ಕರ್ನಾಟಕದಿಂದ ವಲಸೆ ಕಾರ್ಮಿಕರನ್ನು ವಾಪಸ್ ಕಳಿಸಲು 4 ರಾಜ್ಯ ಒಪ್ಪಿಲ್ಲ
ಬೆಂಗಳೂರು, ಮೇ 11 : ಕರ್ನಾಟಕ ಸರ್ಕಾರ ವಸಲೆ ಕಾರ್ಮಿಕರನ್ನು ವಾಪಸ್ ಕಳಿಸಲು ಎಲ್ಲಾ ರಾಜ್ಯಗಳ ಜೊತೆ ಸಂಪರ್ಕದಲ್ಲಿದೆ. ಆದರೆ, ಕೆಲವು ರಾಜ್ಯಗಳು ಕರ್ನಾಟಕ ಸಲ್ಲಿಸಿರುವ ಮನವಿಗೆ ಇನ್ನೂ ಉತ್ತರ ನೀಡಿಲ್ಲ. ಆದ್ದರಿಂದ, ಆ ರಾಜ್ಯಗಳ ಕಾರ್ಮಿಕರು ರಾಜ್ಯದಲ್ಲಿಯೇ ಉಳಿದಿದ್ದಾರೆ.
ರಾಜಸ್ಥಾನ, ಒಡಿಶಾ, ಮಿಜೋರಾಂ, ಮಣಿಪುರ ರಾಜ್ಯಗಳು ಕರ್ನಾಟಕ ಸಲ್ಲಿಸಿರುವ ಮನವಿಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ ರಾಜ್ಯಗಳ ವಲಸೆ ಕಾರ್ಮಿಕರು ಲಾಕ್ ಡೌನ್ ಪರಿಣಾಮ ಕೆಲಸ ಕಳೆದುಕೊಂಡಿದ್ದು, ಇಲ್ಲಿಯೇ ಸಿಲುಕಿದ್ದಾರೆ.
ಈ ನಾಲ್ಕು ರಾಜ್ಯಗಳಿಂದ ಸುಮಾರು 40 ಸಾವಿರ ವಲಸೆ ಕಾರ್ಮಿಕರು ಕರ್ನಾಟಕದಲ್ಲಿದ್ದಾರೆ. ಇವರನ್ನು ವಾಪಸ್ ಕಳಿಸುವ ಕುರಿತು ಕರ್ನಾಟಕ ಸರ್ಕಾರ ಈಗಾಗಲೇ ಆಯಾ ರಾಜ್ಯಗಳಿಗೆ ಮನವಿಯನ್ನು ಸಲ್ಲಿಸಿದೆ. ಆದರೆ, ಯಾವುದೇ ಉತ್ತರ ಬಂದಿಲ್ಲ.

ಕರ್ನಾಟಕದಲ್ಲಿರುವ ಈ ಕಾರ್ಮಿಕರು ತಮ್ಮ ರಾಜ್ಯಗಳಿಗೆ ವಾಪಸ್ ತೆರಳಲು ಕರ್ನಾಟಕ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ತವರು ರಾಜ್ಯದಿಂದ ಒಪ್ಪಿಗೆ ಸಿಕ್ಕ ಬಳಿಕವೇ ಅವರನ್ನು ವಾಪಸ್ ಕಳಿಸಲಾಗುತ್ತದೆ. ಆದ್ದರಿಂದ, ಸರ್ಕಾರ ಉತ್ತರಕ್ಕಾಗಿ ಕಾಯುತ್ತಿದೆ.
ರಾಜಸ್ಥಾನ ಸರ್ಕಾರ ಒಂದು ರೈಲಿನಲ್ಲಿ ಬಂದ ವಲಸೆ ಕಾರ್ಮಿಕರನ್ನು ಬರಮಾಡಿಕೊಂಡಿತು. ರಾಜ್ಯದಲ್ಲಿ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಳವಾದ ಕಾರಣ ಉಳಿದ ಕಾರ್ಮಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.
ಮೇ 5ರಂದು 2 ಸಾವಿರ ಕಾರ್ಮಿಕರು ರಾಜಸ್ಥಾನಕ್ಕೆ ವಾಪಸ್ ಆದರು. ಮೇ 7ರಂದು 2ನೇ ಬ್ಯಾಚ್ನಲ್ಲಿ ಕಾರ್ಮಿಕರನ್ನು ವಾಪಸ್ ಕಳಿಸುವ ಸಂಬಂಧ ಕರ್ನಾಟಕ ಸಲ್ಲಿಸಿದ್ದ ಮನವಿಗೆ ಇನ್ನು ಅಲ್ಲಿನ ಸರ್ಕಾರ ಸ್ಪಂದಿಸಿಲ್ಲ. ಹಾಗಾಗಿ ಕಾರ್ಮಿಕರ ಸಂಚಾರ ಸಾಧ್ಯವಿಲ್ಲ.
ಒಡಿಶಾ ಮತ್ತು ರಾಜಸ್ಥಾನದ ಸುಮಾರು 35 ಸಾವಿರ ಕಾರ್ಮಿಕರು ತವರಿಗೆ ಮರಳಲು ನೋಂದಣಿ ಮಾಡಿಸಿದ್ದಾರೆ. ಪಶ್ಚಿಮ ಬಂಗಳಾ, ಬಿಹಾರ, ಮಧ್ಯಪ್ರದೇಶ ಸೇರಿದಂತೆ ಉಳಿದ ರಾಜ್ಯಗಳು ಕಾರ್ಮಿಕರನ್ನು ವಾಪಸ್ ಕಳಿಸಲು ಒಪ್ಪಿಗೆ ನೀಡಿವೆ.
ರಾಜ್ಯಗಳು ಸ್ಪಂದಿಸದ ಕಾರಣ ಕೆಲವು ರಾಜ್ಯಗಳ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಇಲ್ಲಿ ಕೆಲಸವಿಲ್ಲ, ಊಟ, ನೀರಿಗೂ ಪರದಾಡುತ್ತಿದ್ದಾರೆ. ಆಯಾ ರಾಜ್ಯಗಳು ಒಪ್ಪಿಗೆ ಕೊಟ್ಟರೆ ಶ್ರಮಿಕ್ ವಿಶೇಷ ರೈಲಿನ ಮೂಲಕ ಅವರನ್ನು ವಾಪಸ್ ಕಳಿಸಲಾಗುತ್ತದೆ.












Click it and Unblock the Notifications