ಕಲಬುರಗಿ ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ
ಕಲಬುರಗಿ, ಡಿಸೆಂಬರ್. 10 : ಕಲಬುರಗಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಯಡಿಯೂರಪ್ಪ ಅವರು ಕಲಬುರಗಿ ದಕ್ಷಿಣ ಕ್ಷೇತ್ರಕ್ಕೆ ಹಾಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರೇ ಮುಂದಿನ ಚುನಾವಣೆಯ ಅಭ್ಯರ್ಥಿ ಎಂದು ಘೋಷಣೆ ಮಾಡಿದರು.
ಶನಿವಾರ ಕಲಬುರಗಿಯ ಎನ್ವಿ ಕಾಲೇಜು ಮೈದಾನದಲ್ಲಿ 'ನವ ಕರ್ನಾಟಕ ಪರಿವರ್ತನಾ ಯಾತ್ರೆ'ಯ ಸಮಾವೇಶ ನಡೆಯಿತು. ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಬಿಜೆಪಿ ನಾಯಕ ಕೆ.ಪಿ.ನಂಜುಡಿ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಸಮಾವೇಶದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 2018ರ ವಿಧಾನಸಭೆ ಚುನಾವಣೆಗೆ ಕಲಬುರಗಿ ದಕ್ಷಿಣ ಕ್ಷೇತ್ರಕ್ಕೆ ಹಾಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಅಭ್ಯರ್ಥಿ ಎಂದು ಘೋಷಣೆ ಮಾಡಿದರು.
ಈ ಮೂಲಕ ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆ ಮಾಡಿದೆ. ಕಳೆದ ಚುನಾವಣೆಯಲ್ಲಿ ದತ್ತಾತ್ರೇಯ ಪಾಟೀಲ್ ರೇವೂರ್ ಅವರು 36,850 ಮತಗಳನ್ನು ಪಡೆದು ಚುನಾವಣೆಯಲ್ಲಿ ಜಯಗಳಿಸಿದ್ದರು...

ಹತ್ತಾರು ಹಗರಣಗಳು ನಡೆದಿವೆ
ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ, 'ರೈತರ ನೆರವಿಗೆ ಬರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ತೊಗರಿ ಖರೀದಿ ಕೇಂದ್ರಗಳು ಕಲಬುರಗಿಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕಲಬುರಗಿ ವಿವಿಯಲ್ಲಿ ಹತ್ತಾರು ಹಗರಣಗಳು ನಡೆದರು ತನಿಖೆ ನಡೆಯುತ್ತಿಲ್ಲ' ಎಂದು ಆರೋಪಿಸಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ
'ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ದಿನಕ್ಕೊಂದು ಕೊಲೆ ನಡೆಯುತ್ತಿವೆ. ರಾಜ್ಯ ಸರಕಾರ ಹಂತಕರ ಬಂಧನಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ ನಿದ್ರೆಗೆ ಜಾರಿದೆ' ಎಂದು ಯಡಿಯೂರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಯಾವಾಗಲೂ ಕನಸು ಕಾಣುತ್ತಾರೆ
ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್, 'ಸಿದ್ದರಾಮಯ್ಯ ಓರ್ವ ನಿದ್ರಾಮಯ್ಯ, ಯಾವಾಗಲು ಕನಸು ಕಾಣುತ್ತಿರುತ್ತಾರೆ. ಸಿದ್ದರಾಮಯ್ಯಗೆ ರಾತ್ರಿ 9ಕ್ಕೆ ವಿನಯ ಕುಲಕರ್ಣಿ, 10 ಗಂಟೆಗೆ ಕೆ.ಜೆ.ಜಾಜ್೯, 11 ಗಂಟೆಗೆ ಎಚ್.ವೈ.ಮೇಟಿ ಕನಸು ಬಿಳುತ್ತದೆ' ಎಂದು ಲೇವಡಿ ಮಾಡಿದರು.

ಬಹಿರಂಗ ಚರ್ಚೆಗೆ ಆಹ್ವಾನ
ಸಮಾವೇಶದಲ್ಲಿ ಮಾತನಾಡಿದ ಅನಂತ್ ಕುಮಾರ್, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು. ಹೈದರಾಬಾದ್-ಕರ್ನಾಟಕ ಭಾಗವನ್ನು ಮಲ್ಲಿಕಾರ್ಜುನ ಖರ್ಗೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. 371 (ಜೆ) ಯಲ್ಲಿರುವ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಖರ್ಗೆ ಯವರು ತರಾತುರಿಯಲ್ಲಿ ಕಲಂ ಜಾರಿ ಮಾಡಿದ್ದಾರೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದರು.

ಅಭ್ಯರ್ಥಿ ಘೋಷಣೆ
2018ರ ವಿಧಾನಸಭೆ ಚುನಾವಣೆಗೆ ಕಲಬುರಗಿ ದಕ್ಷಿಣ ಕ್ಷೇತ್ರಕ್ಕೆ ಹಾಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಅಭ್ಯರ್ಥಿ ಎಂದು ಯಡಿಯೂರಪ್ಪ ಘೋಷಣೆ ಮಾಡಿದರು.

2013ರ ಫಲಿತಾಂಶ
ದತ್ತಾತ್ರೇಯ ಪಾಟೀಲ್ ರೇವೂರ್ (ಬಿಜೆಪಿ) - 36,850 ಮತಗಳು
ಶಶಿಲ್ ಜಿ.ನಮೋಶಿ (ಜೆಡಿಎಸ್) - 26,880
ಕೈಲಾಶ್ ವಿರೇಂದ್ರ ಪಾಟೀಲ್ (ಕಾಂಗ್ರೆಸ್) - 22,074












Click it and Unblock the Notifications