ನಳಿನ್ ಕುಮಾರ್ ಹೇಳಿಕೆ ಹಿಂದಿನ ಕಾರಣ ಬಿಚ್ಚಿಟ್ಟ; ಪ್ರಿಯಾಂಕ್ ಖರ್ಗೆ
ಕಲಬುರಗಿ, ಅಕ್ಟೋಬರ್ 21; "ಪ್ರಚಾರದ ಗೀಳಿನಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಕಾಂಗ್ರೆಸ್ ನಾಯಕರ ಮೇಲೆ ವೈಯಕ್ತಿಕ ದಾಳಿಗಳನ್ನು ಮಾಡುತ್ತಿದ್ದಾರೆ" ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಗುರುವಾರ ಕಲಬುರಗಿ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು, "ವ್ಯಕ್ತಿಯೊಬ್ಬ ಹತಾಶನಾದಾಗ ಏನೇನೋ ಮಾತನಾಡಲು ಶುರು ಮಾಡುತ್ತಾನೆ ಹಾಗೂ ದಾರಿ ತಪ್ಪುವುದು ಸಹಜ. ಕೆಲವೊಮ್ಮೆ ಹತಾಶೆ ತೀವ್ರಗೊಂಡಾಗ ಮದ್ಯಪಾನ ಮಾಡುತ್ತಾರೆ ಅಥವಾ ಡ್ರಗ್ ಕೂಡಾ ತೆಗೆದುಕೊಳ್ಳುತ್ತಾನೆ. ಬಹುಶಃ ಕಟೀಲ್ ಆ ಹಂತ ತಲುಪಿಲ್ಲ ಎಂದು ಭಾವಿಸುತ್ತೇನೆ" ಎಂದು ಟೀಕಿಸಿದರು.
ರಾಹುಲ್ ಗಾಂಧಿ ಡ್ರಗ್ ಪೆಡ್ಲರ್; ಕಟೀಲ್ ವಿವಾದಾತ್ಮಕ ಹೇಳಿಕೆ
"ಆದರೆ ಕೆಲವೊಮ್ಮೆ ಅವರು ಮಾತನಾಡುವುದು ನೋಡಿದರೆ ಅನುಮಾನ ಮೂಡುತ್ತಿದೆ. ಒಂದು ವೇಳೆ ಅವರಿಗೆ ವೈದ್ಯರ ಆಪ್ತ ಸಮಾಲೋಚನೆ ಅವಶ್ಯಕತೆ ಇದ್ದರೆ ಕಾಂಗ್ರೆಸ್ ಪಕ್ಷ ವೈದ್ಯರಿಂದ ಸಮಾಲೋಚನೆ ಕೊಡಿಸಲಿದೆ" ಎಂದು ಪ್ರಿಯಾಂಕ್ ಖರ್ಗೆ ಕುಟುಕಿದರು.
ಎಚ್ಡಿಕೆ ಒಂದು ವಾರ ಆರ್ಎಸ್ಎಸ್ ಶಾಖೆಗೆ ಬರಲಿ; ನಳಿನ್ ಅಹ್ವಾನ
"ಕಟೀಲ್ ಅವರನ್ನು ಸಿಎಂ ಹಾಗೂ ಯಡಿಯೂರಪ್ಪ ಅವರು ಓವರ್ ಶಾಡೋ ಮಾಡಿದ್ದಾರೆ. ಹಾಗಾಗಿ ಅವರ ಮಾತಿಗೆ ಅವರ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಮಾಧ್ಯಮಗಳು ಕಟೀಲ್ ಅವರಿಗೆ ಹೆಚ್ಚು ಪ್ರಚಾರ ಕೊಡುತ್ತಿಲ್ಲ. ಹಾಗಾಗಿ ಪ್ರಚಾರದ ಹಂಬಲದಿಂದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರನ್ನು ಡ್ರಗ್ ಪೆಡ್ಲರ್ ಎಂದಿದ್ದಾರೆ" ಎಂದು ಪ್ರಿಯಾಂಕ್ ಖರ್ಗೆ ದೂರಿದರು.
ಮುಂದಿನ ಸಿಎಂ ಅಭ್ಯರ್ಥಿ ಪ್ರಶ್ನೆ; ಕೋಪಗೊಂಡ ಯಡಿಯೂರಪ್ಪ?
"ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಡ್ರಗ್ಸ್ ದಂಧೆ ಹೆಚ್ಚಾಗುತ್ತಿದೆ. ಸ್ವತಃ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಡ್ರಗ್ ದಂಧೆಯಲ್ಲಿ ತೊಡಗಿ ಅರೆಸ್ಟ್ ಆಗಿದ್ದಾರೆ. ಮಣಿಪುರ, ಮಧ್ಯಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ ಹಾಗೂ ಪಂಜಾಬ್ಗಳಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಆದರೆ, ಕೇಂದ್ರ ಸರ್ಕಾರ ಆರೋಪಿಗಳ ರಕ್ಷಣೆಗೆ ಮುಂದಾಗಿತ್ತು" ಎಂದು ಆರೋಪಿಸಿದರು.
ಬಿಜೆಪಿಯವರೂ ಭಾಗಿಯಾಗಿದ್ದಾರೆ
"ಕರ್ನಾಟಕದಲ್ಲಿಯೂ ಡ್ರಗ್ ದಂಧೆ ಹೆಚ್ಚಾಗಿದ್ದು ಮಾದಕ ವಸ್ತುಗಳ ಸಾಗಾಣಿಕೆಗೆ ಇಡೀ ಏಷ್ಯಾದಲ್ಲೇ ಬೆಂಗಳೂರು ಹೇಳಿ ಮಾಡಿಸಿದ ಜಾಗದಂತಿದೆ. ಕಲಬುರಗಿ ಜಿಲ್ಲೆಯಲ್ಲಿ ಚಿಂಚೋಳಿಯಲ್ಲಿ ಸುಮಾರು 2600 ಕೆಜಿಯ 6 ಕೋಟಿ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದವರು ಬಿಜೆಪಿಯವರೇ. ಇನ್ನೂ ಬಿಜೆಪಿಯ ಸ್ಟಾರ್ ಪ್ರಚಾರಕಿ ಕೂಡಾ ಡ್ರಗ್ ದಂದೆಯ ಆರೋಪದಲ್ಲಿ ಅರೆಸ್ಟ್ ಆಗಿದ್ದಾರೆ" ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
"ಕಟೀಲ್ ಅವರದೇ ಪಕ್ಷ ಆಡಳಿತ ನಡೆಸುವ ನಮ್ಮ ರಾಜ್ಯದಲ್ಲಿ 2018 ರಲ್ಲಿ 285 ಪ್ರಕರಣಗಳಲ್ಲಿ 44 ಜನ ವಿದೇಶಿಯರು ಅರೆಸ್ಟ್ ಆಗಿದ್ದಾರೆ. 2019ರಲ್ಲಿ 768 ಪ್ರಕರಣಗಳಲ್ಲಿ 38 ವಿದೇಶಿಯರು ಹಾಗೂ 1260 ಸ್ಥಳೀಯರು ಅರೆಸ್ಟ್ ಆಗಿದ್ದಾರೆ ಮತ್ತು1053 ಕೆಜಿ ಡ್ರಗ್ ವಶಪಡಿಸಿಕೊಳ್ಳಲಾಗಿದೆ. 2020 ರಲ್ಲಿ 2766 ಪ್ರಕರಣದಲ್ಲಿ 70 ವಿದೇಶಿಯರು ಹಾಗೂ 3673 ಸ್ಥಳಿಯರು ಅರೆಸ್ಟ್ ಆಗಿದ್ದಾರೆ ಮತ್ತು 1912 ಕೆಜಿ ಡ್ರಗ್ ವಶಪಡಿಸಿಕೊಳ್ಳಲಾಗಿದೆ. 2021 ರ ಅಕ್ಟೋಬರ್ ವರೆಗೆ 3337 ಪ್ರಕರಣದಲ್ಲಿ 100 ಕ್ಕೂಹೆಚ್ಚು ವಿದೇಶಿಯರು ಹಾಗೂ 4210 ಸ್ಥಳೀಯರು ಅರೆಸ್ಟ್ ಆಗಿದ್ದಾರೆ ಮತ್ತು 3255 ಕೆಜಿ ಡ್ರಗ್ ಪಡಿಸಿಕೊಳ್ಳಲಾಗಿದೆ" ಎಂದು ಮಾಹಿತಿ ನೀಡಿದರು.
ನಿಮ್ಮ ಸರ್ಕಾರ ಏನು ಮಾಡುತ್ತಿದೆ?
