Railway Station: ಕಲಬುರಗಿ 'ರೈಲ್ವೆ ಡಿವಿಜನ್' ಕನಸು ನನಸಾಗುತ್ತಾ: ಇದರ ಪ್ರಯೋಜನಗಳೇನು? ಯಾಕೆ ಬೇಕು?
ಬೆಂಗಳೂರು, ಜನವರಿ 03: ಕರ್ನಾಟಕದಲ್ಲಿ ಅತ್ಯಧಿಕ ತೊಗರಿ ಬೆಳೆ ಬೆಳೆಯುವ ಜಿಲ್ಲೆಗಳ ಪೈಕಿ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯು ಒಂದು. ಇಲ್ಲಿ ರೈಲ್ವೆ ಡಿವಿಜನ್ (ವಿಭಾಗೀಯ ಕಚೇರಿ) ಆರಂಭಿಸಬೇಕು ಎಂಬುದು ಸುಮಾರು ನಾಲ್ಕು ದಶಕಗಳ ಕನಸು. ಈವರೆಗೂ ಈಡೇರದ ಕಾರಣ ಮತ್ತೆ ಆ ಬಗ್ಗೆ ಆಗ್ರಹಗಳು ಜೋರಾಗಿವೆ. ಈ ಬಾರಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರ ಬಳಿಗೂ ಈ ಪ್ರಸ್ತಾವನೆ ಹೋಗಿದೆ.
ಹೌದು, ಕಲಬುರಗಿ ಭಾಗದ ಜನರು 1984ರಿಂದಲೂ ಇಲ್ಲೊಂದು ರೈಲ್ವೆ ಡಿವಿಜನ್ ಆರಂಭಿಸಬೇಕು ಎಂದು ಮನವಿ ಮಾಡುಲತ್ತಲೇ ಬಂದಿದ್ದಾರೆ. ಈ ಸಲ ಮತ್ತೆ ರೈಲ್ವೆ ರಾಜ್ಯ ಸಚಿವರಾದ ವಿ ಸೋಮಣ್ಣ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸುಮಾರು 40 ವರ್ಷಗಳ ಹಿಂದೆ (1984) ನ್ಯಾಯಮೂರ್ತಿ ಸರಿನ್ ಅವರು ಕಲಬುರಗಿಯಲ್ಲಿ ಡಿವಿಜನ್ ಆರಂಭಿಸುವಂತೆ ಕೋರಿ ಅಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಅವರೇ ಈ ಕನಸು ಮೊಳಕೆಯೊಡೆಯಲು ಕಾರಣರಾದವರು.
ಹಾಗಾದರೆ ಕಲಬುರಗಿ ರೈಲ್ವೆ ಡಿವಿಜನ್ ಏಕೆ ಬೇಕು? ಅದರ ಪ್ರಯೋಜನಗಳು ಏನು? ಯಾಕೆ ಇಲ್ಲಿನ ಜನರು ಈ ಪರಿ ಒತ್ತಾಯಿಸುತ್ತಿದ್ದಾರೆ ಎಂಬುದರ ಪಟ್ಟಿ ಇಲ್ಲಿದೆ.
ಜಿಲ್ಲೆಗೆ ರೈಲ್ವೆ ಡಿವಿಜನ್ ಏಕೆ ಬೇಕು ?
* ಪ್ರಯಾಣಿಕರಿಂದಲೇ ವರ್ಷಕ್ಕೆ ಕಲಬುರಗಿ ಜಿಲ್ಲೆ ಒಂದರಿಂದಲೇ ರೈಲ್ವೆ ಇಲಾಖೆಗೆ ಬರೋಬ್ಬರಿ 143.3 ಕೋಟಿ ಆದಾಯ ಪಾವತಿಯಾಗುತ್ತದೆ.
* ಜಿಲ್ಲೆಯ ಸಿಮೆಂಟ್ ಕಾರ್ಖಾನೆಗಳಿಂದ ರೈಲ್ವೆ ಇಲಾಖೆಯು ರೂಪಾಯಿ 927.3 ಕೋಟಿ ಆದಾಯ ಸಂಗ್ರಹಿಸುತ್ತದೆ.
* 2023-24ನೇ ಸಾಲಿನಲ್ಲಿ ಕಲಬುರಗಿ ರೈಲ್ವೆ ನಿಲ್ದಾಣದಿಂದಲೆ ಒಟ್ಟು ಬರೋಬ್ಬರಿ 108.1 ಕೋಟಿ ಆದಾಯ ಬಂದ ಕಾರಣ ನಿಲ್ದಾಣವು NSG -2 ಗೆ ಅರ್ಹತೆ ಪಡೆದುಕೊಂಡಿತು. ಕಲಬುರಗಿ ನಿಲ್ದಾಣ NSG -3 ಯಿಂದ NSG -2ಗೆ ಅರ್ಹತೆ ಪಡೆಯಿತು.
