದ ಹೊಸಬರಿಗೆ ಕೋಪ-ತಾಪ ಇದ್ದರೆ ಇದರ ಹಿಂದೆ ಬೇರೇನೋ ಕಾರಣ ಇದೆ ಅನ್ನಬಹುದಿತ್ತು. ಈಶ್ವರಪ್ಪನಂಥವರು ದಶಕಗಳ ಕಾಲ ಒಟ್ಟೊಟ್ಟಿಗೆ ಕೆಲಸ ಮಾಡಿದವರಿಗೆ ಏಕೆ ಅಸಮಾಧಾನ?
ರಾಯಣ್ಣ ಬ್ರಿಗೇಡ್ ಏಕೆ ವಿರೋಧಿಸಬೇಕು?
ಹಿಂದುಳಿದ ದಲಿತರ ಏಳ್ಗೆಗಾಗಿ ರಾಯಣ್ಣ ಬ್ರಿಗೇಡ್ ಅಂತ ಮಾಡಿದ್ದೀವಿ. ಅದರಿಂದ ಸಂಘಟನೆ ಸಾಧ್ಯ. ಹಿಂದುಳಿದ ವರ್ಗಗಳ ಸ್ವಾಮೀಜಿಗಳೆಲ್ಲ ಸೇರಿದ್ದಾರೆ. ಅಂಥ ಸಂಘಟನೆಯನ್ನು ಯಡಿಯೂರಪ್ಪನವರು ಯಾಕೆ ವಿರೋಧಿಸುತ್ತಾರೆ ಎಂಬುದು ಈಶ್ವರಪ್ಪನವರ ಪ್ರಶ್ನೆ. ಹೌದಲ್ಲವಾ? ಅಂಥ ಸಂಘಟನೆಯನ್ನು ಏಕೆ ವಿರೋಧಿಸಬೇಕು?
ಪಕ್ಷದ ಸಮಾವೇಶಗಳಿಂದ ಸಂಘಟನೆ ಸಾಧ್ಯವಿಲ್ಲವಾ?
ಈಶ್ವರಪ್ಪನವರು ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದವರು. ಬಿಜೆಪಿ ಪ್ರಮುಖ ನಾಯಕರಲ್ಲಿ ಒಬ್ಬರು. ಯಾವುದೇ ಪಕ್ಷದಲ್ಲಿ ವಿವಿಧ ಮೋರ್ಚಾಗಳಿರುತ್ತವೆ. ಅಧಿಕಾರದಲ್ಲಿರುವ ಪಕ್ಷದ ಸದಸ್ಯರಿರುತ್ತಾರೆ. ಪಕ್ಷದ ಸಮಾವೇಶಗಳು ಆಗುತ್ತವೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಶಾಸಕರನ್ನು ಒಗ್ಗೂಡಿಸಿ ಕೆಲಸ ಮಾಡಿದರೆ ಹಿಂದುಳಿದವರ, ದಲಿತರ ಉದ್ಧಾರ ಸಾಧ್ಯವಿಲ್ಲವಾ? ಅದಕ್ಕಾಗಿಯೇ ಪ್ರತ್ಯೇಕ ಬ್ರಿಗೇಡ್ ಮಾಡಲೇಬೇಕಾ? ಇದಕ್ಕೆ ಈಶ್ವರಪ್ಪನವರೂ ಉತ್ತರ ಹೇಳಬೇಕು.
ಮೋದಿ ಬಗ್ಗೆ ಇಲ್ಲದ ಅಸಮಾಧಾನ ಬಿಎಸ್ ವೈ ಬಗ್ಗೆ ಏಕೆ?
ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಜವಾಬ್ದಾರಿ ವಹಿಸಿದಾಗ ಮುಂಚೂಣಿಯಲ್ಲಿರುವವರ ಕೆಲ ನಿರ್ಧಾರಗಳು ಏಕಪಕ್ಷೀಯವಾಗಿದೆ ಎಂಬ ಅನಿಸಿಕೆ ಬರುವುದು ತುಂಬ ಸಹಜ. ಗುಜರಾತ್ ಮುಖ್ಯಮಂತ್ರಿಯಾಗಿ, ಈಗ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನೇ ಗಮನಿಸೋಣ. ಅವರ ವಿರುದ್ಧ ಪಕ್ಷದೊಳಗೆ ಭಿನ್ನಮತ ಉದ್ಭವಿಸಿದ ಸನ್ನಿವೇಶ ಇದೆಯಾ? ಇಲ್ಲದಿದ್ದರೆ ಏಕಿಲ್ಲ? ಆದರೆ ಯಡಿಯೂರಪ್ಪನವರ ಬಗ್ಗೆ ಹಲವರಿಗೆ ಅಸಮಾಧಾನವಿದೆ. ಈ ಬಗ್ಗೆ ಯಡಿಯೂರಪ್ಪನವರು ಏನಂತಾರೆ?