ಮಲ್ಲಿಕಾರ್ಜುನ ಖರ್ಗೆಗೆ ಆಘಾತ: ಮೊದಲ ಬಾರಿಗೆ ಸೋಲು
ಬೆಂಗಳೂರು, ಮೇ 23: ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎನಿಸಿದ್ದ ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭಾರಿ ಆಘಾತ ಉಂಟಾಗಿದೆ. ಬಿಜೆಪಿಯ ಉಮೇಶ್ ಜಾಧವ್ ಅವರು ಖರ್ಗೆ ಅವರನ್ನು 83 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿ ಕಾಂಗ್ರೆಸ್ಗೆ ಮುಖಭಂಗ ಉಂಟುಮಾಡಿದ್ದಾರೆ. ಈ ಫಲಿತಾಂಶದ ಅಧಿಕೃತ ಘೋಷಣೆ ಬಾಕಿ ಉಳಿದಿದೆ.
ಒಮ್ಮೆಯೂ ಸೋಲಕಾಣದ ಮಲ್ಲಿಕಾರ್ಜುನ ಖರ್ಗೆ, ವಿರೋಧಪಕ್ಷದ ನಾಯಕನಾಗಿದ್ದರು. ಉತ್ತರ ಕರ್ನಾಟಕದ ಭಾಗಗಳಲ್ಲಿ ವ್ಯಾಪಕ ಪ್ರಭಾವಳಿ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಉಮೇಶ್ ಜಾಧವ್ ಸುಲಭದ ತುತ್ತಾಗಲಿದ್ದಾರೆ ಎಂದು ಭಾವಿಸಲಾಗಿತ್ತು.
ಆದರೆ, ಮೋದಿ ಅಲೆ ಜಾಧವ್ ಅವರ ಕೈ ಹಿಡಿದಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಶಾಸಕ ಸ್ಥಾನ ತ್ಯಜಿಸಿ ಬಿಜೆಪಿಗೆ ಬಂದಿದ್ದ ಉಮೇಶ್ ಜಾಧವ್ ಅವರಿಗೆ ಲೋಕಸಭೆ ಟಿಕೆಟ್ ನೀಡಲಾಗಿತ್ತು. ಖರ್ಗೆ ಅವರಂತಹ ಘಟಾನುಘಟಿ ನಾಯಕರ ಎದುರು ಉಮೇಶ್ ಜಾಧವ್ ಗೆಲುವು ಅಸಾಧ್ಯ ಎಂದೇ ಭಾವಿಸಲಾಗಿತ್ತು. ಅಲ್ಲದೆ, ಸ್ಥಳೀಯ ಬಿಜೆಪಿ ನಾಯಕರ ಅಸಮಾಧಾನ ಕೂಡ ಅವರಿಗೆ ಎರವಾಗಲಿದೆ ಎನ್ನಲಾಗಿತ್ತು.

ಈ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿದೆ. ಕಾಂಗ್ರೆಸ್ನ ಭದ್ರಕೋಟೆಗೆ ನುಗ್ಗಿದ ಮೋದಿ ಬಳಗ ಖರ್ಗೆ ಅವರ ವರ್ಚಸ್ಸನ್ನು ಕುಗ್ಗಿಸಿ ಮೇಲುಗೈ ಸಾಧಿಸಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿಯ ರೇವೂ ನಾಯಕ್ ಬೆಳಮಗಿ ಅವರನ್ನು 74,733 ಮತಗಳಿಂದ ಸೋಲಿಸಿದ್ದರು. 1972 ರಿಂದ 2009ರವರೆಗೂ ಸತತವಾಗಿ ಹತ್ತು ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು.
ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.












Click it and Unblock the Notifications