ಬಿಜೆಪಿ ಟಿಕೆಟ್ ವಂಚನೆ ಪ್ರಕರಣದ 3ನೇ ಆರೋಪಿ ಅಭಿನವ ಹಾಲಶ್ರೀ ಬಂಧನ, ಒಡಿಶಾದ ಕಟಕ್ನಲ್ಲಿ ಸೆರೆ
ಬೆಂಗಳೂರು, ಸೆಪ್ಟೆಂಬರ್ 19: ಉದ್ಯಮಿಯೊಬ್ಬರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದ ಮೂರನೇ ಆರೋಪಿಯಾಗಿರುವ ಹಾಲಿಶ್ರೀ ಸ್ವಾಮೀಜಿಯನ್ನು ಓಡಿಶಾದ ಕಟಕ್ನಲ್ಲಿ ಕರ್ನಾಟಕದ ಪೊಲೀಸರು ಬಂಧಿಸಿದ್ದಾರೆ.
ವಂಚನೆ ಆರೋಪ ಹೊತ್ತಿರುವ ಚೈತ್ರಾ ಕುಂದಾಪುರ ಮತ್ತು ತಂಡದಿಂದ ಕೋಟಿ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಸ ಹೋಗಿದ್ದ ಗೋವಿಂದ ಪೂಜಾರಿ ಎಂಬ ಉದ್ಯಮಿ ದೂರಿನ ಮೇರೆಗೆ ಎ3 ಆರೋಪಿ ಅಭಿನವ ಹಾಲಶ್ರೀ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರವಾಗಿ ಇಂದು (ಮಂಗಳವಾರ) ಸಿಸಿಬಿ ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇತ್ತು.

ಸದ್ಯ ಓಡಿಶಾದ ಕಟಕ್ನಲ್ಲಿ ತಲೆಮರೆಸಿಕೊಂಡಿದ್ದ ಸ್ವಾಮೀಜಿಯನ್ನು ಚಲಿಸುತ್ತಿದ್ದ ರೈಲಿನಲ್ಲಿ ಬಂಧಿಸಲಾಗಿದೆ. ಪೊಲೀಸರು ಅವರನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಪ್ರಕರಣದಲ್ಲಿ ಹೆಸರು ಕೇಳಿ ಬಂದಾಗಿನಿಂದ ಸ್ವಾಮೀಜಿ ಸ್ಥಳ ಬದಲಿಸುತ್ತಾ ನಾಪತ್ತೆಯಾಗುತ್ತಲೇ ಇದ್ದರೂ, ಮಂಗಳವಾರ ಭುವನೇಶ್ವರದಿಂದ ಬೋಧ್ಗಯಾಗೆ ತೆರಳುತ್ತಿದ್ದ ರೈಲಿನಲ್ಲಿ ಪೊಲೀಸರು ಅವರನ್ನು ಪತ್ತೆ ಹಚ್ಚಿ ಹಿಡಿದು ಹಾಕಿದ್ದಾರೆ.
ಕಟಕ್ನಿಂದ ಇಂದು ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಸ್ವಾಮೀಜಿಯನ್ನು ಕರೆತರುವ ಸಾಧ್ಯತೆ ಇದೆ.