"ಗೃಹ ಇಲಾಖೆ ಮಾಹಿತಿ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಕೊಕೇನ್ ಬಳಕೆ ದುಪ್ಪಟ್ಟಾಗಿದೆ. ನಿಮ್ಮದೇ ಸರಕಾರ ಇತ್ತಲ್ಲ ಏನು ಮಾಡಿದಿರಿ?. ಮಲೆನಾಡು, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ರೆಸಾರ್ಟ್ ಹಾಗೂ ಹೋಂ ಸ್ಟೇಗಳಲ್ಲಿ ಡ್ರಗ್ ದೊರಕುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಚಿಂಚೋಳಿ ಸೇರಿದಂತೆ ಡ್ರಗ್ ದಂಧೆ ಹೆಚ್ಚಾದ ಜಿಲ್ಲೆಯ ಶಾಸಕರನ್ನೇ ಹೊಣೆಗಾರರನ್ನಾಗಿ ಮಾಡಲಿ ಎಂದು ಲೆಹರ್ ಸಿಂಗ್ ರಾಜ್ಯಕ್ಕೆ ಪತ್ರ ಬರೆದಿದ್ದಾರೆ. ಡ್ರಗ್ನಿಂದಾಗಿ ರಾಜ್ಯದಲ್ಲಿ ದಿನವೊಂದಕ್ಕೆ ಮೂರು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಕ್ರೈಮ್ ವರದಿ ಪ್ರಕಾರ ದೇಶದಲ್ಲಿ 2018 ರಲ್ಲಿ 1230 ಜನ ಹಾಗೂ 2019 ರಲ್ಲಿ1113 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡ್ರಗ್ ನಿಯಂತ್ರಣಕ್ಕಾಗಿ ರಾಜ್ಯದ ಶಾಲೆ- ಕಾಲೇಜುಗಳಲ್ಲಿ ಗಳಲ್ಲಿ ಡ್ರಗ್ ವಿರೋಧಿ ಸಮಿತಿ ಮಾಡುವುದಾಗಿ ಸಿಎಂ ಹಾಗೂ ಆರೋಗ್ಯ ಸಚಿವರು ಹೇಳಿದ ಮಾತು ಇನ್ನೂ ಜಾರಿಗೆ ಬಂದಿಲ್ಲ" ಎಂದು ಪ್ರಿಯಾಂಕ್ ಖರ್ಗೆ ದೂರಿದರು.
ನಿಮ್ಮ ಗುಜರಾತ್ ಮಾದರಿ ಇದಾ?
"ಇತ್ತೀಚಿಗೆ ಗುಜರಾತ್ ನ ಅದಾನಿ ಬಂದರಲ್ಲಿ 21,000 ಕೋಟಿ ರೂ. ಮೌಲ್ಯದ 3000 ಕೆಜಿ ಡ್ರಗ್ ಸಿಕ್ಕಿದೆ. ಅದೇ ಗುಜರಾತ್ ನಲ್ಲಿ ಜೂನ್ ತಿಂಗಳಲ್ಲಿ 1.75 ಕೋಟಿ ವೌಲ್ಯದ 25,000 ಕೆಜಿ ತೂಕದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಈ ಡ್ರಗ್ ಅಫ್ಘಾನಿಸ್ತಾನ ಹಾಗೂ ಪಾಕಿಸ್ಥಾನದಿಂದ ಬಂದಿರುವ ಮಾಹಿತಿ ಇದೆ. ಇದೇನಾ ಗುಜರಾತ್ ಮಾಡಲ್? ಕಳೆದ 7 ವರ್ಷದಲ್ಲಿ ಡ್ರಗ್ ಮಾಫಿಯಾ ವ್ಯಾಪಕವಾಗಿದೆ. ಡ್ರಗ್ ದಂಧೆಯಿಂದ ಬರುವ ಹಣವನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎನ್ನುವ ಮಾತಿದೆ. ಈ ಕುರಿತು ಕಟೀಲ್ ಯಾಕೆ ಮಾತನಾಡುತ್ತಿಲ್ಲ" ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
"ಯುವಕರಿಗೆ ನೌಕರಿ ಇಲ್ಲ, ಉದ್ಯೋಗ ಕೊಡುವ ಬದಲು ನಶೆಯನ್ನು ಹಂಚುತ್ತಿದ್ದೀರಾ?. ಎನ್ಸಿಬಿಯಲ್ಲಿ ಡಿಜಿ ಪೋಸ್ಟ್ ಖಾಲಿ ಇದೆ. ಯಾಕೆ ಆ ಹುದ್ದೆ ತುಂಬಿಲ್ಲ?. ಕಟೀಲ್ ಅವರೇ ನಿಮಗೆ ನಿಜವಾದ ಶಕ್ತಿ ಇದ್ದರೆ ರಾಹುಲ್ ಗಾಂಧಿಗೆ ಪ್ರಶ್ನೆ ಮಾಡುವ ಬದಲು ಅಮಿತ್ ಶಾಗೆ ಪ್ರಶ್ನೆ ಮಾಡಿ. ಕಟೀಲ್ ನಮ್ಮ ನಾಯಕರನ್ನು ಟೀಕಿಸಿದರೆ ನಾವು ಅವರ ನಾಯಕರ ಕುರಿತು ಮಾತನಾಡುತ್ತೇವೆ" ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದರು.
