ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ : ವಿಶೇಷತೆಗಳು
ಕಲಬುರಗಿ, ಮೇ 20 : ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಶೇ 70.72ರಷ್ಟು ಮತದಾನವಾಗಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.
'ಮೇ 19ರ ಭಾನುವಾರ ಚಿಂಚೋಳಿ ಮೀಸಲು (ಪ.ಜಾ.) ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಿತು. ಶಾಂತಿಯುತವಾಗಿ ಮತದಾನ ನಡೆದಿದೆ' ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ್ ತಿಳಿಸಿದ್ದಾರೆ.
ಬೆಳಗ್ಗೆ 9 ಗಂಟೆಗೆ ಶೇ. 7.88 ರಷ್ಟು ಮತದಾನವಾಗಿತ್ತು. 11 ಗಂಟೆಗೆ ಶೇ. 23.12 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಗೆ ಶೇ. 53.66 ರಷ್ಟಕ್ಕೆ ಮತದಾನ ಪ್ರಮಾಣ ಏರಿಕೆ ಆಯಿತು. ಬಿಸಿಲಿನ ತಾಪಮಾನ ತಗ್ಗಿ ಹೊತ್ತು ಇಳಿಯುತ್ತಿದ್ದಂತೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಅಂತಿಮವಾಗಿ ಅಂದಾಜು ಶೇಕಡ 70.72 ರಷ್ಟು ಮತದಾನವಾಯಿತು.
ಚಿಂಚೋಳಿಯ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆಗೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ವೆಂಕಟೇಶಕುಮಾರ ಅವರು ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು.

ಮತ ಚಲಾಯಿಸಿದ ದಂಪತಿಗಳು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಮಶೆಟ್ಟಿ-ನಾಗವೇಣಿ ಹಾಗೂ ವೀರಣ್ಣ-ಲಕ್ಷ್ಮೀ ಎಂಬ ನವ ದಂಪತಿಗಳು ಮದುವೆ ಛತ್ರದಿಂದ ನೇರವಾಗಿ ರಟಕಲ್ ಗ್ರಾಮದಲ್ಲಿನ ಮತಗಟ್ಟೆಗೆ ತೆರಳಿ ತಮ್ಮ ಮತ ಚಲಾಯಿಸಿದರು. ಚಿಂಚೋಳಿ ಕ್ಷೇತ್ರದ ಚಿಮ್ಮ ಇದಲಾಯಿ ಗ್ರಾಮದಲ್ಲಿ ಮಧುಮಗ ವೀರಭದ್ರಪ್ಪ ಅವರು ತಮ್ಮ ಅಮೂಲ್ಯವಾದ ಮತ ಚಲಾಯಿಸಿದರು.

ವಯೋವೃದ್ಧೆಯಿಂದ ಮತದಾನ
ಕಾಳಗಿ ಪಟ್ಟಣದ ಮತಗಟ್ಟೆ ಸಂಖ್ಯೆ 215ರಲ್ಲಿ 105 ವರ್ಷದ ವಯೋವೃದ್ಧೆ ಬಸಮ್ಮ ಅವರು ವ್ಹೀಲ್ ಚೇರ್ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

ಕಣದಲ್ಲಿರುವ ಅಭ್ಯರ್ಥಿಗಳು
ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ.ಅವಿನಾಶ್ ಜಾಧವ್, ಕಾಂಗ್ರೆಸ್-ಜೆಡಿಎಸ್ನಿಂದ ಸುಭಾಷ್ ರಾಥೋಡ್ ಅವರು ಅಭ್ಯರ್ಥಿಗಳಾಗಿದ್ದಾರೆ. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಚುನಾವಣೆ ಮೇಲೆ ಕಣ್ಣು
ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಮೈತ್ರಿ ಸರ್ಕಾರಕ್ಕೆ ಮುಖಭಂಗವಾಗಲಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಪ್ರತಿಷ್ಠೆ ಚುನಾವಣೆಯಲ್ಲಿ ಅಡಗಿದೆ.












Click it and Unblock the Notifications