ಮಾತೆ ಮಾಣಿಕೇಶ್ವರಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು
ಕಲಬುರಗಿ, ಮಾರ್ಚ್ 08 : ಕಲಬುರಿಯ ಮಾತೆ ಮಾಣಿಕೇಶ್ವರಿ ಲಿಂಗೈಕ್ಯರಾಗಿದ್ದಾರೆ. ಮಾತೆಯ ಅಂತಿಮ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ವಿವಿಧ ಗಣ್ಯರು ಮಾತೆಯ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಮಠದ ಅವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾತೆ ಮಾಣಿಕೇಶ್ವರಿ ಶನಿವಾರ ರಾತ್ರಿ ಲಿಂಗೈಕ್ಯರಾದರು. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಗುಂದಿಯಲ್ಲಿ ಮಾತೆ ಮಾಣಿಕೇಶ್ವರಿ (87) ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಾತೆ ಮಾಣಿಕೇಶ್ವರಿ ಲಿಂಗೈಕ್ಯ; ಅಂತಿಮ ದರ್ಶನಕ್ಕೆ ಜನ ಸಾಗರ
ಕರ್ನಾಟಕದ ವಿವಿಧ ಗಣ್ಯರು ಮಾತೆ ಮಾಣಿಕೇಶ್ವರಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಆಶ್ರಮದ ರಾಜಗೋಪುರದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಠದ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮಾತೆ ಮಾಣಿಕೇಶ್ವರಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಅಪಾರ ಭಕ್ತರನ್ನು ಹೊಂದಿದ್ದಾರೆ. ಪ್ರತಿವರ್ಷದ ಶಿವರಾತ್ರಿಯಂದು ಮಾತ್ರ ಗುಹೆಯಿಂದ ಹೊರಬಂದು ಅವರು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾರೆ.
|
ಮುಖ್ಯಮಂತ್ರಿಗಳ ಸಂತಾಪ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು, "ಮಹಾಯೋಗಿನಿ, ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಅವರು ನಮ್ಮನ್ನಗಲಿರುವ ಸುದ್ದಿ ದುಃಖಕರ. ಪ್ರತಿವರ್ಷ ಶಿವರಾತ್ರಿಯಂದು ಲಕ್ಷಾಂತರ ಭಕ್ತರಿಗೆ ದರ್ಶನ ನೀಡುತ್ತಿದ್ದರು. ಮಾತೆಯವರ ಅಗಲಿಕೆ ವೈಯಕ್ತಿಕವಾಗಿಯೂ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಡಾ. ಅಶ್ವಥ ನಾರಾಯಣ
"ಶ್ರೀಶ್ರೀಶ್ರೀ ಮಹಾಯೋಗಿನಿ ರೂಪರಹಿತ ಅಹಿಂಸಾಯೋಗೀಶ್ವರಿ ವೀರಧರ್ಮಜ ಮಾತಾ ಮಾಣಿಕೇಶ್ವರಿಯವರು ದೈವಾಧೀನರಾದ ಸುದ್ದಿ ಕೇಳಿ ದುಃಖವುಂಟಾಗಿದೆ. ಕೆಲ ದಿನಗಳ ಹಿಂದಷ್ಟೇ ಮಾತೆಯವರ ಸೇವೆಯವಕಾಶ ಸಿಕ್ಕಿದ್ದು ಸೌಭಾಗ್ಯ. ಪಂಚಭೂತಗಳಲ್ಲಿ ಒಂದಾದ ಮಾತೆಯವರು ಭಕ್ತರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ" ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವಥ ನಾರಾಯಣ ಸಂತಾಪ ಸೂಚಿಸಿದ್ದಾರೆ.
|
ಡಾ. ಉಮೇಶ್ ಜಾಧವ್
"ಮಾಣಿಕ್ಯಗಿರಿ ನಡೆದಾಡುವ ದೇವರು ಮಾತಾ ಮಾಣಿಕೇಶ್ವರಿ ಅಮ್ಮನವರ ಲಿಂಗೈಕ್ಯರಾಗಿದ್ದು ನಮ್ಮ ಭಾಗಕ್ಕೆ ತುಂಬಲಾರದ ನಷ್ಟ, ನಿಮ್ಮನ್ನು ಕಳೆದುಕೊಂಡ ಅನೆಕ ಭಕ್ತರು ಅನಾಥರಾಗಿದ್ದಾರೆ. ಓಂ ಶಾಂತಿ" ಎಂದು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಟ್ವೀಟ್ ಮಾಡಿದ್ದಾರೆ.
ಗೋವಿಂದ ಕಾರಜೋಳ
"ಪ್ರತಿ ಶಿವರಾತ್ರಿಯಂದು ವಿಶೇಷ ಸಂದೇಶ ನೀಡುತ್ತಿದ್ದರು.ಅವರ ಅಗಲಿಕೆಯಿಂದ ಈ ನಾಲ್ಕು ರಾಜ್ಯಗಳಲ್ಲಿ ಲಕ್ಷಾಂತರ ಭಕ್ತ ಸಮೂಹವು ದುಃಖದ ಮಡುವಿನಲ್ಲಿದ್ದು, ತುಂಬಲಾರದ ನಷ್ಟ ಉಂಟಾಗಿದೆ. ನಾಲ್ಕೂ ರಾಜ್ಯಗಳ ಭಕ್ತ ಸಮೂಹಕ್ಕೆ , ಅನುಯಾಯಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಉಪ ಮುಖ್ಯಮಂತ್ರಿ ಡಾ. ಗೋವಿಂದ ಕಾರಜೋಳ ಸಂತಾಪ ಸೂಚಿಸಿದ್ದಾರೆ.
ಮಠದಲ್ಲಿಯೇ ಅಂತ್ಯಕ್ರಿಯೆ
ಮಾತೆ ಮಾಣಿಕೇಶ್ವರಿ ಅವರ ಅಂತ್ಯಕ್ರಿಯೆ ಮಠದ ಆವರಣದಲ್ಲಿ ನಡೆದಯಲಿದೆ. ಅವರೇ ಶಿವಲಿಂಗದ ಆಕಾರದ ಸಮಾಧಿಯನ್ನು ನಿರ್ಮಿಸಿಕೊಂಡಿದ್ದು, ವೀರಶೈವ ಲಿಂಗಾಯತ ಧರ್ಮದ ಪ್ರಕಾರ ಅಂತಿಮ ವಿಧಿವಿಧಾನ ನಡೆಯಲಿದೆ.