2017ರ ಫೆಬ್ರವರಿ ಅಂತ್ಯದವರೆಗೆ ಹೊಲಗಳಿಗೆ ನೀರು:ಶರಣಪ್ರಕಾಶ್
ಬೆಣ್ಣೆತೋರಾ, ಗಂಡೋರಿನಾಲಾ ಮತ್ತು ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗಳಿಂದ 2017ರ ಫೆಬ್ರವರಿ ಅಂತ್ಯದವರೆಗೆ ರೈತರ ಹೊಲಗಳಿಗೆ ನೀರು ಹರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಅಧಿಕಾರಿಗಳಿಗೆ ಆದೇಶಿಸಿದರು.
ಕಲಬುರಗಿ, ನವೆಂಬರ್. 03 : ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಂಪೂರ್ಣ ಭರ್ತಿಯಾಗಿರುವ ಚಿತ್ತಾಪೂರ ತಾಲೂಕಿನ ಹೆರೂರ.ಕೆ ಗ್ರಾಮದಲ್ಲಿರುವ ಬೆಣ್ಣೆತೋರಾ ಜಲಾಶಯಕ್ಕೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಬಾಗಿನ ಅರ್ಪಿಸಿದರು.
ಚಿತ್ತಾಪೂರ ತಾಲೂಕಿನ ಹೆರೂರ ಕೆ ಗ್ರಾಮದ ಹತ್ತಿರ ನಿರ್ಮಿಸಲಾದ ಬೆಣ್ಣೆತೋರಾ ಯೋಜನೆಯ ಅಣೆಕಟ್ಟಿನಲ್ಲಿ ಬಾಗಿನ ಅರ್ಪಿಸಿದ ನಂತರ ಹಿಂಗಾರು ಹಂಗಾಮಿನ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಈ ಬಾರಿ ಮಳೆ ಚೆನ್ನಾಗಿ ಬಿದ್ದಿರುವುದರಿಂದ ಈ ಭಾಗದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ.
ಬೆಣ್ಣೆತೊರಾ, ಗಂಡೋರಿನಾಲಾ ಮತ್ತು ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗಳಿಂದ 2017ರ ಫೆಬ್ರವರಿ ಅಂತ್ಯದವರೆಗೆ ರೈತರ ಅವಶ್ಯಕತೆಗೆ ಅನುಗುಣವಾಗಿ ಹೊಲಗಳಿಗೆ ನೀರು ಹರಿಸಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು.
ಬೆಣ್ಣೆತೋರಾ ಮತ್ತು ಗಂಡೋರಿನಾಲಾ ಜಲಾಶಯಗಳಿಂದ ನವೆಂಬರ್ 5 ರಿಂದ ಮತ್ತು ಕೆಳಹಂತದ ಮುಲ್ಲಾಮಾರಿ ಜಲಾಶಯದಿಂದ ನವೆಂಬರ್ 15 ರಿಂದ ನೀರು ಬಿಡಬೇಕು. ಜಲಾಶಯಗಳ ಮುಖ್ಯ ಕಾಲುವೆಗಳಲ್ಲಿರುವ ಹೂಳು ಮತ್ತು ಗಿಡ-ಗಂಟಿಗಳನ್ನು ಸ್ವಚ್ಛಗೊಳಿಸುವ ಮೂಲಕ ಕಾಲುವೆಗಳ ಕೊನೆಯಲ್ಲಿರುವ ರೈತರಿಗೂ ನೀರು ತಲುಪುವಂತೆ ನೋಡಿಕೊಳ್ಳಬೇಕು.
ಹಾಗೂ ಎಲ್ಲ ಯೋಜನೆಗಳಲ್ಲಿ ನೀರು ಬಳಕೆದಾರರ ಸಂಘಗಳನ್ನು ರಚಿಸಬೇಕು. ಕಾಲುವೆಗಳು ಒಡೆದುಹೋದಲ್ಲಿ ಅವುಗಳನ್ನು ಶೀಘ್ರವಾಗಿ ದುರಸ್ತಿ ಮಾಡಿಸಬೇಕು ಎಂದರು.
