ಲಗ್ನಪತ್ರಿಕೆಯಲ್ಲಿ ಸುಖಾಗಮನ ಕೋರಿದವರ ಮೇಲೂ ಕೇಸು ಜಡಿದ್ರು
ಕಲಬುರಗಿಯಲ್ಲಿ ಬಾಲ್ಯ ವಿವಾಹ ತಡೆಯಲು ಪೊಲೀಸರು ತೆರಳಿದ ವೇಳೆ ನವದಂಪತಿ ಪರಾರಿಯಾಗಿದ್ದು, ಪೋಷಕರು, ಅರ್ಚಕರು, ಲಗ್ನಪತ್ರಿಕೆಯಲ್ಲಿ ಸುಖಾಗಮನ ಬಯಸುವವರು ಎಂದು ಹೆಸರಿದ್ದವರೂ ಸೇರಿ ಒಂಬತ್ತು ಮಂದಿ ವಿರುದ್ಧ ದೂರು ದಾಖಲಾಗಿದೆ
ಕಲಬುರಗಿ, ಏಪ್ರಿಲ್ 25: ಲಗ್ನಪತ್ರಿಕೆಯಲ್ಲಿ ಸುಖಾಗಮನ ಬಯಸುವವರು ಅಂತ ಯಾರಾದರೂ ನಿಮ್ಮ ಹೆಸರು ಹಾಕ್ತಾರೆ ಅಂದರೆ ಸ್ವಲ್ಪ ಹುಷಾರಾಗಿರಬೇಕು. ಸ್ವಲ್ಪ ಏನಲ್ಲ, ಜಾಸ್ತಿಯೇ ಹುಷಾರಾಗಿರಬೇಕು. ಈ ವರದಿಯನ್ನು ಓದಿದರೆ ಯಾಕೆ ಅಂತ ನಿಮಗೇ ಗೊತ್ತಾಗುತ್ತದೆ. ಚಿತ್ತಾಪುರ ತಾಲೂಕಿನ ಭೀಮೇಶ್ವರ ದೇವಾಲಯದಲ್ಲಿ ಸೋಮವಾರ ಮದುವೆ ನಡೆಯುತ್ತಿತ್ತು.
ಆಗ ದಿಢೀರನೆ ಪೊಲೀಸರು ಬಂದಿದ್ದಾರೆ. ಇವರನ್ನು ನೋಡುತ್ತಿದ್ದ ಹಾಗೆ ನವದಂಪತಿಯೇ ಮಂಟಪದಿಂದ ಜೂಟ್ ಹೇಳಿದ್ದಾರೆ. ಇನ್ನೇನ್ರಿ ಮತ್ತೆ 14 ವರ್ಷದ ಹುಡುಗಿ ಹಾಗೂ 24 ವರ್ಷದ ಹುಡುಗಿಗೆ ಮದುವೆ ನಡೆಯುತ್ತಿದೆ ಅಂತ ಸುದ್ದಿ ಸಿಕ್ಕಿದರೆ ಪೊಲೀಸರು ಸುಮ್ಮನಿರುತ್ತಾರಾ? ಬಾಲ್ಯವಿವಾಹ ಅಪರಾಧ ಎಂದು ತಡೆಯಲು ತೆರಳಿದ್ದಾರೆ.[ಭೀಕರ ಬಿಸಿಲು : ಇತರ ನಗರಗಳೊಂದಿಗೆ ಕಲಬುರಗಿ ಪೈಪೋಟಿ]
ಹುಡುಗಿ-ಹುಡುಗ ಅಂತೂ ಸಿಗಲಿಲ್ಲ. ಕೊನೆಗೆ ಪೋಷಕರು, ಲಗ್ನಪತ್ರಿಕೆಯಲ್ಲಿ ಸುಖಾಗಮನ ಬಯಸುವವರು ಅಂತ ಇರುತ್ತದಲ್ಲಾ ಅವರು, ದೇವಸ್ಥಾನ ಸಮಿತಿ ಅಧ್ಯಕ್ಷರು, ಇನ್ನೂ ಮುಂದುವರಿದು ಅರ್ಚಕರು ಸೇರಿದ ಹಾಗೆ ಒಂಬತ್ತು ಮಂದಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ಜಡಿದಿದ್ದಾರೆ. ಅದಕ್ಕೆ ಆರಂಭದಲ್ಲೇ ಹೇಳಿದ್ದು, ನಿಮ್ಮ ಹೆಸರನ್ನು ಸುಖಾಗಮನ ಬಯಸುವವರು ಎಂದು ಹಾಕುವ ಮೊದಲು ಯಾಕೆ ನೀವು ಹುಷಾರಾಗಿರಬೇಕು ಅಂತ ಗೊತ್ತಾಯ್ತಾ?