ಇಂದು ಕಲ್ಯಾಣ ಕರ್ನಾಟಕದ 1,500 ಶಾಲೆಗಳು ಬಂದ್
ಬೆಂಗಳೂರು, ಫೆಬ್ರವರಿ 15: ಶಾಲೆಗಳಿಗೆ ಅನುದಾನ ನೀಡದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಲ್ಯಾಣ ಕರ್ನಾಟಕದಲ್ಲಿ ಇಂದು ಸುಮಾರು 1500 ಅನುದಾನ ರಹಿತ ಖಾಸಗಿ ಶಾಲೆಗಳು ಬಂದ್ ಆಗಲಿವೆ.
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳಲ್ಲಿನ ಶಾಲೆಗಳನ್ನು 371 ಜೆ ಕಾಯ್ದೆಯಡಿ ಅನುದಾನಕ್ಕೆ ಸೇರ್ಪಡೆಯಾಗಿಲ್ಲ. ಇವುಗಳನ್ನು ಅನುದಾದನ ವ್ಯಾಪ್ತಿಗೆ ಸೇರಿಸಬೇಕು ಎಂದು ಖಾಸಗಿ ಶಾಲಾ ಒಕ್ಕೂಟ ಒತ್ತಾಯಿಸಿದೆ.
ಕಳೆದ ವರ್ಷ 1500 ಕೋಟಿ ರೂ ಅನುದಾನ ಬಂದಿದೆ. ಆದರೆ ಇದರಲ್ಲಿ 5 ಕೋಟಿ ರೂ ಮಾತ್ರ ಬಳಕೆಯಾಗಿದೆ. ಬಾಕಿ ಹಣ ಸರ್ಕಾರಕ್ಕೆ ವಾಪಸ್ ಹೋಗಿದೆ. ಹೀಗಾಗಿ ಶಾಲೆಗಳಿಗೆ ಅನುದಾನ ನೀಡುವಂತೆ ಕಲ್ಯಾಣ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟವು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿತ್ತು.

2013-14ರಲ್ಲಿ 371ಜೆ ವಿಧಿ ಜಾರಿಗೆ ಬಂದಿತ್ತು. ಪ್ರತಿ ವರ್ಷ ಸಾವಿರಾರು ಕೋಟಿ ರೂ ಅನುದಾನ ಬಂದರೂ ಅದು ಬಳಕೆಯಾಗದೆ ವಾಪಸ್ ಹೋಗುತ್ತಿದೆ. ಏಳು ಜಿಲ್ಲೆಗಳಲ್ಲಿ 1500 ಅನುದಾನರಹಿತ ಖಾಸಗಿ ಶಾಲೆಗಳಿವೆ. ಈಗ ಅನುದಾನವಿಲ್ಲದ ಕಾರಣ ಕನ್ನಡ ಮತ್ತು ಉರ್ದು ಮಾಧ್ಯಮ ಶಾಲೆಗಳ ಐದು ಲಕ್ಷ ವಿದ್ಯಾರ್ಥಿಗಳು ಬೀದಿಗೆ ಬೀಳುತ್ತಾರೆ. ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ. 10ನೇ ತರಗತಿ ಪರೀಕ್ಷೆ ಸಮೀಪದಲ್ಲಿದೆ. ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಒಕ್ಕೂಟ ಆರೋಪಿಸಿದೆ.
1995 ರಿಂದ 2015ರ ಅವಧಿಯಲ್ಲಿ ಸ್ಥಾಪನೆಯಾದ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ ಅದಕ್ಕೆ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಸೋಮವಾರ ಒಂದು ದಿನ ಸಾಂಕೇತಿಕ ಪ್ರತಿಭಟನೆಯಾಗಿ ಶಾಲೆಗಳನ್ನು ಬಂದ್ ಮಾಡುತ್ತಿದ್ದೇವೆ. ಜೂನ್ ನಂತರ ರಸ್ತೆ ತಡೆ ಸೇರಿದಂತೆ ವಿವಿಧ ಸ್ವರೂಪಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.












Click it and Unblock the Notifications