'ಪರೀಕ್ಷಾ ಅಕ್ರಮ ನಡೆಸಿದರೆ ಜಾಮೀನು ರಹಿತ ಕೇಸ್'
ಬೆಂಗಳೂರು, ಏಪ್ರಿಲ್ 06 : 'ಪರೀಕ್ಷಾ ಅಕ್ರಮ ನಡೆಸುವವರ ವಿರುದ್ಧ ಜಾಮೀನು ರಹಿತ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ಕಾನೂನಿಗೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, 'ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪರೀಕ್ಷೆ ಪ್ರಶ್ನೆ ಪತ್ರಿಕೆ 2 ಬಾರಿ ಸೋರಿಕೆಯಾಗಿದೆ. ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಸಲುವಾಗಿ ಜಾಮೀನು ರಹಿತ ಮೊಕದ್ದಮೆ ದಾಖಲು ಮಾಡಲು ನಿರ್ಧರಿಸಲಾಗಿದೆ' ಎಂದರು.[ಪತ್ರಿಕೆ ಸೋರಿಕೆ, ಆರೋಪಿಗಳು ಏ.13ರ ತನಕ ಸಿಐಡಿ ವಶಕ್ಕೆ]
'ಕಾನೂನು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಈ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮ ನಡೆಸುವ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಿಸಲಾಗುತ್ತದೆ' ಎಂದು ತಿಳಿಸಿದರು. [ಪಿಯು ಪತ್ರಿಕೆ ಖರೀದಿ ಆಗಿದೆ, ಮಾರಿದವರು ಯಾರು?]
'ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಆಡಳಿತ ಮತ್ತು ಪರೀಕ್ಷಾ ವಿಭಾಗಗಳನ್ನು ಪ್ರತ್ಯೇಕಿಸುವ ಆಲೋಚನೆಯೂ ಇದೆ' ಎಂದು ಸಚಿವರು ಹೇಳಿದರು. ಸಚಿವರ 5 ಹೇಳಿಕೆಗಳು ಇಲ್ಲಿವೆ....

'ಫಲಿತಾಂಶದ ಬಗ್ಗೆ ಆತಂಕ ಬೇಡ'
'ವಿದ್ಯಾರ್ಥಿಗಳು ಮತ್ತು ಪೋಷಕರು ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ. ಸಿಇಟಿ, ಕಾಮೆಡ್-ಕೆ ಪರೀಕ್ಷೆ ಮೇ ಮೊದಲ ವಾರದಲ್ಲಿ ನಡೆಯುತ್ತವೆ. ಅದಕ್ಕಿಂತ ಮೊದಲೇ ಫಲಿತಾಂಶ ಪ್ರಕಟಿಸುತ್ತೇವೆ. ಇದು ನಮ್ಮ ವಾಗ್ದಾನ' ಎಂದು ಸಚಿವರು ಹೇಳಿದರು.

'ಬೇಷರತ್ತಾಗಿ ಮೌಲ್ಯಮಾಪನ ನಡೆಸಿ'
'ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಪನ್ಯಾಸಕರು ಮುಷ್ಕರ ಕೈಬಿಟ್ಟು ಬೇಷರತ್ತಾಗಿ ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಉಪನ್ಯಾಸಕರ ಬೇಡಿಕೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ತಕ್ಷಣವೇ ಆದೇಶ ಹೊರಡಿಸಿ ಎಂದರೆ ಸಾಧ್ಯವಿಲ್ಲ' ಎಂದು ಸಚಿವರು ಸ್ಪಷ್ಟಪಡಿಸಿದರು.

ಮೌಲ್ಯ ಮಾಪಕರ ಭತ್ಯೆ ಹೆಚ್ಚಳ
'ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುವ ಉಪನ್ಯಾಸಕರ ಸಂಭಾವನೆ ಮತ್ತು ದಿನ ಭತ್ಯೆಯನ್ನು ಶೇ 30ರಷ್ಟು ಏರಿಕೆ ಮಾಡಲಾಗಿದೆ. ಮುಷ್ಕರ ಕೈ ಬಿಟ್ಟು, ಮೌಲ್ಯಮಾಪನದಲ್ಲಿ ಪಾಲ್ಗೊಳ್ಳಿ'.

'ಬದಲಿ ವ್ಯವಸ್ಥೆ ಮಾಡುತ್ತೇವೆ'
'ಮೌಲ್ಯಮಾಪನದ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಪಡಬೇಕಾಗಿಲ್ಲ. ನಿಗದಿತ ಸಮಯದಲ್ಲೇ ಫಲಿತಾಂಶ ಹೊರಬರುತ್ತದೆ. ಉಪನ್ಯಾಸಕರ ಜೊತೆ ಸರ್ಕಾರ ಸಂಧಾನ ನಡೆಸುತ್ತಿದ್ದು, ಸಂಧಾನದ ಬಳಿಕ ಉಪನ್ಯಾಸಕರು ಮೌಲ್ಯಮಾಪನಕ್ಕೆ ವಾಪಾಸಾಗುವ ವಿಶ್ವಾಸವಿದೆ. ಬರದಿದ್ದರೆ ಬದಲಿ ವ್ಯವಸ್ಥೆ ಮಾಡುತ್ತೇವೆ'

'ಪರೀಕ್ಷಾ ವಿಭಾಗ ಪ್ರತ್ಯೇಕ'
'ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಸದ್ಯ, ಆಡಳಿತ ಮತ್ತು ಪರೀಕ್ಷೆ ವಿಭಾಗಗಳು ಒಂದೇ ಆಗಿರುವುದರಿಂದ ಗೊಂದಲಗಳು ಹೆಚ್ಚಾಗುತ್ತಿವೆ. ಎರಡೂ ಪ್ರತ್ಯೇಕವಾದರೆ ಪರೀಕ್ಷಾ ಅಕ್ರಮಗಳನ್ನು ಪತ್ತೆಹಚ್ಚುವುದು ಸುಲಭವಾಗುತ್ತದೆ. ಪರೀಕ್ಷಾ ವಿಭಾಗವನ್ನು ಪ್ರತ್ಯೇಕಿಸುವ ಚಿಂತನೆ ಇದೆ'.












Click it and Unblock the Notifications