12 ಲಕ್ಷಕ್ಕೆ ಸರಕಾರಿ ಕೆಲಸ ಕೊಡಿಸುತ್ತಿದ್ದ ಗ್ಯಾಂಗ್ ಖತರ್ನಾಕ್ ತಂತ್ರ
ಕಲಬುರಗಿ, ಮಾರ್ಚ್ 6 : ಇಲ್ಲಿ ಖತರ್ನಾಕ್ ಗ್ಯಾಂಗ್ ವೊಂದು ಪೊಲೀಸರ ಬಲೆಗೆ ಬಿದ್ದಿದೆ. ಕೆಪಿಎಸ್ ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಕೆಲಸ ಗಿಟ್ಟಿಸಲು ಅಡ್ಡ ದಾರಿ ಮೂಲಕ ಸಹಾಯ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಇಲ್ಲಿನ ಅಶೋಕನಗರ ಪೊಲೀಸರು ಅಫಜಲಪುರ ನಿವಾಸಿ ಚಂದ್ರಕಾಂತ್ ಮತ್ತು ಯಾದಗಿರಿ ಜಿಲ್ಲೆಯ ಸುರಪುರ ಮೂಲದ ಭೀಮರಾಯ್ ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ- ಪ್ರಾಥಮಿಕ ಶಾಲೆ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಮೆಹಮೂದ್ ನದಾಫ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಚಿನ್ನ ಪರೀಕ್ಷಕನಿಂದ ಬ್ಯಾಂಕಿಗೆ 50 ಲಕ್ಷ ವಂಚನೆ
ಪರೀಕ್ಷೆಯಲ್ಲಿ ಉತ್ತೀರ್ಣ ಆಗುವುದಕ್ಕೆ ಉದ್ಯೋಗಾಕಾಂಕ್ಷಿಗಳಿಂದ ಈ ತಂಡ 10 ರಿಂದ 12 ಲಕ್ಷ ರುಪಾಯಿ ಹಣ ಪಡೆಯುತ್ತಿತ್ತು. ಪರೀಕ್ಷೆ ವೇಳೆ ಅಭ್ಯರ್ಥಿಗಳಿಗೆ ಸಿಮ್ ಕಾರ್ಡ್ ಜೋಡಿಸಿ, ಸೂಕ್ಷ್ಮ ಮೈಕ್ರೊಫೋನ್ ಉಪಕರಣ ನೀಡುತ್ತಿದ್ದರು. ಈ ಮೂಲಕ ಪ್ರಶ್ನೆಗಳನ್ನು ಪಡೆದು, ಉತ್ತರ ನೀಡುತ್ತಿದ್ದರು.
ಹೀಗೆ, ಇಲ್ಲಿವರೆಗೂ ಹಲವರಿಗೆ ಅಕ್ರಮವಾಗಿ ಉದ್ಯೋಗ ಕೊಡಿಸಿರುವ ಬಗ್ಗೆ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನು ಕಳೆದ ಫೆಬ್ರವರಿ 25 ರಂದು ನಡೆದಿದ್ದ ಎಫ್ ಡಿಎ ಪರೀಕ್ಷೆಯಲ್ಲಿನ ಅಕ್ರಮ ಬಗ್ಗೆ ಕೆಲವರಿಂದ ದೂರು ಕೂಡ ದಾಖಲಾಗಿದೆ ಎಂದು ಅಶೋಕನಗರ ಠಾಣೆ ಪಿಐ ಬಸವರಾಜ್ ಗುರುಲಿಂಗಪ್ಪ ತೇಲಿ ತಿಳಿಸಿದ್ದಾರೆ. ದೂರಿನ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದು, ಸಂಪೂರ್ಣ ಮಾಹಿತಿ ಹೊರಬೀಳಬೇಕಿದೆ.