ಎರಡು ವರ್ಷಗಳಿಂದ ಏನು ಮಾಡುತ್ತಿದ್ದಾರೆ?
ಕೋಲಿ ಕಬ್ಬಲಿಗ ಹಾಗೂ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ಕುರಿತಾಗಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, " ಸಂತೋಷ ಮಾಡಲಿ. ಚಿಟಿಕೆ ಹೊಡೆಯುವುದರೊಳಗೆ ಮಾಡುವುದಾಗಿ ಹೇಳುತ್ತಾರೆ. ಕಳೆದ ಎರಡು ವರ್ಷದಿಂದ ಚಿಟಿಕೆ ಹೊಡೆಯುವುದರಲ್ಲೇ ಇದ್ದಾರೆ" ಎಂದು ವ್ಯಂಗ್ಯವಾಡಿದರು.
"5/3/2020 ರಂದು ಚಿಂಚೋಳಿ ಎಂಪಿ ಅವರು ಪ್ರಧಾನ ಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಿ ಬಂಜಾರ ಸಮುದಾಯವನ್ನು ಎಸ್ಟಿ ಸೇರಿಸಲು ಮನವಿ ಮಾಡಿದ್ದಾರೋ ಇಲ್ಲವೋ ಎಂದು ಹಲವಾರು ಬಾರಿ ಕೇಳಿದ್ದೇನೆ. ಉತ್ತರ ಕೊಟ್ಟಿಲ್ಲ, ಇತ್ತೀಚಿಗೆ ನಾನು ಎದುರಾದರೆ ಮುಖ ತಿರುಗಿಸಿಕೊಂಡು ಹೋಗುತ್ತಿದ್ದಾರೆ. ಒಂದು ವೇಳೆ ನಿಮಗೆ ಎಲ್ಲಾದರೂ ಸಿಕ್ಕರೆ ನೀವೆ ಕೇಳಿ" ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಅಸಂವಿಧಾನಿಕ ಪದ ಅಲ್ಲ
"ಬಿಜೆಪಿಯವರು ಸೋನಿಯಾ, ರಾಹುಲ್, ಖರ್ಗೆ ಬಗ್ಗೆ ಏನೇನೂ ಹೇಳಿದ್ದಾರೆ ನಮಗೆ ಗೊತ್ತಿದೆ. ಇತ್ತೀಚಿಗೆ ಮೋದಿ ಬಗ್ಗೆ ಹೆಬ್ಬೆಟ್ ಗಿರಾಕಿ ಎಂದು ಹೇಳಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಸರಿ ಹೆಬ್ಬೆಟ್ ಎನ್ನುವುದು ಅಸಂವಿಧಾನಿಕ ಶಬ್ಧ ಅಲ್ಲದಿದ್ದರೂ ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಅದು ಪಕ್ಷದ ಹೇಳಿಕೆ. ಅದು ಆದ ನಂತರವೂ ಕಟೀಲ್ ರಾಹುಲ್ ಗಾಂಧಿ ಬಗ್ಗೆ ಡ್ರಗ್ ಪೆಡ್ಲರ್ ಎಂದಿದ್ದು" ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಕುರಿತಾಗಿ ಸಲೀಂ ಹಾಗೂ ಉಗ್ರಪ್ಪ ನಡುವಿನ ಸಂಭಾಷಣೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ರಹೆಮಾನ್ ಖಾನ್ ನೇತೃತ್ವದ ಸಮಿತಿ ಸಲೀಂ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಹಾಗೂ ಉಗ್ರಪ್ಪನವರಿಗೆ ನೋಟಿಸು ಜಾರಿ ಮಾಡಲಾಗಿದೆ. ಸಲೀಂ ಕೇವಲ ಮಾಧ್ಯಮ ಸಂವಹನಾಧಿಕಾರಿ, ಅವರ ಮಾತನ್ನು ಇಷ್ಟೊಂದು ಮಹತ್ವ ಕೊಡುವ ಅಗತ್ಯವಿಲ್ಲ. ಬಿಜೆಪಿ ಬಗ್ಗೆ ಯತ್ನಾಳ್, ಯೋಗೇಶ್ವರ ಹಾಗೂ ವಿಶ್ವನಾಥ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತಮಾಡಿದ್ದಾರಲ್ಲ ಅಂತಹ ದೊಡ್ಡವರ ಬಗ್ಗೆ ಹೇಳೋದು ಬಿಟ್ಟು ಸಲೀಂ ಬಗ್ಗೆ ಕೇಳ್ತಿರಲ್ಲ" ಎಂದರು.