ಒಡಿಶಾ ಪೊಲೀಸರ ಸಹಕಾರದಿಂದ ಪೊಲೀಸರಯ ಕಾರ್ಯಾಚರಣೆ ನಡೆಸಿ ಸ್ವಾಮೀಜಿಯನ್ನು ಹಿಡಿದು ಹಾಕಿದ್ದಾರೆ. ಚೈತ್ರಾ ಕುಂದಾಪುರ ವಿರುದ್ದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣ ಮಾತ್ರವಲ್ಲದೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟ ಎಂಬಲ್ಲಿ ಬಟ್ಟೆ ಅಂಗಡಿಯನ್ನು ತೆರೆದುಕೊಂಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಬಿಜೆಪಿ ಕಾರ್ಯಕರ್ತ ಸುದೀನ ಎಂಬುವರು ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. 2015ರಲ್ಲಿ ಸುದೀನ ಅವರಿಗೆ ಚೈತ್ರಾ ಕುಂದಾಪುರ ಪರಿಚಯವಾಗಿದ್ದಾರೆ. ತಮ್ಮ ಮಾತುಗಳಿಂದಲೇ ಉದ್ಯಮಿಯನ್ನು ನಂಬಿಸಿದ್ದ ಚೈತ್ರಾ, ತನಗೆ ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸಚಿವರು, ಮಂತ್ರಿಗಳ, ಶಾಸಕರ ನಿಕಟ ಸಂಪರ್ಕವಿದೆ ಎಂದು ನಂಬಿಸಿದ್ದಾಳೆ. ಅಲ್ಲದೇ ಸುದೀನ ಅವರಿಗೆ ಕೋಟ ಎಂಬಲ್ಲಿ ಬಟ್ಟೆ ಅಂಗಡಿಯನ್ನು ತೆರೆದು ಕೊಡುವುದಾಗಿ ನಂಬಿಸಿ ಲಕ್ಷ ಲಕ್ಷ ಪಡೆದಿದ್ದಾರೆ ಎನ್ನಲಾಗಿದೆ.
ಆರೋಪಿ ಅಭಿನವ ಹಾಲಶ್ರೀ ಫೋನ್ ಬಳಸದೆ ಪದೇ ಪದೇ ಇರುವ ಸ್ಥಳ ಬದಲಾಯಿಸುತ್ತಿರುವ ಮಾಹಿತಿ ಸಿಸಿಬಿಗೆ ದೊರೆತಿತ್ತು. ಇದೇ ಕಾರಣಕ್ಕೆ ಆರೋಪಿಯ ಆತ್ಮೀಯರು ಹಾಗೂ ಕೊನೆ ಕ್ಷಣದ ಕರೆ ಆಧಾರದ ಮೇಲೆ ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣದಲ್ಲಿ ಚೈತ್ರಾ ಹೊರತು ಪಡಿಸಿ ಉಳಿದೆಲ್ಲಾ ಆರೋಪಿಗಳ ಹೇಳಿಕೆ ದಾಖಲಿಸಲಾಗಿದೆ. ಎಲ್ಲಾ ಆರೋಪಿಗಳು ಚೈತ್ರಾ ಹಾಗೂ ಗಗನ್ ವಿರುದ್ಧ ಬೆರಳು ಮಾಡಿದ್ದಳು.
ಬಂಧನ ವೇಳೆ ಮೊದಲ ಪ್ರತಿಕ್ರಿಯೆ ನೀಡಿದ್ದ ಚೈತ್ರಾ ಕುಂದಾಪುರ ಸ್ವಾಮೀಜಿಗಳು ಸಿಕ್ಕಿ ಹಾಕಿಕೊಳ್ಳಲಿ. ಎಲ್ಲಾ ಸತ್ಯ ಗೊತ್ತಾಗುತ್ತೆ ಸರ್. ಸ್ವಾಮೀಜಿ ಸಿಕ್ಕಿ ಹಾಕಿಕೊಂಡ ನಂತರ ದೊಡ್ಡ ದೊಡ್ಡವರ ಹೆಸರುಗಳು ಹೊರ ಬರುತ್ತವೆ. ಇಂದಿರಾ ಕ್ಯಾಂಟೀನ್ ಬಿಲ್ ಪೆಡ್ಡಿಂಗ್ ಇರೋ ಕಾರಣ ಈ ಷಡ್ಯಂತ್ರ ರಚನೆಯಾಗಿದೆ. ಎ1 ಆರೋಪಿ ನಾನೇ ಆಗಿರಬಹುದು. ಸ್ವಾಮೀಜಿ ಸಿಕ್ಕ ನಂತರವೇ ಎಲ್ಲವೂ ಗೊತ್ತಾಗಲಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಳು.












Click it and Unblock the Notifications