ಪ್ರಶ್ನೆ ಪತ್ರಿಕೆ ಸೋರಿಕೆ : ಇಬ್ಬರು ಪಿಎಚ್ಡಿ ವಿದ್ಯಾರ್ಥಿಗಳ ಬಂಧನ
ಬೆಂಗಳೂರು, ಏಪ್ರಿಲ್ 19 : ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪಿಎಚ್ಡಿ ವಿದ್ಯಾರ್ಥಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಸಿಐಡಿ ಇದುವರೆಗೂ 10 ಆರೋಪಿಗಳನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಶಿವಕುಮಾರ್ಗೆ ಹುಡುಕಾಟ ಮುಂದುವರೆದಿದೆ.
ಸೋಮವಾರ ಪಿಎಚ್ಡಿ ವಿದ್ಯಾರ್ಥಿಗಳಾದ ಮೈಸೂರಿನ ಕುವೆಂಪು ನಗರದ ನಿವಾಸಿ ಕೆ.ನಾಗೇಂದ್ರ ಮತ್ತು ಶಾರದಾ ನಗರದ ನಿವಾಸಿ ತಿಮ್ಮೇಗೌಡ ಅವರನ್ನು ಬಂಧಿಸಲಾಗಿದೆ. ಮಾರ್ಚ್ 31ರಂದು 2ನೇ ಬಾರಿ ಪತ್ರಿಕೆ ಸೋರಿಕೆಯಾದ ಹಗರಣಕ್ಕೆ ಸಂಬಂಧಿಸಿದಂತೆ ಇವರನ್ನು ಬಂಧಿಸಲಾಗಿದೆ. [ಪಿಯುಸಿ ಪತ್ರಿಕೆ ಉತ್ತರ ಬರೆದು ಮಾರುತ್ತಿದ್ದ ಇಬ್ಬರ ಬಂಧನ]

ಇಬ್ಬರು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಕಿಂಗ್ ಪಿನ್ ಶಿವಕುಮಾರ್ ಜೊತೆ ನಂಟು ಹೊಂದಿದ್ದರು ಎಂದು ತಿಳಿದುಬಂದಿದೆ. ಶಿವಕುಮಾರ್ ಮೊಬೈಲ್ ಕರೆಗಳ ಪರಿಶೀಲನೆ ನಡೆಸಿದಾಗ, ಈ ಇಬ್ಬರು ಆರೋಪಿಗಳು ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ತಿಳಿದುಬಂದಿತ್ತು. [ಪಿಯು ಪತ್ರಿಕೆ ಖರೀದಿ ಆಗಿದೆ, ಮಾರಿದವರು ಯಾರು?]
ಆರೋಪಿಗಳ ಹಿನ್ನಲೆ : ಬಂಧಿತ ನಾಗೇಂದ್ರ ಬೆಂಗಳೂರು ವಿವಿಯ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿ. ತಿಮ್ಮೇಗೌಡ ಕರ್ನಾಟಕ ಮುಕ್ತ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ. ಇವರಿಬ್ಬರು 8 ವರ್ಷಗಳಿಂದ ಸ್ನೇಹಿತರು. ಮೈಸೂರಿನಲ್ಲಿ ಪಿಎಚ್ಡಿಗೆ ಹೆಸರು ನೋಂದಣಿ ಮಾಡಿದ್ದರೂ ತಿಮ್ಮೇಗೌಡ ಬೆಂಗಳೂರು ವಿವಿ ಹಾಸ್ಟೆಲ್ನಲ್ಲಿ ಅಕ್ರಮವಾಗಿ ನೆಲೆಸಿದ್ದ. [ಲೀಕಾಗಿದ್ದ ಕೆಮಿಸ್ಟ್ರಿ ಪಿಯು ಪ್ರಶ್ನೆ ಪತ್ರಿಕೆ ಬೆಲೆ 10 ಲಕ್ಷ ರು!]
ಬೆಂಗಳೂರು ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿರುವ ತಿಮ್ಮೇಗೌಡ ಅವರಿಗೆ ಕ್ಯಾಂಪಸ್ನಲ್ಲಿ ಹಲವರ ಪರಿಚಯವಿತ್ತು. ಇದನ್ನು ಬಳಸಿಕೊಂಡು ಆತ ಅಕ್ರಮವಾಗಿ ನೆಲೆಸಿದ್ದ. ತಿಮ್ಮೇಗೌಡನ ಪಕ್ಕದ ಕೊಠಡಿಯಲ್ಲಿ ನಾಗೇಂದ್ರ ಇದ್ದ. ಇದರಿಂದ ಇಬ್ಬರಿಗೂ ಪರಿಚಯವಾಗಿತ್ತು.
ಎಂಎ ಮುಗಿಸಿದ ಬಳಿಕ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ತಿಮ್ಮೇಗೌಡನಿಗೆ ಶಿವಕುಮಾರ್ ಪರಿಚಯವಾಗಿತ್ತು. ಸರ್ಕಾರಿ ಕೆಲಸ ಕೊಡಿಸುವುದಾಗಿ ತಿಮ್ಮೇಗೌಡನ ಬಳಿ ಶಿವಕುಮಾರ್ 2 ಲಕ್ಷ ಹಣ ವಸೂಲಿ ಮಾಡಿದ್ದ. ನಂತರ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದರೆ ಹಣ ಸಿಗುತ್ತದೆ ಎಂದು ಇವರಿಬ್ಬರು ಅದರಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಚಾರಣೆ ಮುಂದುವರೆದಿದೆ.
ಬಂಧಿತರು : ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಬೆಂಗಳೂರಿನ ಸದಾಶಿವ ನಗರದ ಪೂರ್ಣಪ್ರಜ್ಞಾ ಕಾಲೇಜಿನ ದೈಹಿಕ ಶಿಕ್ಷಕ ಅನಿಲ್, ಮತ್ತಿಕೆರೆ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಸತೀಶ್, ಬೆಂಗಳೂರಿನ ನಾಗರಬಾವಿಯ ಆದರ್ಶನಗರದ ಮಂಜುನಾಥ್, ಶ್ರೀರಾಮಪುರದ ಓಬಳರಾಜು ಹಾಗೂ ಮಲ್ಲೇಶ್ವರದ ಪಶ್ಚಿಮ ಪಾರ್ಕ್ ರಸ್ತೆಯ ರುದ್ರಪ್ಪ ಅವರನ್ನು ಬಂಧಿಸಲಾಗಿದೆ.












Click it and Unblock the Notifications