ಪಂಚ ರಾಜ್ಯಗಳ ಫಲಿತಾಂಶ : ಕರ್ನಾಟಕದ ಸಮ್ಮಿಶ್ರ ಸರ್ಕಾರ ನಿರಾಳ!
Recommended Video
ಬೆಂಗಳೂರು, ಡಿಸೆಂಬರ್ 11 : ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಫಲಿತಾಂಶದಿಂದ ನಿರಾಳವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಫಲಿತಾಂಶ ಶಕ್ತಿ ತುಂಬಿದೆ.
ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡುವ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನಕ್ಕೆ ತಡೆ ಬಿದ್ದಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಿರಾಳರಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಹ ಹೊಸ ಹುರುಪಿನೊಂದಿಗೆ ಲೋಕಸಭೆ ಚುನಾವಣೆ ತಯಾರಿಯನ್ನು ಬಿರುಸುಗೊಳಿಸಲಿದೆ.
ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ : ಸೋಲಿಗೆ 5 ಕಾರಣಗಳು
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿರುವುದು 2019ರ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ, ಪಕ್ಷ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಚುನಾವಣಾ ತಂತ್ರವನ್ನು ಬದಲಾವಣೆ ಮಾಡಲಾಗಿದೆ.
ಸಮೀಕ್ಷೆಗಳಿಗೂ ಅಚ್ಚರಿ ಮೂಡಿಸಿದ ತೆಲಂಗಾಣ ಫಲಿತಾಂಶ
ಒಂದು ವೇಳೆ 5 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ ಕರ್ನಾಟಕದಲ್ಲಿಯೂ ಬಿಜೆಪಿ ಅಧಿಕಾರ ಹಿಡಿಯಲು ಪ್ರಯತ್ನ ನಡೆಸುತ್ತಿತ್ತು. ಆದರೆ, ಈಗ ಆ ಪ್ರಕ್ರಿಯೆಗೆ ತಡೆ ಬಿದ್ದಿದೆ. ಯಡಿಯೂರಪ್ಪ ಅವರ ಮುಖ್ಯಮಂತ್ರಿ ಕನಸು ಸದ್ಯಕ್ಕೆ ಈಡೇರುವುದಿಲ್ಲ.
15 ವರ್ಷದ ಬಳಿಕ ಛತ್ತೀಸ್ ಗಢದಲ್ಲಿ ಮುಗ್ಗರಿಸಿದ ಬಿಜೆಪಿ
ಕುಮಾರಸ್ವಾಮಿ ನಿರಾಳ
ಪಂಚ ರಾಜ್ಯಗಳ ಫಲಿತಾಂಶದ ಬಳಿಕ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಇದರಿಂದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಿರಾಳರಾಗಿದ್ದಾರೆ. ಪ್ರತಿಪಕ್ಷ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ.
ಆಪರೇಷನ್ ಕಮಲ ಇಲ್ಲ
ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆಸಿ ಅಧಿಕಾರ ಹಿಡಿಯುವ ಪ್ರಯತ್ನಕ್ಕೆ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಲಿದೆ. ಐದು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಪಡೆದಿದ್ದರೆ, ದಕ್ಷಿಣ ಭಾರತದ ಮುಖ್ಯ ರಾಜ್ಯವಾದ ಕರ್ನಾಟಕದಲ್ಲಿ ಸರ್ಕಾರವನ್ನು ಅಭದ್ರಗೊಳಿಸು ಪ್ರಯತ್ನ ಆರಂಭಗೊಳ್ಳುವ ನಿರೀಕ್ಷೆ ಇತ್ತು.
ಕಾಂಗ್ರೆಸ್ ನಾಯಕರಿಗೆ ನೆಮ್ಮದಿ
ಕರ್ನಾಟಕದ ಕಾಂಗ್ರೆಸ್ ನಾಯಕರು ಸಹ ಫಲಿತಾಂಶದಿಂದ ನೆಮ್ಮದಿಯಾಗಿದ್ದಾರೆ. ಏಕೆಂದರೆ ಬೇರೆ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ಹೈಕಮಾಂಡ್ ನಾಯಕರು ಕರ್ನಾಟಕವನ್ನು ಅವಲಂಬಿಸುವುದು ತಪ್ಪಲಿದೆ. ಪಾರ್ಟಿ ಫಂಡ್ ಸೇರಿದಂತೆ ಇತರ ವೆಚ್ಚಗಳಿಗೆ ಈಗ ಬೇರೆ ರಾಜ್ಯಗಳು ಕೈ ಜೋಡಿಸಲಿವೆ.
ಬಿಜೆಪಿ ನಾಯಕರಿಗೆ ಟಾಸ್ಕ್
ಬಿಜೆಪಿ ಪಂಚ ರಾಜ್ಯಗಳ ಸೋಲನ್ನು ಗಂಭೀರವಾಗಿ ಪರಿಗಣಿಸಲಿದೆ. 2019ರ ಚುನಾವಣೆಯ ಕಾರ್ಯತಂತ್ರವನ್ನು ಬದಲಾವಣೆ ಮಾಡಲಿದೆ. ಆದ್ದರಿಂದ, ಕರ್ನಾಟಕದ ಬಿಜೆಪಿ ನಾಯಕರಿಗೆ ಹೊಸ ಟಾಸ್ಕ್ ನೀಡುವ ಸಾಧ್ಯತೆ ಇದೆ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಬಿಟ್ಟು, ಲೋಕಸಭೆ ಚುನಾವಣೆಯತ್ತ ಗಮನಹರಿಸಲು ಸೂಚನೆ ನೀಡಲಿದ್ದಾರೆ.
ಮಹಾಘಟ್ ಬಂಧನ್ ಇನ್ನಷ್ಟು ಗಟ್ಟಿ
ಪಂಚ ರಾಜ್ಯಗಳ ಚುನಾವಣೆಯಿಂದ ಕಾಂಗ್ರೆಸ್ಗೆ ಮತ್ತಷ್ಟು ಬಲ ಬಂದಿದೆ. ಇದರಿಂದಾಗಿ ಬಿಜೆಪಿ ವಿರುದ್ಧದ ಮಹಾಘಟಬಂಧನ್ಗೆ ಮತ್ತಷ್ಟು ಶಕ್ತಿ ಬಂದಿದೆ. ಕರ್ನಾಟಕದ ಜೆಡಿಎಸ್, ಕಾಂಗ್ರೆಸ್ ಮೈತ್ರಿಕೂಟ ಬಿಜೆಪಿ ವಿರೋಧಿ ಪಾಳಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಬಿಜೆಪಿಗೆ ಪಾಠ
ಪಂಚ ರಾಜ್ಯಗಳ ಫಲಿತಾಂಶದ ಬಳಿಕ ಬಿಜೆಪಿ ಯುವ ನಾಯಕರಿಗೆ ಮಣೆ ಹಾಕುವ ಅನಿವಾರ್ಯತೆ ಎದುರಾಗಿದೆ. ಸ್ಥಳೀಯ ನಾಯಕರನ್ನು ಕಡೆಗಣಿಸಿದರೆ, ಯುವಕರಿಗೆ ಆದ್ಯತೆ ನೀಡದಿದ್ದರೆ ಸೋಲು ಉಂಟಾಗಲಿದೆ ಎನ್ನುವುದು ಅರಿವಾಗಿದೆ. ಆದ್ದರಿಂದ, ರಾಜ್ಯದಲ್ಲಿಯೂ ಹೊಸ ಮುಖಗಳಿಗೆ ಆದ್ಯತೆ ಸಿಗುವ ಸಾಧ್ಯತೆ ಇದೆ.