ಪ.ಜಾತಿ, ಪಂಗಡದ ರೈತರಿಗೆ ಸರ್ಕಾರದಿಂದ ಹಸು ವಿತರಣೆ
ಬೆಂಗಳೂರು, ಅ.1 : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ 13 ಸಾವಿರ ರೈತರಿಗೆ ತಲಾ ಒಂದು ಲಕ್ಷ ರೂ. ವೆಚ್ಚದಲ್ಲಿ ಎರಡು ಹಸುಗಳನ್ನು ನೀಡಲು ನಿರ್ಧರಿಸಿದೆ. ಈ ಕುರಿತ ರೂಪು ರೇಷೆ ತಯಾರಾಗಿದ್ದು, ಮುಂದಿನ ತಿಂಗಳಿನಲ್ಲಿ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ.
ಮಂಗಳವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು, ಈ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಪರಿಶಿಷ್ಟ ಜಾತಿಯ 10 ಸಾವಿರ ಹಾಗೂ ಪರಿಶಿಷ್ಟ ಪಂಗಡದ 3 ಸಾವಿರ ರೈತರಿಗೆ 104 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು. 1 ಲಕ್ಷ ರೂ.ಗಳನ್ನು 75 ಸಾವಿರ ರೂ. ಸಬ್ಸಿಡಿಯಾಗಿದ್ದು, ಫಲಾನುಭವಿ ರೈತರು 25 ಸಾವಿರ ರೂ. ಪಾವತಿ ಮಾಡಬೇಕು ಎಂದು ಸಚಿವರು ಹೇಳಿದರು.

ಈ ಯೋಜನೆಯ ಕುರಿತ ರೂಪುರೇಷೆ ತಯಾರಾಗಿದ್ದು, ಯೋಜನೆಗೆ ಫಲಾನುಭವಿಗಳನ್ನು ಗ್ರಾಮ ಸಭೆ, ಶಾಸಕರ ಅಧ್ಯಕ್ಷತೆಯ ಸಮಿತಿ, ಜಿಲ್ಲಾ ಉಸ್ತುವಾರಿ ಸಚಿವರ ಸಮಿತಿಯಲ್ಲಿ ಆಯ್ಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ರೈತರ ಕುಟುಂಬಗಳನ್ನು ಆರ್ಥಿಕವಾಗಿ ಬಲಪಡಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದರು. [ದಲಿತರೇತರರ ದನಗಳ ಹಾಲು ಕಪ್ಪಗಿರುತ್ತಾ ಸಿದ್ರಾಮಣ್ಣಾ?]
ಬೋರ್ವೆಲ್ ಕೊರೆಸುವ ಯೋಜನೆ ಸಿದ್ಧ : ಗಂಗಾಕಲ್ಯಾಣ ಯೋಜನೆಯಡಿ 2014ನೇ ಸಾಲಿನಲ್ಲಿ 25 ಸಾವಿರ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡ ರೈತರಿಗೆ ಬೋರ್ವೆಲ್ ಕೊರೆಸಿ ತಿಂಗಳಲ್ಲಿ ವಿದ್ಯುತ್ ಸಂಪರ್ಕ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಸಚಿವ ಆಂಜನೇಯ ಅವರು ತಿಳಿಸಿದರು.
ಬೋರ್ವೆಲ್ ಕೊರೆಯುವುದರಲ್ಲಿ ಆಗುವ ಅವ್ಯವಹಾರವನ್ನು ತಡೆಗಟ್ಟಲು ಜಿಪಿಎಸ್ ವ್ಯವಸ್ಥೆ ಅಳವಡಿಸಿ, ಪ್ರತಿ ಹಂತದ ಮಾಹಿತಿಯ ವರದಿ ಆಧಾರದ ಮೇಲೆ ಬಿಲ್ ಪಾವತಿಸಲಾಗುವುದು ಎಂದು ತಿಳಿಸಿದರು.












Click it and Unblock the Notifications