ಚಿಂಚೋಳಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ರದ್ದು ಮಾಡುವಂತೆ ಮನವಿ
ಕಲಬುರಗಿ, ಮೇ 01: ಚಿಂಚೋಳಿ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಸಲ್ಲಿಸಿರುವ ನಾಮಪತ್ರವನ್ನು ರದ್ದು ಮಾಡಬೇಕೆಂದು ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಕೆಲವು ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಿಜೆಪಿ ನಾಯಕರಾದ ಅಶ್ವಥ್ನಾರಾಯಣ, ದತ್ತಗುರು ಹೆಗಡೆ, ಎನ್.ಪ್ರಕಾಶ್, ಎ.ಎಚ್.ಆನಂದ್, ಛಲವಾದಿ ನಾರಾಯಣಸ್ವಾಮಿ ಚಿಂಚೋಳಿ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಅವರ ನಾಮಪತ್ರ ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಸುಭಾಷ್ ರಾಥೋಡ್ ಗುಲ್ಬರ್ಗ ಜಿಲ್ಲೆಯ ಆಳಂದ, ಕಲಬುರಗಿ ದಕ್ಷಿಣ, ಕಲಬುರಗಿಯ ಚಿಂಚೋಳಿ ಹಾಗೂ ಗುಲ್ಬರ್ಗ ದಕ್ಷಿಣದಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ಸುಭಾಷ್ ರಾಥೋಡ್ ನಾಲ್ಕು ಕಡೆ ಮತಪಟ್ಟಿಯಲ್ಲಿ ಹೆಸರು ಹೊಂದಿರುವುದರ ಜೊತೆಗೆ ಅಷ್ಟೇ ಸಂಖ್ಯೆಯ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಒಂದಕ್ಕಿಂತಲೂ ಹಲವು ಕಡೆ ಚುನಾವಣಾ ಗುರುತಿನ ಚೀಟಿ ಹೊಂದುವುದು ಚುನಾವಣಾ ನೀತಿಯ ಉಲ್ಲಂಘನೆ ಆಗಿದ್ದು, ಕೂಡಲೆ ಅವರ ನಾಮಪತ್ರವನ್ನು ರದ್ದು ಮಾಡಬೇಕೆಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
ಒಂದಕ್ಕಿಂತ ಹೆಚ್ಚು ಕಡೆ ಚುನಾವಣಾ ಗುರುತಿನ ಚೀಟಿ ಹೊಂದುವುದು ಶಿಕ್ಷಾರ್ಹ ಅಪರಾಧ, ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ರದ್ದು ಮಾಡದಿದ್ದರೆ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಬಿಜೆಪಿ ಹೇಳಿದೆ.
ಚಿಂಚೋಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುಭಾಷ್ ರಾಥೋಡ್ ನಾಮಪತ್ರ ಸಲ್ಲಿಸಿದ್ದಾರೆ, ಅವರಿಗೆ ಎದುರಾಗಿ ಬಿಜೆಪಿಯಿಂದ ಅವಿನಾಶ್ ಜಾಧವ್ ಅವರು ಸ್ಪರ್ಧಿಸಿದ್ದಾರೆ.












Click it and Unblock the Notifications