ಕರ್ನಾಟಕದಲ್ಲಿ ಕೊರೊನಾವೈರಸ್ ಸ್ಫೋಟ; 2313 ಮಂದಿಗೆ ಸೋಂಕು!
ಬೆಂಗಳೂರು, ಜುಲೈ.10: ಕೊರೊನಾವೈರಸ್ ಅಟ್ಟಹಾಸಕ್ಕೆ ಕರ್ನಾಟಕದಲ್ಲಿನ ಚಿತ್ರಣವೇ ಬದಲಾಗುತ್ತಿದೆ. ಪ್ರತಿನಿತ್ಯ ಸಾವಿರ ಸಾವಿರ ಸೋಂಕಿತ ಪ್ರಕರಣಗಳು ವರದಿಯಾಗುತ್ತಿದ್ದು, ರಾಜ್ಯದ ಜನರ ನೆಮ್ಮದಿ ಕೆಡಿಸಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಜನರ ಎದೆಯಲ್ಲಿ ನಡುಕ ಹುಟ್ಟಿಸುವಂತಿದೆ. ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ 2313 ಮಂದಿಗೆ ನೊವೆಲ್ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆಯು 33418ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಕೊವಿಡ್-19 ಕಥೆ
ಬೆಂಗಳೂರಿನಲ್ಲಿ ಮಹಾಮಾರಿಯ ಅಟ್ಟಹಾಸ ಯಥಾರೀತಿಯಲ್ಲಿ ಮುಂದುವರಿದಿದೆ. ಒಂದೇ ದಿನ 1447 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿದ್ದು, ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 15329ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲೇ ಮಹಾಮಾರಿಯ ಮರಣಮೃದಂಗ
ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಮಹಾಮಾರಿಯು ಮರಣ ಮೃದಂಗ ಬಾರಿಸುತ್ತಿದೆ. ಒಂದೇ ದಿನ ರಾಜ್ಯದಲ್ಲಿ 57 ಮಂದಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದರೆ, ಈ ಪೈಕಿ ಬೆಂಗಳೂರು ಒಂದರಲ್ಲೇ 29 ಕೊರೊನಾವೈರಸ್ ಸೋಂಕಿತರು ಉಸಿರು ಚೆಲ್ಲಿದ್ದಾರೆ. ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 543ಕ್ಕೆ ಏರಿಕೆಯಾಗಿದೆ.
ಒಂದೇ ದಿನ ರಾಜ್ಯದ 29 ಜಿಲ್ಲೆಗಳಲ್ಲೂ ಸೋಂಕಿತ ಪ್ರಕರಣ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತರ ಪ್ರಮಾಣ ಮತ್ತು ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಮೊದಲ ಬಾರಿಗೆ ರಾಜ್ಯದ ಮೂವತ್ತೂ ಜಿಲ್ಲೆಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬೆಂಗಳೂರಿನಲ್ಲೇ 1447 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ದಕ್ಷಿಣ ಕನ್ನಡ 139, ವಿಜಯಪುರ 89, ಬಳ್ಳಾರಿ 66, ಕಲಬುರಗಿ 58, ಯಾದಗಿರಿ 51, ಮೈಸೂರು 51, ಧಾರವಾಡ 50, ಹಾವೇರಿ 42, ಉಡುಪಿ 34, ಉತ್ತರ ಕನ್ನಡ 33, ಕೊಡಗು 33, ಮಂಡ್ಯ 31, ರಾಯಚೂರು 25, ರಾಮನಗರ 23, ದಾವಣಗೆರೆ 21, ಬೀದರ್ 19, ಬೆಳಗಾವಿ 15, ಚಿಕ್ಕಬಳ್ಳಾಪುರ 12, ತುಮಕೂರು 10, ಕೋಲಾರ 9, ಚಾಮರಾಜನಗರ 9, ಕೊಪ್ಪಳ 7, ಹಾಸನ 6, ಶಿವಮೊಗ್ಗ 6, ಬಾಗಲಕೋಟೆ 6, ಬೆಂಗಳೂರು ಗ್ರಾಮಾಂತರ 1, ಚಿಕ್ಕಮಗಳೂರ 1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ತುರ್ತುನಿಗಾ ಘಟಕದಲ್ಲಿ 472 ಮಂದಿ ಕೊವಿಡ್-19 ಸೋಂಕಿತರು
ಕರ್ನಾಟಕದಲ್ಲಿ ಒಟ್ಟು 472 ಕೊರೊನಾವೈರಸ್ ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಬೆಂಗಳೂರು 301, ಕಲಬುರಗಿ 20, ಧಾರವಾಡ 18, ರಾಯಚೂರು 18, ಬಳ್ಳಾರಿ 12, ಬೀದರ್ 11, ಮಂಡ್ಯ 11, ಮೈಸೂರು 9, ಬೆಳಗಾವಿ 9, ಶಿವಮೊಗ್ಗ 9, ಗದಗ 8, ತುಮಕೂರು 8, ಹಾಸನ 6, ದಕ್ಷಿಣ ಕನ್ನಡ 5, ದಾವಣಗೆರೆ 5, ಚಿಕ್ಕಬಳ್ಳಾಪುರ 4, ಚಾಮರಾಜನಗರ 4, ಕೊಪ್ಪಳ 3, ಉಡುಪಿ 3, ಬಾಗಲಕೋಟೆ 2, ಹಾವೇರಿ 2, ಕೊಡಗು 2, ಉತ್ತರ ಕನ್ನಡ 1, ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
1003 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್
ಕರ್ನಾಟಕದಲ್ಲಿ ಗುರುವಾರ ಬರೋಬ್ಬರಿ 1003 ಮಂದಿಗೆ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 601 ಮಂದಿ ಗುಣಮುಖರಾಗಿದ್ದಾರೆ. ಬಳ್ಳಾರಿ 77, ಕಲಬುರಗಿ 52, ದಕ್ಷಿಣ ಕನ್ನಡ 46, ಮಂಡ್ಯ 35, ಶಿವಮೊಗ್ಗ 28, ಮೈಸೂರು 25, ರಾಯಚೂರು 20, ಚಾಮರಾಜನಗರ 18, ಚಿಕ್ಕಮಗಳೂರು 13, ವಿಜಯಪುರ 13, ಧಾರವಾಡ 13, ದಾವಣಗೆರೆ 11, ಉತ್ತರ ಕನ್ನಡ 10, ರಾಮನಗರ 10, ಚಿಕ್ಕಬಳ್ಳಾಪುರ 10, ಉಡುಪಿ 7, ಚಿತ್ರದುರ್ಗ 6, ಯಾದಗಿರಿ 5, ಕೊಡಗು 2, ಕೊಪ್ಪಳ 1 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 13836 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.