ಕಲಬುರಗಿ: ಗುಂಡೇಟು ತಿಂದ ರೌಡಿಗಳ ಮೇಲೆ ಗೂಂಡಾ ಕಾಯ್ದೆ-ಅಲೋಕ್ ಕುಮಾರ್
ಕಲಬುರಗಿ, ಅಕ್ಟೋಬರ್ 8: ಜಿಲ್ಲೆಯಲ್ಲಿ ರೌಡಿ ಶೀಟರ್ ಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ.
ನಗರದ ಹೊರವಲಯದ ಡಬರಬಾದ್ ಬಳಿ ಫೈರಿಂಗ್ ನಡೆದಿದ್ದು, ರೌಡಿ ಶೀಟರ್ ಗಳಾದ ಶಿವುಕುಮಾರ ಮತ್ತು ಚೇತನ್ ಮೇಲೆ ಗುಂಡು ಹಾರಿಸಲಾಗಿದೆ.
ಇಬ್ಬರ ಕಾಲಿಗೂ ಗುಂಡು ಬಿದ್ದಿದ್ದು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ರೌಡಿ ಶೀಟರ್ ಗಳು ದರೋಡೆಗೆ ಹೊಂಚು ಹಾಕಿದ್ದರು. ಇದರ ಖಚಿತ ಮಾಹಿತಿ ಪಡೆದು ಪೊಲೀಸರು ರೌಡಿಗಳ ಬಂಧನಕ್ಕೆ ಹೋಗಿದ್ದರು. ಈ ವೇಳೆ ಪುಡಿ ರೌಡಿಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನ ನಡೆಸಿದ್ದಾರೆ.
ಹೀಗಾಗಿ ಆತ್ಮರಕ್ಷಣೆಗಾಗಿ ಆರ್ಜೆ ನಗರ ಠಾಣೆ ಪಿಎಸ್ಐ ಅಕ್ಕಮಹಾದೇವಿ ಹಾಗೂ ಅಶೋಕನಗರ ಠಾಣೆ ಸಿಪಿಐ ಜೇಮ್ಸ್ ಮಿನೆಜಸ್ ಫೈರಿಂಗ್ ನಡೆಸಿದ್ದಾರೆ.
ಘಟನೆಯಲ್ಲಿ ಪಿಎಸ್ಐ ಅಕ್ಕಮಹಾದೇವಿ ಮತ್ತು ಪೇದೆಯಪಬ್ಬರಿಗೂ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಲಬುರಗಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು ಕೇಸ್ ದಾಖಲಿಸಲಾಗಿದೆ.
ಪೊಲೀಸ್ ಸಿಬ್ಬಂದಿಗಳಿಗೆ ನಗದು ಬಹುಮಾನ
"ಇದೇ ಮೊದಲ ಬಾರಿಗೆ ಮಹಿಳಾ ಎಸ್ಐ ಗುಂಡು ಹಾರಿಸಿ ಕಾರ್ಯಾಚರಣೆ ನಡೆಸಿದ್ದಾರೆ. ನಾವು ಅವರ ಹೆಸರನ್ನು 'ಮುಖ್ಯಮಂತ್ರಿ ಪದಕ'ಕ್ಕೆ ಶಿಫಾರಸ್ಸು ಮಾಡುತ್ತೇವೆ. ಉಳಿದ ಪೊಲೀಸರಿಗೆ ನಗದು ಬಹುಮಾನ ಘೋಷಿಸುತ್ತೇವೆ," ಎಂದು ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ರೌಡಿ ಶೀಟರ್ ಗಳ ವಿರುದ್ಧ ಗೂಂಡಾ ಕಾಯ್ದೆ ಹಾಕಲಾಗುವುದು. ಕನಿಷ್ಠ ಒಂದು ವರ್ಷಗಳ ಕಾಲ ಅವರು ಜೈಲಿನಿಂದ ಹೊರ ಬರದಂತೆ ಮಾಡಲಾಗುವುದು ಎಂದು ಐಜಿಪಿ ಅಲೋಕ್ ಕುಮಾರ್ ಗುಡುಗಿದ್ದಾರೆ.
Kalaburagi (Karnataka): 2 cops, including a lady inspector, injured when they opened fire on 2 rowdy-sheeters to prevent them from escaping pic.twitter.com/o0bAkXoMhH
— ANI (@ANI) October 8, 2017