ಕಲಬುರ್ಗಿ ಕಾರಾಗೃಹದಲ್ಲಿ ವಾರ್ಡರ್ ಮೇಲೆ ಖೈದಿಗಳಿಂದ ಹಲ್ಲೆ, ಭಾರೀ ಭದ್ರತೆ
ಕಲಬುರಗಿ, ಜುಲೈ 25: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಖೈದಿಗಳ ಕೊಠಡಿ ತಪಾಸಣೆ ಮಾಡಲು ತೆರಳಿದ್ದ ವಾರ್ಡರ್ ಮೇಲೆ ಆರು ಜನ ವಿಚಾರಣಾಧೀನ ಖೈದಿಗಳು ಹಲ್ಲೆ ಮಾಡಿದ್ದಾರೆ. ಬೆನ್ನಲ್ಲೇ ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್ 200ಕ್ಕೂ ಹೆಚ್ಚು ಪೊಲೀಸರನ್ನು ಜೈಲಿನ ಭದ್ರತೆಗೆ ನಿಯೋಜಿಸಿ ಸಂಪೂರ್ಣ ತಪಾಸಣೆಗೆ ಸೂಚಿಸಿದ್ದಾರೆ.
ಆಗಿದ್ದೇನು?
ಇಂದು ವಿಚಾರಣಾಧೀನ ಖೈದಿಯೊಬ್ಬರು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಕಲಬುರ್ಗಿ ಕೇಂದ್ರ ಕಾರಾಗೃಹದ ವಾರ್ಡರ್ ವಸಂತ ಸುಲ್ಫಿ ಜೈಲಿನಲ್ಲಿ ತಪಾಸಣೆಗೆ ತೆರಳಿದ್ದರು. ಈ ಸಂದರ್ಭ ಅವರ ಮೇಲೆ 6 ಜನ ವಿಚಾರಣಾಧೀನ ಖೈದಿಗಳು ಹಲ್ಲೆ ನಡೆಸಿದ್ದಾರೆ. ಜತೆಗೆ ಜೈಲಿನಲ್ಲಿ ಕಲ್ಲು ತೂರಾಟವೂ ನಡೆದಿದೆ ಎನ್ನಲಾಗಿದೆ.

ಇದರಿಂದ ಜೈಲಿನಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್ ಗೆ ಮಾಹಿತಿ ನೀಡಲಾಗಿದೆ. ತಕ್ಷಣ ಕಾರಾಗೃಹಕ್ಕೆ ಭೇಟಿ ನೀಡಿರುವ ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಸುಮಾರು 200ಕ್ಕೂ ಅಧಿಕ ಕಾನ್ಸ್ಟೆಬಲ್ಗಳನ್ನು ಕೇಂದ್ರ ಕಾರಾಗೃಹಕ್ಕೆ ಕರೆಸಿಕೊಂಡಿದ್ದಾರೆ.
ಕಾರಾಗೃಹಕ್ಕೆ ಭಿಗಿ ಭದ್ರತೆ ಒದಗಿಸಿರುವ ಅಲೋಕ್ ಕುಮಾರ್ ಇಡೀ ಜೈಲಿನ ತಪಾಸಣೆ ಮಾಡುವಂತೆ ಜೈಲಿನ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರ ಜತೆಗೆ ಇನ್ನೂ 500ಕ್ಕೂ ಹೆಚ್ಚು ಪೊಲೀಸರು ಕರೆಸಲು ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನು ವಾರ್ಡರ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ವಿಚಾರಣಾಧೀನ ಖೈದಿಗಳ ವಿರುದ್ಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಓರ್ವ ಖೈದಿಯನ್ನು ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.












Click it and Unblock the Notifications