ಬೆಳಗಾವಿಯಲ್ಲಿ ಕನ್ನಡಿಗರಾಗಿ ಪರಿವರ್ತನೆಯಾದವರ ಬಗ್ಗೆ ಸಮೀಕ್ಷೆ
ಕಲಬುರಗಿ, ಜನವರಿ 19: " ಬೆಳಗಾವಿಯಲ್ಲಿ ಮರಾಠಿ ಭಾಷೆ ಮಾತನಾಡುವವರು ಈವರೆಗೆ ಕನ್ನಡಿಗರಾಗಿ ಪರಿವರ್ತನೆಯಾಗಿರುವುದರ ಬಗ್ಗೆ ಸಾಮಾಜಿಕ ಸಮೀಕ್ಷೆ ಮಾಡಲಾಗುವುದು" ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭರಣ ಹೇಳಿದ್ದಾರೆ.
ಮಂಗಳವಾರ ಕಲಬುರಗಿಯಲ್ಲಿ ಮಾತನಾಡಿದ ಅವರು, "ಇತಿಹಾಸ, ಐತಿಹ್ಯ ಹಾಗೂ ಈಗಿನ ಕಾಲಘಟ್ಟದ ಬಗ್ಗೆಯೂ ತಿಳಿಯಬೇಕಿದೆ. ರಾಜ್ಯ ವಿಂಗಡಣೆಯಾಗಿ 65 ವರ್ಷಗಳಾದರೂ ಇನ್ನೂ ಗೊಂದಲ ಸೃಷ್ಟಿಸಲಾಗುತ್ತಿದೆ" ಎಂದು ವಿಷಾದ ವ್ಯಕ್ತಪಡಿಸಿದರು.
"ಹೊರ ರಾಜ್ಯದದಿಂದ ಕರ್ನಾಟಕಕ್ಕೆ ಬಂದ ಸರ್ಕಾರಿ ಅಧಿಕಾರಿಗಳಿಗೆ 4 ಹಂತಗಳಲ್ಲಿ ಭಾಷೆಯನ್ನು ಕಲಿಯಲು ಅವಕಾಶ ನೀಡಲಾಗುತ್ತದೆ. ಹಂತ-ಹಂತವಾಗಿ ಕನ್ನಡ ಭಾಷೆಯನ್ನು ಕಲಿಯಲು ಕಡ್ಡಾಯವಾಗಿ ನಿಯಮಗಳಿವೆ" ಎಂದು ಹೇಳಿದರು.

"ರಾಜ್ಯದ ಗಡಿ ಭಾಗದಿಂದ 1 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗಾವಕಾಶದಲ್ಲಿ ಸರ್ಕಾರವು ಶೇ.5ರಷ್ಟು ಮೀಸಲಾತಿ ನೀಡುತ್ತದೆ. ಇದರಿಂದ ಕನ್ನಡಿಗರಿಗೆ ಉತ್ತೇಜನ ನೀಡಿದಂತಾಗುತ್ತದೆ" ಎಂದರು.
"ಕನ್ನಡ ಭಾಷೆ ಅನುಷ್ಠಾನದಲ್ಲಿ ಜಿಲ್ಲಾಡಳಿತದಿಂದ ಉತ್ತಮ ಸ್ಪಂದನೆ ಸಿಕ್ಕಿದೆ" ಎಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ನಾಗಾಭರಣ ಅವರು ಕೃತಜ್ಞತೆ ಹೇಳಿದರು. "ಕನ್ನಡ ಭಾಷೆ ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಮುಂದಿನ ದಿನಗಳಲ್ಲಿ ಮತ್ತಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುವುದಾಗಿ" ತಿಳಿಸಿದರು.
"ಕನ್ನಡ ಭಾಷಾ ಚಟುವಟಿಕೆಗಳ ಮೂಲಕ ಕನ್ನಡ ಕಾಯಕ ವರ್ಷ ಅನುಷ್ಠಾನದ ಅಗತ್ಯವಿದೆ. ಕನ್ನಡ ಭಾಷೆ ಇನ್ನಷ್ಟು ಗಟ್ಟಿಯಾಗಿ ಕಟ್ಟಲು ಸಾಕಷ್ಟು ಹಂತಗಳ ಕಾರ್ಯ ಯೋಜನೆ ರೂಪಿಸಿಕೊಳ್ಳಲಾಗುವುದು" ಎಂದು ಹೇಳಿದರು.












Click it and Unblock the Notifications