ಸಿದ್ರಾಮಣ್ಣಂಗಾಗಿ ಸಿಂಗಾರ -ಬಂಗಾರವಾದ ಕಲಬುರಗಿಯ ಯಡ್ರಾಮಿ
ಕಲಬುರಗಿ, ಡಿಸೆಂಬರ್ 14: ಹೊಸ ವರ್ಷದ ಜನವರಿ 1ರಿಂದ ಯಡ್ರಾಮಿ ಹೊಸ ತಾಲೂಕಾಗಲಿದೆ. ಜೇವರ್ಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಡ್ರಾಮಿ ಪಟ್ಟಣ ಬರುತ್ತದೆ. ಇದೇ ಡಿಸೆಂಬರ್ 16ರಂದು ಸಂಜೆ 4ಕ್ಕೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಇಲ್ಲಿ ಈಗಾಗಲೇ ತಹಶೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ಪ್ರವಾಸಿ ಮಂದಿರ ಇತ್ಯಾದಿಗಳಿವೆ. ಅವುಗಳ ಸುಣ್ಣ-ಬಣ್ಣ, ರಸ್ತೆ ಕಾಮಗಾರಿ, ವಿದ್ಯುತ್ ಪರಿಕರಗಳ ಜೋಡಣೆಯಲ್ಲಿ ಕಾರ್ಮಿಕರು ತೊಡಗಿದ್ದಾರೆ. ಮುಖ್ಯಮಂತ್ರಿಯ ಸ್ವಾಗತಕ್ಕಾಗಿ ಯಡ್ರಾಮಿ ಎಲ್ಲ ರೀತಿಯಲ್ಲೂ ಸಿದ್ಧಗೊಳುತ್ತಿದೆ.

ಅಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಮುತುವರ್ಜಿಯಿಂದ ಸಿದ್ಧತೆ ನಡೆಸುತ್ತಿದ್ದಾರೆ. ಯಡ್ರಾಮಿ ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದ ಪ್ರವಾಸಿ ಮಂದಿರ ಸುಣ್ಣ ಬಣ್ಣ ಕಂಡಿದೆ. ರಸ್ತೆಗಳು ಮತ್ತು ಚರಂಡಿಗಳು ದುರಸ್ತಿ ಆಗಿವೆ. ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ.
ಸಿದ್ದರಾಮಯ್ಯ ಅವರು ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರ ಜನರು ಸೇರುವ ನೀರಿಕ್ಷೆಯಿದೆ. ಬ್ಯಾನರ್, ಕಟೌಟ್ ಗಳು ಈಗಲೇ ರಾರಾಜಿಸುತ್ತಿವೆ. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಇಲಾಖೆಯ ಸಚಿವರು ಭಾಗವಹಿಸಲಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು ಮತ್ತು ಇತರ ಅಧಿಕಾರಿಗಳು ರಕ್ಷಣಾ ವ್ಯವಸ್ಥೆಯ ಪರಿಶೀಲನೆ ನಡೆಸುತ್ತಿದ್ದಾರೆ.
ಜತೆಗೆ ಕಾಮಗಾರಿಗಳು ಪರಿಶೀಲನೆ ಕೂಡ ಮಾಡುತ್ತಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಪಟ್ಟಣದ ಸೌಂದರ್ಯಕ್ಕೆ ಒತ್ತು ನೀಡಿ, ರಸ್ತೆ ಮತ್ತಿತರ ಮೂಲಸೌಕರ್ಯ ವ್ಯವಸ್ಥೆಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ.












Click it and Unblock the Notifications