'ಸೋಮವಾರ ತೊಗರಿ ಖರೀದಿಗೆ ಪ್ರೋತ್ಸಾಹಧನ ನೀಡುವ ಅಂತಿಮ ತೀರ್ಮಾನ'
ಕಲಬುರಗಿ, ಡಿಸೆಂಬರ್. 26 : ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿ ಖರೀದಿಗೆ 5050ರು. ಬೆಂಬಲ ಬೆಲೆ ನಿಗದಿಪಡಿಸಿದೆ.
ತೊಗರಿ ಖರೀದಿಗೆ ರಾಜ್ಯ ಸರ್ಕಾರದಿಂದಲೂ ಪ್ರೋತ್ಸಾಹಧನ ನೀಡುವ ನಿಟ್ಟಿನಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಸೋಮವಾರ ಸಚಿವ ಸಂಪುಟದ ಉಪಸಮಿತಿಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಭಾನುವಾರ ಕಲಬುರಗಿಯಲ್ಲಿ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರ 80ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಮಾತನಾಡಿ, ಕಳೆದ ಸಲವೂ ರಾಜ್ಯ ಸರ್ಕಾರ ತೊಗರಿ ಖರೀದಿಗೆ 500 ರೂ. ಪ್ರೋತ್ಸಾಹಧನ ನೀಡಿತ್ತು ಎಂದರು.
ರಾಜ್ಯದಲ್ಲಿ ಬರ ನಿರ್ವಹಣೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದು, ಇದಕ್ಕೆ ಹಣದ ಕೊರತೆಯಿಲ್ಲ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ 324 ಕೋಟಿ ರೂ. ಹಣ ಲಭ್ಯವಿದ್ದು, ನೀರು, ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ಉದ್ಯೋಗ ಒದಗಿಸಲು ಆದ್ಯತೆ ಮೇರೆಗೆ ಖರ್ಚು ಮಾಡಿ ಬರ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ತಿಳಿಸಲಾಗಿದೆ.
ಇದರಲ್ಲಿ ಲೋಪ ಕಂಡು ಬಂದರೆ ಆಯಾ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಕೆ ಸಹ ನೀಡಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ ಅವರು ಕ್ರಿಸಮಸ್ ಹಬ್ಬದ ದಿನದಂದೇ ಹುಟ್ಟಿರುವುದರಿಂದ ಅವರಿಗೂ ಹಾಗೂ ಕರ್ನಾಟಕದ ಸಮಸ್ತ ಜನತೆಗೂ ಕ್ರಿಸಮಸ್ ಹಬ್ಬದ ಶುಭಾಶಯ ಕೋರಿದ ಮುಖ್ಯಮಂತ್ರಿಗಳು ಧರ್ಮಸಿಂಗ್ ಅವರು ಅಪಾರ ತಾಳ್ಮೆ, ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಗೌರವಿಸುವ ಸಂಯಮಶೀಲ ಹಾಗೂ ದೊಡ್ಡ ಪ್ರಜಾಪ್ರಭುತ್ವವಾದಿಯಾಗಿದ್ದಾರೆ.
ಹೈದ್ರಾಬಾದ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ 371(ಜೆ) ಜಾರಿಯಲ್ಲಿ ಧರ್ಮಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಐತಿಹಾಸಿಕ ಮತ್ತು ಚರಿತ್ರಾರ್ಹವಾಗಿದೆ ಎಂದು ಹೇಳಿದರು.