ಗಂಡೋರಿನಾಲಾ ಯೋಜನೆ
ಗಂಡೋರಿ ನಾಲಾ ಅಣೆಕಟ್ಟಿನಲ್ಲಿ 1.8 ಟಿ.ಎಂ.ಸಿ. ನೀರು ಸಂಗ್ರಹವಿದೆ. ಈ ಪೈಕಿ 1.3 ಟಿ.ಎಂ.ಸಿ. ನೀರು ಬಳಿಸಿಕೊಂಡು ಒಟ್ಟು 7000 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಈ ಯೋಜನೆಯಲ್ಲಿ ಮುಖ್ಯ ಮತ್ತು ವಿತರಣಾ ಕಾಲುವೆಗಳ ನಿರ್ಮಾಣ ಪೂರ್ಣಗೊಂಡಿದೆ. ಎಡದಂಡೆ ಮತ್ತು ಬಲದಂಡೆಯ ಒಟ್ಟು 90 ಕಿ.ಮಿ. ಕಾಲುವೆಯಲ್ಲಿ ನೀರು ಹರಿಸಬೇಕು ಎಂದು ಸಚಿವರು ತಿಳಿಸಿದರು.
ಕೆಳದಂಡೆ ಮುಲ್ಲಾಮಾರಿ ಯೋಜನೆ
ಈ ಯೋಜನೆಯಲ್ಲಿ 1.74 ಟಿ.ಎಂ.ಸಿ. ನೀರು ಸಂಗ್ರಹವಿದೆ. ಒಟ್ಟು 82 ಕಿ.ಮಿ.ಉದ್ದದ ಕಾಲುವೆಯ ಮೂಲಕ 7770 ಹೆಕ್ಟರ್ ಪ್ರದೇಶದ ಪೈಕಿ ಶೇ.80 ರಷ್ಟು ಪ್ರದೇಶಕ್ಕೆ ನೀರು ಹರಿಸಬೇಕು ಎಂದು ಸಚಿವರು ಸೂಚಿಸಿದರು.
ಬೆಣ್ಣೆತೋರಾ ಯೋಜನೆ
ಈ ಯೊಜನೆಯ ಕಾಲುವೆ ಜಾಲದ ಆಧುನಿಕರಣಕ್ಕೆ ಸರ್ಕಾರ 177 ಕೋಟಿ ರೂ.ಗಳನ್ನು ನೀಡಿದೆ. ಮುಖ್ಯ ಕಾಲುವೆ, ವಿತರಣಾ ಕಾಲುವೆಗಳನ್ನು ನವೀಕರಿಸುವುದರ ಜೊತೆಗೆ ಹೊಲಗಾಲುವೆಗಳನ್ನು ನಿರ್ಮಿಸಲು ಹೆಚ್ಚಿನ ಒತ್ತು ನೀಡಬೇಕು. ಹೊಲಗಾಲುವೆಗಳನ್ನು ಆಯಾ ಗ್ರಾಮ ಪಂಚಾಯತಿಯಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಿಸಲು ಯೋಜನೆ ರೂಪಿಸಬೇಕು. ಈ ಯೋಜನೆಯ ಬಲದಂಡೆ ಕಾಲುವೆಯ ನವೀಕರಣ 34 ಕಿ.ಮೀ.ವರೆಗೆ ಪೂರ್ಣಗೊಂಡಿದೆ. ಅಲ್ಲಿಯವರೆಗೆ ರೈತರ ಹೊಲಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು.
ಒಟ್ಟು 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು
ಆದಷ್ಟು ಬೇಗ ಎಡದಂಡೆ ಮತ್ತು ಬಲದಂಡೆ ಕಾಲುವೆಯ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಿ ಒಟ್ಟು 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಬೇಕು. ಕಾಡಾ ವತಿಯಿಂದ ಭೂಮಿಯನ್ನು ಸಮತಟ್ಟಾಗಿಸಬೇಕು ಮತ್ತು ಹೊಲಗಾಲುವೆಗಳನ್ನು ನಿರ್ಮಿಸಬೇಕು ಎಂದು ಸಚಿವರು ತಿಳಿಸಿದರು.