7th Pay Commission: ಅಧಿಕಾರಿ ವೇತನ ಸಮಿತಿಯು ಮಾಡಿದ್ದ ಶಿಫಾರಸುಗಳು
ಬೆಂಗಳೂರು, ಸೆಪ್ಟೆಂಬರ್ 30: ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ವರದಿಯಲ್ಲಿ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಹಿಂದಿನ ವೇತನ ಆಯೋಗ ಮತ್ತು ಅಧಿಕಾರಿ ವೇತನ ಸಮಿತಿಯು ಮಾಡಿದ ಶಿಫಾರಸುಗಳನ್ನು ಸಹ ಉಲ್ಲೇಖಿಸಿದೆ. ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ 558 ಪುಟಗಳ ಸಂಪುಟ-1ರ ವರದಿಯಲ್ಲಿ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನದ ಕುರಿತು ಹಲವು ಶಿಫಾರಸುಗಳನ್ನು ಮಾಡಿದೆ. ಅಧಿಕಾರಿ ವೇತನ ಸಮಿತಿ, 2011 ಕನಿಷ್ಠ ಮೂಲ ವೇತನ ಮತ್ತು ಇತರ ಭತ್ಯೆಗಳ ಕುರಿತು ಸರ್ಕಾರಕ್ಕೆ ಮಾಡಿದ್ದ ಶಿಫಾರಸುಗಳ ವಿವರಗಳನ್ನು ನೀಡಿದೆ.
ಸರ್ಕಾರ 5ನೇ ವೇತನ ಆಯೋಗದ ರಚನೆಯ ಬಳಿಕ ಅಧಿಕಾರಿ ವೇತನ ಸಮಿತಿ, 2011ರಚನೆ ಮಾಡಿತು. ಸುಬೀರ್ ಹರಿ ಸಿಂಗ್, ಭಾಆಸೇ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಇವರ ಅಧ್ಯಕ್ಷತೆಯಲ್ಲಿ ಅಧಿಕಾರಿ ವೇತನ ಸಮಿತಿಯನ್ನು ಜೂನ್ 2011ರಲ್ಲಿ ರಚಿಸಲಾಯಿತು. 6ನೇ ಕೇಂದ್ರ ವೇತನ ಆಯೋಗವು ತನ್ನ ಶಿಫಾರಸ್ಸುಗಳನ್ನು ಸಲ್ಲಿಸಿ, ಕೇಂದ್ರ ಸರ್ಕಾರವು ಈ ಶಿಫಾರಸ್ಸುಗಳನ್ನು ದಿನಾಂಕ 29.08.2008 ರಂದು ಜಾರಿಗೊಳಿಸಿದ ನಂತರದಲ್ಲಿ ಈ ಸಮಿತಿಯನ್ನು ರಚಿಸಲಾಯಿತು.

ಈ ಅಧಿಕಾರಿ ವೇತನ ಸಮಿತಿಯ ಎಲ್ಲಾ ಶಿಫಾರಸುಗಳನ್ನು ರಾಜ್ಯ ಸರ್ಕಾರವು ಅಂಗೀಕರಿಸಿ, ದಿನಾಂಕ 01.04.2012 ರಿಂದ ಅನ್ವಯವಾಗುವಂತೆ ಜಾರಿಗೊಳಿಸಿತು. ಈ ಸಮಿತಿಯ ಮುಖ್ಯ ಶಿಫಾರಸ್ಸುಗಳು
* ರಾಜ್ಯ ಸರ್ಕಾರವು ತನ್ನದೇ ಆದ ವೇತನ ಪದ್ದತಿಯನ್ನು ಮುಂದುವರಿಸುವುದು ಮುಖ್ಯ ವೇತನ ಶ್ರೇಣಿಯ 91 ಹಂತಗಳ ಪರಿಕಲ್ಪನೆಯನ್ನು ಹಾಗೂ ಮುಖ್ಯ ಶ್ರೇಣಿಯಿಂದ ವಿಭಾಗ ಮಾಡಲಾದ ಜಾರಿಯಲ್ಲಿರುವ 25 ವೇತನ ಶ್ರೇಣಿಗಳನ್ನು ಹಾಗೆ ಉಳಿಸಿಕೊಳ್ಳುವುದು.
* ಹೊಸ ವೇತನ ರಚನೆಯು ದಿನಾಂಕ 01.01.2012 ರಲ್ಲಿದ್ದಂತೆ (ಮೂಲ 2001=100). ಏಐಎಸಿಪಿಐ ಸೂಚ್ಯಂಕ 191.5 ಅಂಶಗಳಿಗೆ ಸಂಬಂಧಿಸಿರುತ್ತದೆ.