* ಪ್ರತಿದಿನ ಕಲಬುರಗಿ ಜಿಲ್ಲೆಯಿಂದ 1.48 ಕೋಟಿ ಪ್ರಯಾಣಿಕರು ರೈಲ್ವೆ ಮೂಲಕ ಪ್ರಯಾಣಿಸುತ್ತಿದ್ದಾರೆ ಮತ್ತು ಕೇವಲ ಕಲಬುರಗಿ ರೈಲು ನಿಲ್ದಾಣ1 ಕೋಟಿಗೂ ಹೆಚ್ಚು ಜನ ಪ್ರಯಾಣಿಸುತ್ತಾರೆ.
* ಕಲಬುರಗಿ ಜಿಲ್ಲೆ ಒಂದರಿಂದಲೇ ರೈಲ್ವೆ ಇಲಾಖೆಗೆ 1082 ಕೋಟಿ ರೂಪಾಯಿಗೂ ಅಧಿಕ ಆದಾಯ ಬರುತ್ತಿದೆ. ಇದು ಸೋಲಾಪುರ ರೈಲ್ವೆ ಡಿವಿಜನ್ ಆದಾಯಕ್ಕಿಂತಲೂ ಹೆಚ್ಚು ಎಂಬುದನ್ನು ಗಮನಿಸಬೇಕಾದ ಸಂಗತಿ.
ಕಲಬುರಗಿಯಲ್ಲಿ ರೈಲ್ವೆ ಡಿವಿಜನ್ ಆದರೆ ಪ್ರಯೋಜನವೇನು?
* ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ನ್ಯಾಯ ಕೊಟ್ಟಂತಾಗುತ್ತದೆ.
* ಕಲಬುರಗಿ ನಿಲ್ದಾಣದಿಂದ ಹೆಚ್ಚು ರೈಲುಗಳು ಸಂಚಾರ ಆರಂಭಿಸುತ್ತವೆ. ಸರಕು ಸಾಗಣೆ ಸರಳವಾಗುತ್ತದೆ.
* ಕಲಬುರಗಿ ಭಾಗದ ಭಾಗದ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿ ಜೊತೆಗೆ ಪ್ರವಾಸೋದ್ಯಮಕ್ಕೆ ಒತ್ತು ಸಿಕ್ಕಂತಾಗುತ್ತದೆ.
* ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ ಅನೇಕ ಆಸ್ಪತ್ರೆಗಳು ತಲೆ ಎತ್ತಿವೆ. ರೈಲ್ವೆ ಡಿವಿಜನ್ ಆದರೆ ಇದೊಂದು ಹಾಸ್ಪಿಟಲ್ ಹಬ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
* ಜಿಲ್ಲೆಯಲ್ಲಿ ಹೊಸ ಉದ್ಯಮಗಳು ತಲೆ ಎತ್ತಲು ಇದು ಸಹಕಾರಿ ಆಗಲಿದೆ. ಇದರಿಂದ ನಮ್ಮ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿ ಆಗುತ್ತದೆ. ಆರ್ಥಿಕವಾಗಿ, ಕೈಗಾರಿಕೆ ದೃಷ್ಟಿಯಿಂದಲೂ ಡಿವಿಜನ್ ಅಗತ್ಯವಿದೆ.
* ರೈತರು ಬೆಳೆದ ಬೆಳೆಗಳು, ಹೂವು, ಹಣ್ಣುಗಳು ಸೇರಿದಂತೆ ತೋಟಗಾರಿಕಾ ಉತ್ಪನ್ನಗಳು ಹಾಗೂ ಅನೇಕ ವಸ್ತುಗಳಿಗೆ ಬೆಲೆ ಸಿಗಲಿದೆ. ಅವನ್ನು ಬೇರೆ ಬೇರೆ ಸ್ಥಳಕ್ಕೆ ರವಾನಿಸಲು, ಉತ್ಪಾದನೆ ಹೆಚ್ಚಿಸಲು ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಇದರಿಂದ ರೈತರಿಗ ಆದಾಯ ಹೆಚ್ಚಾಗಿ ಅವರ ಬದುಕು ಹಸನಾಗುತ್ತದೆ.
* ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಇದೆ. ರೈಲ್ವೆ ಡಿವಿಜನ್ ಆಗುವುದರಿಂದ ಹೆಚ್ಚು ಜನ ರೈಲು ಮೂಲಕ ಆಗಮಿಸಿ ಕಲಬುರಗಿ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ.
* ಕಲಬುರಗಿ ರೈಲ್ವೆ ಡಿವಿಜನ್ ಘೋಷಣೆ ಆದರೆ ಯಾದಗಿರಿ, ರಾಯಚೂರು, ಬೀದರ್, ಬಾಗಲಕೋಟೆ, ವಿಜಯಪುರ ರೈಲು ನಿಲ್ದಾಣಗಳೂ ಸೇರುವುದರಿಂದ ಇನ್ನೂ ಹೆಚ್ಚಿನ ಆದಾಯ ಗಳಿಸಲಿದೆ ಎಂದು ಕಲಬುರಗಿ ಭಾಗದ ಮುಖಂಡರು, ಬುದ್ಧಿ ಜೀವಿಗಳು ವಿ.ಸೋಮಣ್ಣ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications