ಬಿಜೆಪಿ ಪ್ರಚಾರ ಜಾಹೀರಾತಿಗೆ 4.5 ಕೋಟಿ ರೂ. ವೆಚ್ಚ; ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು, ಅ.24 : ಬಿಜೆಪಿ ಸರ್ಕಾರ 5 ನಿಮಿಷಗಳ ಜಾಹೀರಾತು ಚಲನಚಿತ್ರಕ್ಕಾಗಿ 4.5 ಕೋಟಿ ರೂಪಾಯಿ ವೆಚ್ಚ ಮಾಡಿರುವ ವರದಿ ಬೆನ್ನಲ್ಲೇ ಕಾಂಗ್ರೆಸ್ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮ್ಮೇಳನ (ಜಿಐಎಂ) ಪ್ರಚಾರಕ್ಕಾಗಿ ಬಿಜೆಪಿ ಸರ್ಕಾರ 5 ನಿಮಿಷಗಳ ಜಾಹೀರಾತು ಚಲನಚಿತ್ರಕ್ಕಾಗಿ 4.5 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ವರದಿಯಾಗಿದೆ.
ಬಿಜೆಪಿಯವರಿಗೆ ಮಾನವೀಯತೆ ಇದೆಯಾ?, ದಾವಣಗೆರೆಯಲ್ಲಿ ಸಿದ್ದರಾಮಯ್ಯ ಪ್ರಶ್ನೆ
ರಾಜ್ಯದಲ್ಲಿ ಉದ್ಯೋಗ ಕಲ್ಪಿಸುವಲ್ಲಿ ವಿಫಲವಾಗಿರುವ ಸರ್ಕಾರ ಪ್ರಚಾರಕ್ಕಾಗಿ ದುಂದು ವೆಚ್ಚ ಮಾಡುತ್ತಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಮ್ಯುನಿಕೇಷನ್ಸ್ ಅಧ್ಯಕ್ಷರಾಗಿರುವ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ನಲ್ಲಿ, "ಮೋದಿಜಿಯವರ ಕಾರ್ಯಶೈಲಿಯ ಎಳೆಯನ್ನು ತೆಗೆದುಕೊಂಡಿರುವ ರಾಜ್ಯ ಕೈಗಾರಿಕಾ ಇಲಾಖೆಯು 5 ನಿಮಿಷಗಳ ಪ್ರಚಾರದ ಚಿತ್ರಕ್ಕಾಗಿ 4.5 ಕೋಟಿ ರೂಪಾಯಿ ಖರ್ಚು ಮಾಡಿದೆ" ಎಂದು ಆರೋಪಿಸಿದ್ದಾರೆ.
"ಇಲಾಖೆಯು ಕಳೆದ 3 ವರ್ಷಗಳಿಂದ ಯಾವುದೇ ಉದ್ಯೋಗಗಳನ್ನು ಸೃಷ್ಟಿಸಲು ವಿಫಲವಾಗಿದೆ. ಈಗ ಜನರನ್ನು ದಾರಿತಪ್ಪಿಸಲು ಇಂತಹ ಬೆಣ್ಣೆ ಸವರುವ ಪ್ರೋಮೋಗಳನ್ನು ಅವಲಂಬಿಸಿದೆ" ಎಂದು ಕಿಡಿ ಕಾರಿದ್ದಾರೆ.
ವರದಿಯೊಂದರ ಪ್ರಕಾರ ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಚಿವ ಮುರುಗೇಶ್ ನಿರಾಣಿ ಅವರು ಅಕ್ಟೋಬರ್ 21 ರಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ ವಿ ರಮಣ ರೆಡ್ಡಿ ಅವರಿಗೆ ಪತ್ರ ಬರೆದಿದ್ದು, 5 ನಿಮಿಷಗಳ ಅವಧಿಯ ಜಾಹೀರಾತಿಗೆ 4.5 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ತಿಳಿಸಿದ್ದಾರೆ.
ಜೊತೆಗೆ ನಿರ್ಮಾಣ ಕಂಪನಿಯೊಂದಿಗಿನ ಒಪ್ಪಂದವನ್ನು ರದ್ದುಗೊಳಿಸುವಂತೆ ಸಚಿವ ಮುರುಗೇಶ್ ನಿರಾಣಿ ಅಧಿಕಾರಿಗೆ ತಿಳಿಸಿದ್ದಾರೆ. "ಹೆಚ್ಚಿನ ವೆಚ್ಚವಾಗುವ ಇಂತಹ ಕೆಲಸದ ಆದೇಶವು ಪ್ರಸ್ತುತ ಆರ್ಥಿಕ ಸ್ಥಿತಿಯಲ್ಲಿ ಸೂಕ್ತವಲ್ಲ. ಕೆಲಸದ ಆದೇಶವನ್ನು ರದ್ದುಗೊಳಿಸಬೇಕು" ಎಂದು ಸಚಿವರು ಪತ್ರದಲ್ಲಿ ಬರೆದಿದ್ದಾರೆ ಎಂದು ವರದಿಯಾಗಿದೆ.
Taking a leaf out of Modiji’s style of functioning, Industries Dept spends a whopping ₹ 4.5 Cr for 5 minutes promotion film.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 24, 2022
The Dept has failed to generate any jobs past 3 years & is now relying on “slick” promos to mislead people. pic.twitter.com/5ohh8ayeC9
ಆರು ವರ್ಷಗಳ ನಂತರ ಬೆಂಗಳೂರಿನಲ್ಲಿ ನವೆಂಬರ್ 2 ರಿಂದ ನವೆಂಬರ್ 4 ರವರೆಗೆ ಜಾಗತಿಕ ಹೂಡಿಕೆದಾರರ ಸಭೆಯನ್ನು ನಿಗದಿಪಡಿಸಲಾಗಿದೆ.
"ಜಾಗತಿಕ ಹೂಡಿಕೆದಾರರ ಸಭೆ 2022 ರಲ್ಲಿ ರಾಜ್ಯವು 5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಗಳನ್ನು ನಿರೀಕ್ಷಿಸುತ್ತಿದೆ" ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಚಿವ ಮುರುಗೇಶ್ ನಿರಾಣಿ ಈ ತಿಂಗಳ ಆರಂಭದಲ್ಲಿ ಹೇಳಿದ್ದರು.