* ಕನಿಷ್ಠ ವೇತನವನ್ನು ರೂ. 4,800 ರಿಂದ ರೂ. 9,600ರವರೆಗೆ ಹೆಚ್ಚಿಸುವುದು
* ಗರಿಷ್ಠ ವೇತನವನ್ನು ರೂ. 39,900 ರಿಂದ ರೂ. 79,800ಕ್ಕೆ ಹೆಚ್ಚಿಸುವುದು
* ದಿನಾಂಕ 01.04.2012 ರಿಂದ ಪರಿಷ್ಕೃತ ವೇತನವನ್ನು ನಿಗದಿಗೊಳಿಸುವುದು, ದಿನಾಂಕ 01.01.2012 ರಂದು ಇದ್ದ ಶೇ.7675 ರಷ್ಟು ತುಟ್ಟಿ ಭತ್ಯೆಯನ್ನು ವಿಲೀನಗೊಳಿಸುವುದು, ಮತ್ತು ಮೂಲ ವೇತನದ ಶೇ 22.5 ರಷ್ಟು ವೇತನ ಹೆಚ್ಚಳದ (Fitment benefit) ಸೌಲಭ್ಯ ಒದಗಿಸುವುದು.
* ಜಾರಿಯಲ್ಲಿರುವ ವೇತನ ಬಡ್ತಿ ದರಗಳನ್ನು ದ್ವಿಗುಣಗೊಳಿಸುವುದು. ಪರಿಷ್ಕೃತ ವೇತನ ಶ್ರೇಣಿಗಳು ದಿನಾಂಕ 01.04.2012 ರಿಂದ ಜಾರಿಗೆ ಬರುವುದು.
ಈ ಸಮಿತಿಯು ದಿನಾಂಕ 01.04.2012 ರಿಂದ ಅನ್ವಯವಾಗುವಂತೆ ಭತ್ಯೆಗಳು ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಹಲವಾರು ಶಿಫಾರಸ್ಸುಗಳನ್ನು ಮಾಡಿದೆ. ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಐದು ದಿನಗಳ ಕೆಲಸದ ಅವಧಿಯನ್ನು ಪರಿಚಯಿಸಲು ಸಹ ಶಿಫಾರಸು ಮಾಡಿತು. ಆದರೆ, ಈ ಶಿಫಾರಸು ಅಂಗೀಕೃತವಾಗಿರುವುದಿಲ್ಲ.
ಇತರ ಕೆಲವು ಶಿಫಾರಸುಗಳೆಂದರೆ: ಪಾವತಿಸಬಹುದಾದ ಮನೆ ಬಾಡಿಗೆ ಭತ್ಯೆ ದರಗಳನ್ನು ನಿರ್ಧರಿಸುವುದಕ್ಕಾಗಿ ನಗರಗಳು/ ಪಟ್ಟಣಗಳು/ ಇತರ ಸ್ಥಳಗಳ ವರ್ಗೀಕರಣವನ್ನು ಆರು ಗುಂಪುಗಳಿಂದ ನಾಲ್ಕು ಗುಂಪುಗಳಿಗೆ ಇಳಿಸಲಾಯಿತು ಮತ್ತು ಕನಿಷ್ಕ ಮನೆ ಬಾಡಿಗೆ ಭತ್ಯೆಯನ್ನು ಶೇ.6 ರಿಂದ ಶೇ.7ಕ್ಕೆ ಹೆಚ್ಚಿಸಿತು.
ಗ್ರಾಮೀಣ ಭತ್ಯೆ ರೂ.100 ಅನ್ನು ರದ್ದುಪಡಿಸುವುದು. ಗಳಿಕೆ ರಜೆ ಸಂಗ್ರಹಣೆಯ ಮಿತಿ ಮತ್ತು ನಿವೃತ್ತಿಯ ಸಂದರ್ಭದಲ್ಲಿ ಗಳಿಕೆ ರಜೆ ನಗದೀಕರಣ ಮಿತಿಯನ್ನು 240 ದಿನಗಳಿಂದ 300 ದಿನಗಳಿಗೆ ಹೆಚ್ಚಿಸುವುದು. ಪ್ರತಿ ವರ್ಷ 15 ದಿನಗಳವರೆಗಿನ ಗಳಿಕೆ ರಜೆ ನಗದೀಕರಣವನ್ನು ಪರಿಚಯಿಸಿತು. ರಜೆ ಪ್ರಯಾಣ ರಿಯಾಯಿತಿಯನ್ನು ಸೇವಾವಧಿಯಲ್ಲಿ ಎರಡು ಬಾರಿಗೆ ಮಂಜೂರು ಮಾಡಿತು. ಮಾತೃತ್ವ ರಜೆ ಅವಧಿಯನ್ನು 135 ದಿನಗಳಿಂದ 180 ದಿನಗಳಿಗೆ ಹೆಚ್ಚಿಸುವುದು.
