ಬಿಜೆಪಿ ನಾಯಕರಿಗೆ ಅಮಿತ್ ಶಾ ಕೊಟ್ಟ ಸೂಚನೆಗಳು!
ಬೆಂಗಳೂರು, ಜನವರಿ 01 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ದುರಾಡಳಿತದ ಕುರಿತು ದೋಷಾರೋಪ ಪಟ್ಟಿ ಸಿದ್ಧಪಡಿಸಿ ಮನೆ-ಮನೆಗೆ ತಲುಪಿಸಬೇಕು' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕದ ಬಿಜೆಪಿ ನಾಯಕರಿಗೆ ಸೂಚನೆ ನೀಡಿದರು.
ಭಾನುವಾರ ಯಲಹಂಕದ ರಾಯಲ್ ಆರ್ಕಿಡ್ನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ನಾಯಕರ ವಿಶೇಷ ಸಭೆ ನಡೆಯಿತು. 2018ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಹಲವಾರು ಸೂಚನೆಗಳನ್ನು ರಾಜ್ಯನಾಯಕರಿಗೆ ಅಮಿತ್ ಶಾ ನೀಡಿದರು.
ಜನವರಿ 10ರಂದು ಚಿತ್ರದುರ್ಗಕ್ಕೆ ಅಮಿತ್ ಶಾ
ಜನವರಿ 9ಕ್ಕೆ ಅಮಿತ್ ಶಾ ಅವರು ಮತ್ತೆ ಆಗಮಿಸಲಿದ್ದು, ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಜ.10ರಂದು ಚಿತ್ರದುರ್ಗದಲ್ಲಿ ನಡೆಯುವ ಪಕ್ಷದ ನವ ಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ.
2018ರ ಚುನಾವಣೆ : ಜಿಗ್ನೇಶ್ ಮೇವಾನಿ ಹೇಳಿದ್ದೇನು?
ಯಾವ ನಾಯಕರು ಅಭ್ಯರ್ಥಿಗಳನ್ನು ಘೋಷಣೆ ಮಾಡುವಂತಿಲ್ಲ. ಹೈ ಕಮಾಂಡ್ ಘೋಷಿಸುವ ಅಭ್ಯರ್ಥಿಗಳೇ ಅಂತಿಮ ಎಂದು ಅಮಿತ್ ಶಾ ನಾಯಕರುಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಕೆಲವು ಸಂಸದರು ಚುನಾವಣೆಗೆ ಸ್ಪರ್ಧಿಸುವ ಕುರಿತು ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ.
ಅಮಿತ್ ಶಾ ತಿಳಿಸುವ ಅಭ್ಯರ್ಥಿಗಳೇ ಅಂತಿಮ : ಬಿಎಸ್ವೈ
ಅಮಿತ್ ಶಾ ನೀಡಿದ ಸೂಚನೆಗಳು
ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್, 'ಜನವರಿ 16ರೊಳಗೆ ಸಿದ್ದರಾಮಯ್ಯ ಸರ್ಕಾರದ ದುರಾಡಳಿತದ ಕುರಿತು ದೋಷಾರೋಪ ಪಟ್ಟಿ ಸಿದ್ದಪಡಿಸಲು ಸೂಚನೆ ನೀಡಿದ್ದಾರೆ. ಪ್ರತಿ ಕ್ಷೇತ್ರಕ್ಕೆ ಕಾಂಗ್ರೆಸ್ ಏನು ಭರವಸೆ ನೀಡಿತ್ತು. ಯಾವುದು ಈಡೇರಿಲ್ಲ ಎಂಬುದನ್ನು ಇದರಲ್ಲಿ ಸೇರಿಸಲಾಗುತ್ತದೆ' ಎಂದರು.
ಫೆ.15ರಿಂದ ದೋಷಾರೋಪ ಪಟ್ಟಿ ವಿತರಣೆ
'ನಾಲ್ಕು ವರ್ಷಗಳಲ್ಲಿ 3,400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ, ಸಜ್ಜನಪಕ್ಷಪಾತ ಹೆಚ್ಚಾಗಿದೆ. ಇಂತಹ ಅಂಶಗಳನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಫೆ.15ರಿಂದ 22 ರ ತನಕ ಯುವಮೋರ್ಚಾ ಕಾರ್ಯಕರ್ತರು ಇದನ್ನು ಮನೆ-ಮನೆಗೆ ವಿತರಣೆ ಮಾಡಲಿದ್ದಾರೆ' ಎಂದು ಅನಂತ್ ಕುಮಾರ್ ಹೇಳಿದರು.
ಯಾತ್ರೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು
'ಪರಿವರ್ತನಾ ಯಾತ್ರೆ ಕುರಿತು ನಾನು ವರದಿ ತರಿಸಿಕೊಂಡಿದ್ದೇನೆ. ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಲ್ಲಾ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಯಾತ್ರೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು' ಎಂದು ಅಮಿತ್ ಶಾ ಸೂಚನೆ ನೀಡಿದ್ದಾರೆ.
ಫೆ.1ರಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶ
ಕರ್ನಾಟಕ ಬಿಜೆಪಿ ಫೆ.1ರಿಂದ ಕೊನೆಯ ತನಕ ಎಲ್ಲಾ 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದಲಿತ, ಹಿಂದುಳಿದ ಮತ್ತು ಮಹಿಳಾ ಸಮಾವೇಶಗಳನ್ನು ಆಯೋಜಿಸಲಿದೆ.
ಅಮಿತ್ ಶಾ ಸಮ್ಮುಖದಲ್ಲಿ ದೂರು
'ಪರಿವರ್ತನಾ ಯಾತ್ರೆಯಲ್ಲಿ ಎಲ್ಲಾ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡುತ್ತಿಲ್ಲ. ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ' ಎಂದು ಯಡಿಯೂರಪ್ಪ ದೂರು ಹೇಳಿದ್ದಾರೆ.
'ನೀವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾತ್ರೆಯಲ್ಲಿ ಎಲ್ಲಾ ನಾಯಕರು ಪಾಲ್ಗೊಳ್ಳಬೇಕು' ಎಂದು ಅಮಿತ್ ಶಾ ಸೂಚಿಸಿದ್ದಾರೆ.
'ಯಾತ್ರೆಯಲ್ಲಿ ಎಲ್ಲಾ ನಾಯಕರು ಪಾಲ್ಗೊಳ್ಳುತ್ತಿಲ್ಲ ಎಂಬ ಆರೋಪ ತಪ್ಪು. ರಾಜ್ಯ, ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಜೊತೆ ಇದ್ದಾರೆ' ಎಂದು ಅನಂತ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.