ಅನಂತ್ಕುಮಾರ್ ಹೆಗಡೆ ಒಬ್ಬ ವಿದೂಷಕ: ಸಿದ್ದರಾಮಯ್ಯ
ಕಲಬುರಗಿ, ಡಿಸೆಂಬರ್ 16: ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ಮಾಡಿದರೆ ಪಾರದರ್ಶತೆ ಇರುತ್ತದೆ ಹಾಗಾಗಿ ಮತಯಂತ್ರದ ಬದಲು ಬ್ಯಾಲೆಟ್ ಪೇಪರ್ ಬಳಸಿದರೆ ಉತ್ತಮ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಅಪ್ಜಲ್ಪುರದಲ್ಲಿ ಆಯೋಜಿಸಿದ್ದ ನವಕರ್ನಾಟಕ ನಿರ್ಮಾಣ ಯಾತ್ರೆಯ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇವಿಎಂ ಮಷೀನ್ಗಳ ದುರಪಯೋಗತೆ ಬಗ್ಗೆ ಎಚ್ಚರವಾಗಿದ್ದುಕೊಂಡೇ ನಾವು ಚುನಾವಣೆ ಎದುರಿಸಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಗತ್ತಿನ ಮುಂದುವರೆದ ದೇಶಗಳು ಕೂಡ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ಮಾಡುತ್ತಿವೆ, ಹಾಗಿರುವಾಗ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಿದರೆ ತೊಂದರೆಯಾದರೂ ಏನು? ಕೇಂದ್ರ ಸರಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಬಿಜೆಪಿ ಕೋಮು ಬೆಂಕಿ ಹಚ್ಚುತ್ತಿದೆ
ಬಿಜೆಪಿ ಪಕ್ಷಕ್ಕೆ ತಪರಾಕಿ ಹಾಕಿದ ಸಿದ್ದರಾಮಯ್ಯ ಅವರು ರಾಜ್ಯದ ಹಲವೆಡೆ ಕೋಮು ಬೆಂಕಿ ಹಚ್ಚಿದ್ದು ಬಿಜೆಪಿಯವರು ಎಂದರು. ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಫೇಸ್ಬುಕ್ ಪೋಸ್ಟ್ ಬಗ್ಗೆ ಮಾತನಾಡಿದ ಅವರು 'ಸಿದ್ರಾಮಯ್ಯ ನಿಮಗೆ ತಪರಾಕಿ ಬೇಕಾ ? ಸಾಕಾ ? ಎನ್ನುತ್ತಾರೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ. ಕೇಂದ್ರ ಸಚಿವರಾದವರು ಮಾತನಾಡುವ ಶೈಲಿಯಾ ಇದು? ಉತ್ತರ ಕನ್ನಡದಲ್ಲಿ ಬೆಂಕಿ ಹಚ್ಚಿದ್ದು ಬಿಜೆಪಿಯವರೇ ಅನ್ನೋದಕ್ಕೆ ಇಷ್ಟು ಸಾಕಲ್ವಾ ? ಎಂದು ಪ್ರಶ್ನಿಸಿದರು. ಅನಂತ್ಕುಮಾರ್ ಹೆಗಡೆ ಒಬ್ಬ ವಿದೂಷಕ ಎಂದು ಅವರು ಮೂದಲಿಸಿದರು.

ದಾಖಲೆ ಬಿಡುಗಡೆ ಮಾಡಲಿ
ಯಡಿಯೂರಪ್ಪ ಬಗ್ಗೆಯೂ ಭಾಷಣದಲ್ಲಿ ಪ್ರಸ್ತಾಪ ಮಾಡಿದ ಅವರು ಯಡಿಯೂರಪ್ಪ ಪುಂಗಿ ಊದುವುದರಲ್ಲಿ ನಿಸ್ಸೀಮ ಆದ್ರೆ ಅವರ ಬುಟ್ಟಿ ಒಳಗಡೆ ಹಾವೇ ಇಲ್ಲ ಎಂದು ವ್ಯಂಗ್ಯ ಮಾಡಿದರು. 'ಪದೇ ಪದೇ ಸಿಎಂ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡ್ತೀನಿ ಅಂತಾರೆ ಅವರ ಬಳಿ ದಾಖಲೆ ಇದ್ರೆ ಬಿಡುಗಡೆ ಮಾಡಲಿ' ಎಂದು ಸವಾಲು ಹಾಕಿದರು.
ರಾಜ್ಯ ರಾಜಕೀಯದಲ್ಲಿ ಯಡಿಯೂರಪ್ಪ ಅಷ್ಟು ಸುಳ್ಳು ಹೇಳುವ ರಾಜಕಾರಣಿ ಮತ್ತೊಬ್ಬರು ಇಲ್ಲ ಎಂದ ಅವರು ಬಿಜೆಪಿ ನಾಯಕರು ಎಲ್ಲಿಗೆ ಕರೆದರೂ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲು ಸಿದ್ಧನಿದ್ದೇನೆ ಎಂದು ಹೇಳಿದರು.

ಮೈನಾರಿಟಿ ಕಮಿಷನ್ಗೆ ಕಳಿಸ್ತೀನಿ
ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಲಿಂಗಾಯತ ಮತ್ತು ವೀರಶೈವ ಎರಡೂ ಗುಂಪು ಒಟ್ಟಾಗಿ ಬನ್ನಿ ಚರ್ಚೆ ಮಾಡೋಣ ಎಂಬ ಸಲಹೆ ಕೊಟ್ಟಿದ್ದೆ ಆದರೆ ಅವರು ಅದಕ್ಕೆ ತಯಾರಿಲ್ಲ ಎಂದರು.
5 ಪ್ರಮುಖ ಸಂಘಟನೆಗಳಿಂದ ಲಿಂಗಾಯತ ಪ್ರತ್ಯೇಕ ಮಾಡುವಂತೆ ಮನವಿ ಬಂದಿದೆ, ಎಲ್ಲ ಮನವಿಗಳನ್ನು ಮೈನಾರಿಟಿ ಕಮಿಷನ್ಗೆ ಕಳಿಸುತ್ತೇನೆ ಅವರೇ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಇನ್ನೂ ಸಮಯ ಇದೆ
ಗುಜರಾತ್ ಚುನಾವಣಾ ಫಲಿತಾಂಶ ರಾಜ್ಯ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂದು ಸಿದ್ದರಾಮಯ್ಯ ಅವರು ಸಮೀಕ್ಷೆಗಳನ್ನು ನೋಡಿ ಈಗಲೇ ನಿರ್ಧಾರಕ್ಕೆ ಬರುವುದು ಸರಿಯಲ್ಲ, ಫಲಿತಾಂಶದ ದಿನದ ವರೆಗೆ ಕಾಯೋಣ ಎಂದರು.












Click it and Unblock the Notifications