ಬಿ.ಎಸ್.ಯಡಿಯೂರಪ್ಪ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರ ಅಂತಿಮ?
ಬೆಂಗಳೂರು, ಸೆಪ್ಟೆಂಬರ್ 26 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉತ್ತರ ಕರ್ನಾಟದಿಂದ 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ಬಾಗಲಕೋಟೆ ಜಿಲ್ಲೆಯಿಂದ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬುದು ಸದ್ಯದ ಸುದ್ದಿ.
ಯಡಿಯೂರಪ್ಪ 2018ರ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ. ಪಕ್ಷದ ರಾಷ್ಟ್ರೀಯ ನಾಯಕರು ಅವರಿಗೆ ಉತ್ತರ ಕರ್ನಾಟಕ ಭಾಗದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ. 'ಉತ್ತರ ಕರ್ನಾಟಕದಿಂದ ಸ್ಪರ್ಧಿಸುತ್ತೇನೆ' ಎಂದು ಈಗಾಗಲೇ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಉತ್ತರ ಕರ್ನಾಟಕದಿಂದ ಬಿಎಸ್ವೈ ಸ್ಪರ್ಧೆ : ಯಾರು, ಏನು ಹೇಳಿದರು?
ಬಿ.ಎಸ್.ಯಡಿಯೂರಪ್ಪ ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದು? ಎಂಬ ಬಗ್ಗೆ ಭಾರೀ ಚರ್ಚೆಯಾಗುತ್ತಿತ್ತು. ಸದ್ಯದ ಮಾಹಿತಿ ಪ್ರಕಾರ ಅವರು ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರ ಕ್ಷೇತ್ರ.
ಉತ್ತರ ಕರ್ನಾಟಕದಿಂದ ಬಿಎಸ್ವೈ ಸ್ಪರ್ಧೆ, ಓದುಗರ ಅಭಿಮತ
2009ರಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯ ಸಿದ್ದು ಸವದಿ ಗೆಲುವು ಸಾಧಿಸಿದ್ದರು. ಆದರೆ, 2013ರ ಚುನಾವಣೆಯಲ್ಲಿ ಉಮಾಶ್ರೀ ಗೆಲುವು ಸಾಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರೂ ಆಗಿದ್ದಾರೆ. ಈ ಕ್ಷೇತ್ರದಿಂದ ಯಡಿಯೂರಪ್ಪ ಸ್ಪರ್ಧಿಸಿದರೆ ಮುಂದಿನ ಚುನಾವಣೆಯಲ್ಲಿ ಕ್ಷೇತ್ರ ರಾಜ್ಯದ ಗಮನ ಸೆಳೆಯುವುದು ಖಂಡಿತ...
ಉತ್ತರ ಕರ್ನಾಟಕದಿಂದ ಸ್ಪರ್ಧಿಸುವುದಿಲ್ಲ : ಕುಮಾರಸ್ವಾಮಿ
ಎರಡು ಕ್ಷೇತ್ರಗಳ ಹೆಸರು ಚಾಲ್ತಿಯಲ್ಲಿ
ಬಿ.ಎಸ್.ಯಡಿಯೂರಪ್ಪ ಹಾವೇರಿ ಅಥವ ಬಾಗಲಕೋಟೆ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಸುದ್ದಿ ಹಬ್ಬಿತ್ತು. ಆದರೆ, ಸದ್ಯದ ಮಾಹಿತಿ ಪ್ರಕಾರ ಅವರು ತೇರದಾಳ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಉಮಾಶ್ರೀ ಅವರ ವಿರುದ್ಧ ಸ್ಪರ್ಧೆ
ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರ ಸದ್ಯ ಕಾಂಗ್ರೆಸ್ ಹಿಡಿತದಲ್ಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು ಈ ಕ್ಷೇತ್ರದ ಶಾಸಕರು. 2013ರ ಚುನಾವಣೆಯಲ್ಲಿ ಅವರು 70,189 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಉಮಾಶ್ರೀ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ಸಿದ್ದು ಸವದಿ ಅವರು 67,590 ಮತಗಳನ್ನು ಗಳಿಸಿದ್ದರು.
ಕ್ಷೇತ್ರ ಬಿಟ್ಟುಕೊಡಲು ಸಿದ್ದು ಸವದಿ ಸಿದ್ಧ
ಯಡಿಯೂರಪ್ಪ ತೇರದಾಳ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವುದಾದದರೆ ಕ್ಷೇತ್ರ ಬಿಟ್ಟು ಕೊಡಲು ಸಿದ್ದು ಸವದಿ ಸಿದ್ಧರಾಗಿದ್ದಾರೆ. ಬಾಗಲಕೋಟೆ ಬಿಜೆಪಿ ಜಿಲಾಧ್ಯಕ್ಷರಾಗಿರುವ ಸಿದ್ದು ಸವದಿ ಅವರು, 'ಬಾಗಲಕೋಟೆಯಿಂದ ಸ್ಪರ್ಧಿಸುವಂತೆ ಯಡಿಯೂರಪ್ಪಗೆ ಆಹ್ವಾನ ನೀಡಿದ್ದೇವೆ. ತೇರದಾಳ ಸೇರಿದಂತೆ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಅವರು ಮುಕ್ತರು ಎಂದು' ಹೇಳಿದ್ದಾರೆ.
ನನ್ನ ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧಿಸಲಿ
ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಸಹ ಯಡಿಯೂರಪ್ಪ ಅವರಿಗೆ ಬಾಗಲಕೋಟೆಯಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದಾರೆ. 'ಮುಧೋಳ ಮೀಸಲು ಕ್ಷೇತ್ರ ಹೊರತುಪಡಿಸಿ ಜಿಲ್ಲೆಯ ಉಳಿದ 6 ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಲಿ ಎಂದು ಮನವಿ ಮಾಡಿದ್ದಾರೆ. ನನ್ನ ಮತ ಕ್ಷೇತ್ರ ಬೀಳಗಿ ಅಥವ ಹಿಂದಿನ ಕ್ಷೇತ್ರ ಜಮಖಂಡಿಯಲ್ಲಿ ಬೇಕಾದರೂ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಡುತ್ತೇನೆ' ಎಂದು ನಿರಾಣಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ
'ಬಾಗಲಕೋಟೆಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಮನವೊಲಿಸಲಿದ್ದೇವೆ. ಬಾದಾಮಿ ಅಥವ ಬಾಗಲಕೋಟೆಯಿಂದ ಸ್ಪರ್ಧಿಸುವಂತೆ ಅವರಿಗೆ ಹಿಂದೆ ಮನವಿ ಮಾಡಲಾಗಿತ್ತು. ಯಡಿಯೂರಪ್ಪ ಇಲ್ಲಿ ಸ್ಪರ್ಧಿಸುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ. ನಮಗೆ ಅವರೂ ಒಬ್ಬ ಸ್ಪರ್ಧಿ' ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದರು. ಆದರೆ, ಸಿದ್ದರಾಮಯ್ಯ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.