ಮೈಸೂರು ಸ್ಯಾಂಡಲ್ ಸೋಪ್ನಲ್ಲಿ ಹಗರಣದ ವಾಸನೆ
ಬೆಂಗಳೂರು, ಅ.10 : ಸುಪ್ರಸಿದ್ಧ ಮೈಸೂರು ಸ್ಯಾಂಡಲ್ ಸೋಪ್ನಲ್ಲಿ ಹಗರಣದ ವಾಸನೆ ಬರುತ್ತಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್ಡಿಎಲ್) ಸೋಪು ತಯಾರಿಕೆ ಸಾಮಾಗ್ರಿಗಳ ಖರೀದಿಯಲ್ಲಿ 4.63 ಕೋಟಿ ರೂ. ಅವ್ಯವಹಾರ ಮಾಡಿದ್ದು, ಹಗರಣಕ್ಕೆ ಸಂಬಂಧಿಸಿದಂತೆ ಹಣಕಾಸು ವಿಭಾಗದ ಉಪ ಮಹಾಪ್ರಬಂಧಕರನ್ನು ಅಮಾನತುಗೊಳಿಸಲಾಗಿದೆ.
ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಗಾಗಿ ಕಚ್ಚಾ ವಸ್ತುಗಳನ್ನು ಖರೀದಿ ಮಾಡಲು ಕೆಎಸ್ಡಿಎಲ್ 4.63 ಕೋಟಿ ರೂ. ಪಾವತಿ ಮಾಡಿದೆ. ಆದರೆ, ಈ ಕಚ್ಚಾವಸ್ತುಗಳು ಸೋಪು ತಯಾರಿಸುವ ಘಟಕಗಳನ್ನು ತಲುಪಿಲ್ಲ. ಕರ್ನಾಟಕ ಸರ್ಕಾರದ ಒಡೆತನದ ಕೆಎಸ್ಡಿಎಲ್ನಲ್ಲಿ ನಡೆದಿರುವ ಈ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ನೀಡಲಾಗಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಕೆಎಸ್ಡಿಎಲ್ ಹಣಕಾಸು ವಿಭಾಗದ ಉಪ ಮಹಾಪ್ರಬಂಧಕರನ್ನು ಅಮಾನತು ಮಾಡಲಾಗಿದೆ. ಹಗರಣದಲ್ಲಿ ಭಾಗಿಯಾಗಿರುವ ಎರಡು ಬ್ಯಾಂಕ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರ್ಬಿಐಗೆ ಕೆಎಸ್ಡಿಎಲ್ ಪತ್ರ ಬರೆದಿದೆ. ಕೆಎಸ್ಡಿಎಲ್ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಈಗಾಗಲೇ ಈ ಕುರಿತು ಎರಡು ಸುತ್ತಿನ ಮಾತುಕತೆ ನಡೆದಿದೆ.
ಕೆಎಸ್ಡಿಎಲ್ ಎಂಡಿ ಎ.ಸಿ.ಕೇಶವಮೂರ್ತಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಒಂದು ವರ್ಷದ ಹಿಂದೆ ಹಗರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಆತಂರಿಕವಾಗಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗಿದೆ. ಈ ಕುರಿತು ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಎರಡು ಬ್ಯಾಂಕ್ಗಳ ಮೂಲಕ ಹಣ ಪಾವತಿಯಾಗಿದ್ದು, ಆ ಬ್ಯಾಂಕ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಆರ್ಬಿಐಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications