ರಾಜೀನಾಮೆಗೆ ಸಿದ್ದವಾಗಿದ್ದಾರೆ ಜೆಡಿಎಸ್ನ 4-5 ಶಾಸಕರು?
ಬೆಂಗಳೂರು, ಜುಲೈ 01: ಆನಂದ್ ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೆ ರಾಜ್ಯದಲ್ಲಿ ರಾಜೀನಾಮೆ ಪರ್ವ ಪ್ರಾರಂಭವಾಗುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಅದಕ್ಕೆ ಪೂರಕವೆಂಬಂತೆ ಜೆಡಿಎಸ್ ಹಿರಿಯ ಮುಖಂಡ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ನ ನಾಲ್ಕೈದು ಶಾಸಕರು ರಾಜೀನಾಮೆ ನೀಡುವವರಿದ್ದಾರೆ ಎಂದು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.
ಇಂದು ಕೊಲ್ಕತ್ತಕ್ಕೆ ತೆರಳಿದ ವಿಶ್ವನಾಥ್ ಅವರು, ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೀಗೊಂದು ಸ್ಪೋಟಕ ಮಾಹಿತಿ ಹೊರಗೆಡವಿದ್ದಾರೆ. ಶಾಸಕರು ರಾಜೀನಾಮೆ ನೀಡುತ್ತಾರೆ ಎಂದು ಹೇಳಿದ್ದಾರಾದರೂ ಯಾವ ಶಾಸಕರು ರಾಜೀನಾಮೆ ನೀಡುತ್ತಾರೆ ಎಂದು ಹೇಳಿಲ್ಲ.
ವಿಶ್ವನಾಥ್ ಅವರ ಹೇಳಿಕೆಯ ಬೆನ್ನಲ್ಲೆ ಜೆಡಿಎಸ್ನಲ್ಲಿ ಆಂತರಿಕ ಎಚ್ಚರಿಕೆ ವಹಿಸಲಾಗಿದ್ದು, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಎಲ್ಲ ಜೆಡಿಎಸ್ ಶಾಸಕರನ್ನು ಸಂಪರ್ಕಿಸಿ ಮಾತನಾಡಿದ್ದಾರೆ ಎನ್ನಲಾಗಿದೆ.

ದೂರವಾಣಿ ಕರೆ ಮಾಡಿರುವ ಕುಮಾರಸ್ವಾಮಿ
ಕುಮಾರಸ್ವಾಮಿ ಅವರು ಸಹ ಅಮೆರಿಕದಿಂದಲೇ ಅತೃಪ್ತ ಶಾಸಕರಿಗೆ ಕರೆ ಮಾಡಿ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷದ ಅತೃಪ್ತ ಶಾಸಕರೊಂದಿಗೆ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇಬ್ಬರು ಶಾಸಕರು ಒಂದೇ ದಿನ ರಾಜೀನಾಮೆ
ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಅವರು ಧಿಡೀರನೆ ರಾಜೀನಾಮೆ ನೀಡಿರುವ ಕಾರಣ ಮೈತ್ರಿ ಸರ್ಕಾರ ಆತಂಕದಲ್ಲಿದ್ದು, ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡುವ ಆತಂಕದಲ್ಲಿ ಮಿತ್ರ ಪಕ್ಷಗಳ ಮುಖಂಡರು ಇದ್ದಾರೆ. ಹಾಗಾಗಿ ತಂತಮ್ಮ ಅತೃಪ್ತ ಶಾಸಕರ ಮೇಲೆ ಪಕ್ಷದ ಮುಖಂಡರು ನಿಗಾವಹಿಸಿದ್ದಾರೆ.

ಜೆಡಿಎಸ್ನಲ್ಲಿ ಅತೃಪ್ತ ಶಾಸಕರು ಇಲ್ಲ ಎನ್ನಲಾಗಿತ್ತು
ಜೆಡಿಎಸ್ ಪಕ್ಷದ ಶಾಸಕರಲ್ಲಿ ಅತೃಪ್ತತೆ ಇಲ್ಲವೆಂದು ಹೇಳಲಾಗುತ್ತಿತ್ತು, ಆದರೆ ಸ್ವತಃ ಪಕ್ಷದ ಹಿರಿಯ ಎಚ್.ವಿಶ್ವನಾಥ್ಅ ವರೇ ಜೆಡಿಎಸ್ನ ನಾಲ್ಕೈದು ಶಾಸಕರು ರಾಜೀನಾಮೆ ನೀಡಬಹುದು ಎಂದು ಹೇಳಿರುವುದು ದೇವೇಗೌಡ-ಕುಮಾರಸ್ವಾಮಿ ಅವರಿಗೆ ಆತಂಕ ತಂದಿದೆ.

ಪ್ರವಾಸ ಮೊಟಕುಗೊಳಿಸುವ ಸಾಧ್ಯತೆ
ಅಮೆರಿಕ ಪ್ರವಾಸದಲ್ಲಿರುವ ಕುಮಾರಸ್ವಾಮಿ ಅವರು ತಮ್ಮ ಪ್ರವಾಸವನ್ನು ಮೊಟಕುಗೊಳಿಸುವ ಸಾಧ್ಯತೆ ಇದೆ. ಕುಮಾರಸ್ವಾಮಿ ಅವರು ಎಂಟು ದಿನದ ಪ್ರವಾಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದು, ದೇವಾಲಯ ಶಂಕುಸ್ಥಾಪನೆ, ಒಕ್ಕಲಿಗರ ಸಮಾವೇಶದಲ್ಲಿ ಭಾಗಿ ಸೇರಿ ಇನ್ನೂ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ರಾಜಕೀಯ ಧಿಡೀರ್ ಬೆಳವಣಿಗೆಗಳಿಂದಾಗಿ ಅವರು ಪ್ರವಾಸ ಮೊಟಕುಗೊಳಿಸುವ ಸಾಧ್ಯತೆ ಇದೆ.












Click it and Unblock the Notifications