ಶನಿವಾರದ ಜನತಾ ದರ್ಶನ, ಗ್ರಾಮ ವಾಸ್ತವ್ಯ ಮುಂದೂಡಿದ ಸಿಎಂ
Recommended Video
ಕಲಬುರಗಿ, ಜೂನ್ 22: ನಿನ್ನೆ (ಜೂನ್ 21) ಯಾದಗಿರಿ ಜಿಲ್ಲೆ ಗುರ್ಮಿಟ್ಕಲ್ ತಾಲ್ಲೂಕಿನ ಚಂಡರಕಿ ಗ್ರಾಮದಲ್ಲಿ ಯಶಸ್ವಿಯಾಗಿ ಗ್ರಾಮ ವಾಸ್ತವ್ಯ ಪೂರೈಸಿದ ಕುಮಾರಸ್ವಾಮಿ ಅವರು ಇಂದು ನಡೆಯಬೇಕಿದ್ದ ಗ್ರಾಮ ವಾಸ್ತವ್ಯ ಮತ್ತು ಜನತಾ ದರ್ಶನವನ್ನು ಮುಂದೂಡಿದ್ದಾರೆ.
ಇಂದು ಕಲಬುರಗಿಯ ಹೆರೂರಿನಲ್ಲಿ ಸಿಎಂ ಅವರ ಜನತಾ ದರ್ಶನ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಬೇಕಿತ್ತು, ಆದರೆ ಅನಿವಾರ್ಯಗಳಿಂದ ಸಿಎಂ ಅವರು ಆ ಕಾರ್ಯಕ್ರಮವನ್ನು ಮುಂದೂಡಿದ್ದಾರೆ.
ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಕತೆ ಹೇಳುವ ಚಿತ್ರಗಳು
ಹೆರೂರಿನಲ್ಲಿ ನಿನ್ನೆ ರಾತ್ರಿಯಿಂದಲೇ ಭಾರಿ ಮಳೆ ಸುರಿದಿದ್ದು, ಸಿಎಂ ಅವರ ಜನತಾ ದರ್ಶನ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳ ಸಂಪೂರ್ಣ ಕೆಸರಾಗಿದೆ. ವೇದಿಕೆ ಹಾಕಲಾಗಿದ್ದ ಜಾಗದ ಮುಂಬಾಗವಂತೂ ನೀರು ನಿಂತು ಕೆರೆಯಂತಾಗಿದೆ.
ನಿನ್ನೆ ಮಧ್ಯರಾತ್ರಿ ವರೆಗೆ ಚಂಡರಕಿ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ಕುಮಾರಸ್ವಾಮಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಇನ್ನೂ ಕೆಲವು ಶಾಸಕರು, ಸಚಿವರೊಂದಿಗೆ ಸಭೆ ನಡೆಸಿ ಇಂದಿನ ಗ್ರಾಮ ವಾಸ್ತವ್ಯ ಮತ್ತು ಜನತಾ ದರ್ಶನ ಕಾರ್ಯಕ್ರಮವನ್ನು ಮುಂದೂಡುವುದಾಗಿ ಘೋಷಿಸಿದರು.

ಹೆರೂರು ಗ್ರಾಮದ ಜನತೆಗೆ ನಿರಾಸೆ ಆಗಿದೆ
ಹೆರೂರು ಗ್ರಾಮದ ಜನತೆಗೆ ನಿರಾಸೆ ಆಗಿದೆ ಆದರೆ ನಿನ್ನೆ ರಾತ್ರಿ ಸುರಿದ ಭಾರಿ ಮಳೆ ಅಲ್ಲಿನ ಜನರಿಗೆ ಭರವಸೆ ಮೂಡಿಸಿದೆ. ರೈತರಿಗೆ ಉಲ್ಲಾಸ ಮೂಡಿಸಿದೆ. ಕಾರ್ಯಕ್ರಮ ರದ್ದಾದ ಬೇಸರವನ್ನು ಮಳೆ ಕಳೆದಿದೆ, ಹೆರೂರಿನಲ್ಲಿ ಆದಷ್ಟು ಶೀಘ್ರವಾಗಿ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಅಧಿವೇಶನ ನೋಡಿಕೊಂಡು ದಿನಾಂಕ ಘೋಷಣೆ
ವಿಧಾನಸಭೆ ಅಧಿವೇಶನದ ದಿನಾಂಕಗಳನ್ನು ನೋಡಿಕೊಂಡು, ಜುಲೈ ತಿಂಗಳಲ್ಲಿ ಗ್ರಾಮ ವಾಸ್ತವ್ಯದ ಎರಡನೇ ಹಂತದ ದಿನಾಂಕವನ್ನು ಘೋಷಿಸಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಆತ್ಮೀಯವಾಗಿ ಬೀಳ್ಕೊಟ್ಟ ಗ್ರಾಮಸ್ಥರು
ರಾತ್ರಿಯೆಲ್ಲಾ ಗ್ರಾಮದಲ್ಲಿ ತಂಗಿದ್ದ ಕುಮಾರಸ್ವಾಮಿ ಅವರು ಇಂದು ಬೆಳಿಗ್ಗೆ ಗ್ರಾಮದಿಂದ ಬೆಂಗಳೂರಿನತ್ತ ಹೊರಟಿದ್ದಾರೆ. ಗ್ರಾಮಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಆತ್ಮೀಯತೆಯಿಂದ ಬೀಳ್ಕೊಟ್ಟಿದ್ದಾರೆ.

ಹೈದರಾಬಾದ್ ಮೂಲಕ ಬೆಂಗಳೂರಿಗೆ ಪ್ರಯಾಣ
ಕುಮಾರಸ್ವಾಮಿ ಅವರು ಯಾದಗಿರಿಯಿಂದ ಹೈದರಾಬಾದ್ಗೆ ತೆರಳಿ, ಅಲ್ಲಿಂದ ಬೆಂಗಳೂರಿಗೆ ವಿಮಾನದ ಮೂಲಕ ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಲವು ಸಭೆಗಳಲ್ಲಿ ಕುಮಾರಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ. ದೇವೇಗೌಡ ಅವರನ್ನು ಭೇಟಿ ಮಾಡುವ ಸಾಧ್ಯತೆಯೂ ಇದೆ.












Click it and Unblock the Notifications