ಸರ್ಕಾರಿ ನೌಕರರು ಯಾವುದೇ ಮುಂಬಡ್ತಿಯಿಲ್ಲದ ಒಂದೇ ಹುದ್ದೆಯಲ್ಲಿ 25 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದರೆ ಅವರಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ಹಾಗೂ ಮತ್ತೂ ಐದು ವರ್ಷಗಳು (ಒಟ್ಟಾರೆಯಾಗಿ 30 ವರ್ಷಗಳು) ಮತ್ತು ಮೇಲ್ಪಟ್ಟು ಮುಂಬಡ್ತಿಯಿಲ್ಲದ ಒಂದೇ ಹುದ್ದೆಯಲ್ಲಿ ಸ್ಥಗಿತಗೊಂಡು 30 ಅಥವಾ ಮೇಲ್ಪಟ್ಟು ವರ್ಷಗಳ ಸೇವೆ ಸಲ್ಲಿಸಿದವರಿಗೆ ಮತ್ತೊಂದು ವೇತನ ಬಡ್ತಿಯನ್ನು ನೀಡುವುದು. ಸ್ಥಗಿತ ವೇತನ ಬಡ್ತಿಯನ್ನು ಐದರಿಂದ ಎಂಟಕ್ಕೆ ಹೆಚ್ಚಿಸಿತು.
ವಿಶೇಷ ಚೇತನ ಸಿಬ್ಬಂದಿಗೆ ಅಥವಾ ಸಿಬ್ಬಂದಿಯ ಅವಲಂಬಿತ ವಿಶೇಷಚೇತನರಿಗೆ ಹಲವಾರು ಸೌಲಭ್ಯಗಳನ್ನು ಪರಿಚಯಿಸಲಾಯಿತು. ಚಲನವಲನ ವೈಕಲ್ಯ ಮತ್ತು ಅಂಧ ನೌಕರರಿಗೆ ಮೂಲ ವೇತನದ ಶೇ.6 ರಷ್ಟು ವಾಹನ ಭತ್ಯೆ, ವಾಹನ/ ಯಾಂತ್ರೀಕೃತ ವಾಹನ ಖರೀದಿಗಾಗಿ ಸೇವಾವಧಿಯಲ್ಲಿ ಒಮ್ಮೆ, ರೂ.25,000 ಗಳ ಗರಿಷ್ಠ ಮಿತಿಯ ಷರತ್ತಿಗೊಳಪಟ್ಟು ವಾಹನ ದರದ ಶೇ.25 ರಷ್ಟು ಮರುಪಾವತಿ, ಇಬ್ಬರು ವಿಶೇಷ ಚೇತನ ಮಕ್ಕಳಿಗೆ ಶೈಕ್ಷಣಿಕ ಭತ್ಯೆ, ಶಾಲೆಗೆ ಹೋಗಲು ಸಾಧ್ಯವಾಗದಿರುವ ಇಬ್ಬರು ವಿಶೇಷ ಚೇತನ ಮಕ್ಕಳನ್ನು ಪೋಷಿಸಲು ಭತ್ಯೆ ಮತ್ತು ವಿಶೇಷ ಚೇತನ ಸರ್ಕಾರಿ ನೌಕರರಿಗೆ ಐಚ್ಛಿಕ ಕೆಲಸದ ವೇಳೆ (ಫ್ಲೆಕ್ಸಿ ಟೈಮ್) ಸೌಲಭ್ಯವನ್ನು ನೀಡಲಾಗಿದೆ.
ಸಮಿತಿಯು ಕೂಲಂಕಷ ಪರಿಶೀಲನೆಯ ನಂತರ ನಿವೃತ್ತಿ ವೇತನ ಸೌಲಭ್ಯಗಳನ್ನು ಸಹ ಈ ಕೆಳಕಂಡಂತೆ ಗಮನಾರ್ಹವಾಗಿ ಮಾರ್ಪಡಿಸಿತು. ಕನಿಷ್ಠ ಮತ್ತು ಗರಿಷ್ಠ ನಿವೃತ್ತಿ ವೇತನವು ಕ್ರಮವಾಗಿ ಮಾಸಿಕ ರೂ. 4,800 ಮತ್ತು ಮಾಸಿಕ ರೂ.39,900 ಗಳಿಗೆ ಹೆಚ್ಚಿಸುವುದು ಕನಿಷ್ಠ ಮತ್ತು ಗರಿಷ್ಠ ಕುಟುಂಬ ನಿವೃತ್ತಿ ವೇತನವು ಕ್ರಮವಾಗಿ ಮಾಸಿಕ ರೂ. 4,800 ಮತ್ತು ಮಾಸಿಕ ರೂ. 23,940 ಗಳಿಗೆ ಹೆಚ್ಚಿಸುವುದು. ಮರಣ ಮತ್ತು ನಿವೃತ್ತಿ ಉಪದಾನದ ಮಿತಿಯನ್ನು ರೂ. 6 ಲಕ್ಷಗಳಿಂದ ರೂ.10.00 ಲಕ್ಷಗಳಿಗೆ ಹೆಚ್ಚಿಸುವುದು.












Click it and Unblock the Notifications