ಕರುನಾಡ ಹಬ್ಬಕ್ಕೆ ಕಲಬುರಗಿಯಲ್ಲಿ ಪ್ರತ್ಯೇಕತೆಯ ಕೂಗು
ಕಲಬುರಗಿ, ನವೆಂಬರ್ 01: ನಾಡಿನಾದ್ಯಂತ ಕನ್ನಡದ ಹಬ್ಬಕ್ಕೆ ಸಂತಸ ಸಡಗರ ಇರುವ ವೇಳೆ ಕಲಬುರಗಿಯಲ್ಲಿ ಮತ್ತೆ ಪ್ರತ್ಯೇಕ ರಾಜ್ಯದ ಕೂಗು ಪ್ರಾರಂಭವಾಗಿದೆ. ಈ ಹಿನ್ನೆಯಲ್ಲಿ ಇಂದು(ನ.1) ಅನೇಕ ಸಂಘಟನೆಗಳು, ಸಂಘ-ಸಂಸ್ಥೆಗಳು ಸರ್ದಾರ್ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಲು ಮುಂದಾಗಿವೆ.
ಹೈಕ ಭಾಗದ ಜಿಲ್ಲೆಗಳ ನಿರ್ಲಕ್ಷ್ಯ ಮತ್ತು ಅಭಿವೃದ್ಧಿಗೆ ರಾಜಕೀಯ ಪಕ್ಷಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಅ.31 ರಂದು ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯಿಂದ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಉದಯಕುಮಾರ್ ಖೇಳಗಿಕರ್, ಮುಖಂಡ ಉಮೇಶ ಕುಲಕರ್ಣಿ ನೇತೃತ್ವದಲ್ಲಿ ಕಲಬುರಗಿಯ ಜಗತ್ ವೃತ್ತದಿಂದ ಸರ್ದಾರ್ ಪಟೇಲ ವೃತ್ತ ಮಾರ್ಗವಾಗಿ ಡಿಸಿ ಕಚೇರಿವರೆಗೆ ಪಾದಯಾತ್ರೆ ನಡೆಯಿತು.

ಸೆ.27ರಂದು ಬಿಜೆಪಿ ಮಾಜಿ ಸಚಿವ ಉಮೇಶ್ ಕತ್ತಿ, ಪ್ರತೇಕ ರಾಜ್ಯ ಶತಸಿದ್ಧ, 20 ರಾಜ್ಯಗಳ ಪುನಾರಚನೆ ಮಾಡಲಾಗುವುದು ಅದರಲ್ಲಿ ಉತ್ತರ ಕರ್ನಾಟಕವು ಸೇರಿದೆ. ರಾಜ್ಯದ ಪತ್ಯೇಕ ಇಂದಿನ ಅಗತ್ಯಗಳಲ್ಲಿ ಒಂದು ಎಂದು ಹೇಳಿದ್ದರು.
ಇದೇ ರೀತಿ ಅಮಾಧಾನದಿಂದ ಕಲ್ಯಾಣ ಕರ್ನಾಟಕ ಪತ್ಯೇಕ ರಾಜ್ಯದ ಬೇಡಿಕೆ ಮುಂದಿರಿಸಿಕೊಂಡು ನ.2 2015ರಂದು ಪ್ರತ್ಯೇಕ ರಾಜ್ಯಧ್ವಜವನ್ನು ಪ್ರದರ್ಶನ ಮಾಡಲಾಗಿತ್ತು. ಪಂಚಜಿಲ್ಲೆ ಪ್ರತ್ಯೇಕ ಮಾಡಲು ಧ್ವಜಾರೋಹಣಕ್ಕೆ ಮುಂದಾದಾಗ ಹೋರಾಟ ಸಮಿತಿ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿದ್ದರು. ಮಧ್ಯಾಹ್ನದ ನಂತರ ಬಿಡುಗಡೆ ಮಾಡಿದ್ದರು.

ಹಿಂದಿನ ವರ್ಷ ಈ ಸಂಬಂಧ ಪ್ರತಿಕ್ರಯಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಕೆಲವು ಮನಸ್ಸುಗಳು ಪ್ರತ್ಯೇಕ ರಾಜ್ಯದ ದನಿಯೆತ್ತಿವೆ ಇದಕ್ಕೆ ಅರ್ಥವೇ ಇಲ್ಲ. ನಾಡಿನ ಕಲೆ, ನೆಲ, ಜಲದ ರಕ್ಷಣೆ ಎಲ್ಲರ ಮೇಲಿದೆ. ಕುಸಿಯುತ್ತಿರುವ ಜೀವನಮಟ್ಟ, ನೈತಿಕ ಮೌಲ್ಯ, ಮಾನವ ಸಂಪನ್ಮೂಲದ ಅಭಿವೃದ್ಧಿಗಾಗಿ ಶ್ರಮಿಸಲು ಕಂಕಣ ಬದ್ಧರಾಗಬೇಕೆಂದು ನಗರದ ವಿಕಾಸ ಮಂದಿರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಹೇಳಿದ್ದರು.
ಪ್ರಸ್ತುತ ಕಲಬುರಗಿಯಲ್ಲಿ ಮತ್ತೆ ರಾಜ್ಯೋತ್ಸವದಲ್ಲಿ ರಾಜ್ಯದ ವಿಂಗಡಣೆಗೆ ಅನೇಕ ಸಂಘ ಸಂಸ್ಥೆಗಳು ವಿವಿಧ ರೀತಿಯಲ್ಲಿ ಸಜ್ಜಾಗಿ ಮತ್ತೆ ಧ್ವಜಾರೋಹಣ ಮಾಡಲು ಮುಂದಾಗಿವೆ. ಅಲ್ಲದೆ ನಿನ್ನೆಯೇ ಅನೇಕ ಸಂಘಟನೆಗಳಿಗೆ ಜಾಗೃತಗೊಳ್ಳಲು ಪಾದಯಾತ್ರೆಯನ್ನೂ ಮಾಡಿ ಮುಗಿಸಿವೆ.












Click it and Unblock the Notifications