Breaking; ಹೋರಿ ಬೆದರಿಸುವ ಸ್ಪರ್ಧೆ, ಶಿವಮೊಗ್ಗದಲ್ಲಿ ಇಬ್ಬರು ಸಾವು
ಶಿವಮೊಗ್ಗ, ಜನವರಿ 16; ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಶಿವಮೊಗ್ಗದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಪ್ರತಿ ವರ್ಷ ಸಂಕ್ರಾಂತಿ ಬಳಿಕ ಶಿವಮೊಗ್ಗ, ಹಾವೇರಿ ಗಡಿ ಭಾಗದ ಗ್ರಾಮಗಳಲ್ಲಿ ಈ ಸ್ಪರ್ಧೆ ನಡೆಯುತ್ತದೆ.
ಮೃತಪಟ್ಟವರನ್ನು ಲೋಕೇಶ್ (32) ಮತ್ತು ರಂಗನಾಥ್ ಎಂದು ಗುರುತಿಸಲಾಗಿದೆ. ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಹೋರಿಯ ಕೊಂಬಿನಿಂದ ತಿವಿದು ಇಬ್ಬರು ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಶಿವಮೊಗ್ಗ ತಾಲೂಕಿನ ಕೊನಗನವಳ್ಳಿ ಬಳಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡಲು ಆಟೋ ಚಾಲಕರಾಗಿರುವ ಆಲ್ಕೋಳ ನಿವಾಸಿ ಲೋಕೇಶ್ ಹೋಗಿದ್ದರು.

ಜನರ ಗುಂಪು ಇದ್ದ ಕಡೆ ರಭಸವಾಗಿ ನುಗ್ಗಿ ಬಂದ ಹೋರಿಯ ಕೊಂಬು ತಿವಿದು ಲೋಕೇಶ್ ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಲಕಾರಿಯಾಗದೇ ಲೋಕೇಶ್ ಸಾವನ್ನಪ್ಪಿದ್ದಾರೆ.
ಮತ್ತೊಂದು ಘಟನೆ; ಶಿಕಾರಿಪುರ ತಾಲೂಕಿನ ಮಳೂರಿನಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರಂಗನಾಥ್ ಎಂಬುವವರು ಮೃತಪಟ್ಟಿದ್ದಾರೆ. ಎಗ್ ರೈಸ್ ಅಂಗಡಿ ನಡೆಸುತ್ತಿದ್ದ ಅವರು ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದರು.
ಮೂಳೂರಿನಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನೋಡುವಾಗ ಹೋರಿ ತಿವಿದು ಗಾಯಗೊಂಡಿದ್ದರು. ಬಳಿಕ ಅವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ದೀಪಾವಳಿ ಹಬ್ಬದ ಬಳಿಕವೂ ಸಹ ಹೋರಿ ಬೆದರಿಸುವ ಸ್ಪರ್ಧೆ ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಲ್ಲಿ ನಡೆಯುತ್ತದೆ. ಈ ಬಾರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂವರು ಮೃತಪಟ್ಟಿದ್ದರು.
ಈ ಪ್ರಕರಣದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ, "ಸ್ಪರ್ಧೆಯ ವೇಳೆ ಸಾವಾಗಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸರ ಕಡೆಯಿಂದ ಯಾವ ಕ್ರಮ ಆಗಬೇಕೋ ಅದು ಆಗುತ್ತದೆ" ಎಂದು ಹೇಳಿದ್ದರು.
"ಹೋರಿ ಬೆದರಿಸುವುದು ಒಂದು ಜಾನಪದ ಕಲೆ. ಆದರೆ ಸಾವು ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕು. ಈ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆಯುತ್ತೇನೆ" ಎಂದು ತಿಳಿಸಿದ್ದರು.












Click it and Unblock the Notifications