ಸ್ವಂತ ಬಲದಿಂದ ಜೆಡಿಎಸ್ ಅಧಿಕಾರಕ್ಕೆ; ಎಚ್ಡಿಕೆ ವಿಶ್ವಾಸ
ಕಲಬುರಗಿ, ಆಗಸ್ಟ್ 31: ರಾಜ್ಯದ ಕಲಬುರಗಿ, ಬೆಳಗಾವಿ ಮತ್ತು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಇದೇ ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದೆ.
ಮೂರೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಸ್ಥಳೀಯ ಪ್ರಬಲ ಪಕ್ಷೇತರ ನಾಯಕರಿಗೆ ಜಿದ್ದಾಜಿದ್ದಿನ ಕಣವಾಗಿದೆ. ರಾಜಕೀಯ ಪಕ್ಷಗಳ ಮುಖಂಡರುಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಅದೇ ರೀತಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಲಬುರಗಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್ಡಿಕೆ, "ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತದೆ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

"ವಿಪಕ್ಷ ಕಾಂಗ್ರೆಸ್ ನಾಯಕರು ಪ್ರತಿನಿತ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅವರ ಅವಧಿಯಲ್ಲಿ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ," ಎಂದು ವ್ಯಂಗ್ಯವಾಡಿದ್ದಾರೆ.
ರೈತರು ಬೆಳೆಯುವ ಬೆಳೆಯನ್ನು ರಫ್ತು ಮಾಡಲು ಉತ್ತೇಜನ ನೀಡಲು ಸಂಸ್ಥೆ ಪ್ರಾರಂಭ ಮಾಡಬೇಕು ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಕುರಿತಂತೆ, "ರಾಜ್ಯದಿಂದ ಸಾವಿರಾರು ಕೋಟಿ ರೂಪಾಯಿ ಕೃಷಿ ಉತ್ಪನ್ನ ರಫ್ತಾಗುತ್ತದೆ. ಅದರ ಪರಿಜ್ಞಾನವೇ ಕೇಂದ್ರ ಸಚಿವರಿಗೆ ಇಲ್ಲ, ಅಧಿಕಾರಿಗಳಿಗೂ ಇಲ್ಲ. ಒಟ್ಟಿನಲ್ಲಿ ಈ ಸರ್ಕಾರದಲ್ಲಿ ಅಭಿವೃದ್ಧಿಪರ ಕಾರ್ಯಕ್ರಮ ಕಾಣಲು ಸಾಧ್ಯವಿಲ್ಲ," ಎಂದು ಕಿಡಿಕಾರಿದರು.
"ಕೋವಿಡ್ ಕಾರಣದಿಂದಾಗಿ ಸರ್ಕಾರದ ಜನ ವಿರೋಧಿ ಧೋರಣೆಯನ್ನು ಖಂಡಿಸಲು ಬೀದಿಗಿಳಿದು ಹೋರಾಟ ಮಾಡಲು ಆಗಲಿಲ್ಲ. ಆದರೆ ಆಡಳಿತರೂಢ ಬಿಜೆಪಿ ಸರ್ಕಾರದ ಪರವಾಗಿ ನಾನಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರು ಯಡಿಯೂರಪ್ಪ ಪರವಾಗಿ ಸಾಫ್ಟ್ ಕಾರ್ನರ್ ಮಾತುಗಳನ್ನಾಡಿದ್ದಾರೆ. ಆದರೆ ನಮಗೆ ಸಾಫ್ಟ್ ಕಾರ್ನರ್ ಅವಶ್ಯಕತೆ ಇಲ್ಲ. ಅವಶ್ಯಕತೆ ಬಂದಾಗ ಹೋರಾಟಕ್ಕೆ ಧುಮುಕುತ್ತೇವೆ. ರಾಜಕಾರಣದಲ್ಲಿ ಇತ್ತೀಚೆಗೆ ಸಿದ್ಧಾಂತಗಳಲ್ಲಿ ಬೆನ್ನು ತಟ್ಟಿಕೊಳ್ಳುವ ಸ್ಥಿತಿ ಇಲ್ಲ. ಅಲ್ಲದೇ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರೇ ನಮ್ಮ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಇರಲಿಲ್ಲ," ಎಂದು ಹೇಳಿದರು.
ಇನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರ ರಾಜ್ಯ ಪ್ರವಾಸದ ಬಗ್ಗೆ ಮಾತನಾಡಿದ ಎಚ್ಡಿಕೆ, "ಪಕ್ಷ ಸಂಘಟನೆ ವಿಚಾರವಾಗಿ ನಾನು ತಪ್ಪು ಅಂತ ಹೇಳಲ್ಲ ಮತ್ತು ಅದರ ಬಗ್ಗೆ ಸಣ್ಣದಾಗಿ ಮಾತನಾಡುವುದಿಲ್ಲ. ಪ್ರಸ್ತುತ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಅಂತಾರೆ, ಆದರೆ ಚುನಾವಣೆಗಳಲ್ಲಿ ಎಲ್ಲಿಂದ ಈ ಮಾರ್ಗಸೂಚಿ ಜಾರಿಯಾಗುತ್ತಿದೆ?," ಎಂದು ಪ್ರಶ್ನಿಸಿದರು.
"ಧಿಡೀರನೆ ಚುನಾವಣಾ ಆಯೋಗ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಮಾಡಿದ್ದರಿಂದ ಚುನಾವಣೆ ಅನಿವಾರ್ಯವಾಯಿತು. ಸದ್ಯ ಹೊಸದಾಗಿ ಪಕ್ಷ ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ ಜೆಡಿಎಸ್ ಬಾಗಿಲು ತೆರೆದಿದೆ. ಹೋಗುವವರು ಹೋಗಬಹುದು, ಇರುವವರು ಇರಬಹುದು ಎಂದು ಕಡ್ಡಿ ತುಂಡು ಮಾಡಿದಂತೆ," ತಿಳಿಸಿದರು.
ಇದೇ ಸಂದರ್ಭದಲ್ಲಿ, "ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವೈಫಲ್ಯತೆ ಇದೆ. ಆರೋಪಿಗಳು ಈ ಹಿಂದೆ ಇದೇ ರೀತಿ ಅನೇಕ ಕೃತ್ಯವೆಸಗಿದ್ದಾರೆ ಎಂದು ಹೇಳುವ ಪೊಲೀಸ್ ಅಧಿಕಾರಿಗಳು, ಇಷ್ಟು ದಿನ ಏನು ಮಾಡುತ್ತಿದ್ದರು," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.












Click it and Unblock the Notifications