ಎಲ್ಪಿಜಿ ದರ ಏರಿಕೆ; ಅನಿಲ ಭಾಗ್ಯದಡಿ 5 ಕೆಜಿ ಸಿಲಿಂಡರ್ ಲಭ್ಯ
ಕಲಬುರಗಿ, ಏಪ್ರಿಲ್ 4; ಎಲ್ಜಿಪಿ ಸಿಲಿಂಡರ್ ದರಗಳು ಏರಿಕೆಯಾಗುತ್ತಿವೆ. ಇದರಿಂದಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಹಾಗೂ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಗಳಡಿ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಫಲಾನುಭವಿಗಳಿಗೆ ತೊಂದರೆ ಉಂಟಾಗಿದೆ.
ಈಗ ಫಲಾನುಭವಿಗಳು 14.2 ಕೆ.ಜಿ ತೂಕದ ಎಲ್ಪಿಜಿ ಸಿಲಿಂಡರ್ ಬದಲಾಗಿ ಕಡಿಮೆ ವೆಚ್ಚದಲ್ಲಿ ದೊರಕುವ 5 ಕೆಜಿ ಸಿಲಿಂಡರ್ ಪಡೆಯಲು ಅವಕಾಶ ನೀಡಲಾಗಿದೆ. ಕಲಬುರಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಈ ಕುರಿತು ಮಾಹಿತಿ ನೀಡಿದ್ದಾರೆ.
ಪ್ರತಿ ಸಿಲಿಂಡರ್ಗೆ ಹೆಚ್ಚಿನ ದರವನ್ನು ಪಾವತಿಸಲು ಗ್ರಾಹಕರು ಹಿಂಜರಿಯುತ್ತಿದ್ದಾರೆ. ಆದ್ದರಿಂದ 14.2 ಕೆಜಿ ಸಿಲಿಂಡರ್ಗೆ ಹಣ ವ್ಯಯಿಸಲಾಗದ ಕುಟುಂಬಗಳು 5 ಕೆಜಿಯ ಸಿಲಿಂಡರ್ ಪಡೆಯಬಹುದಾಗಿದೆ.

ಸಾಧಾರಣವಾಗಿ ಬಳಸುವ 14.2 ಕೆಜಿ ಗೃಹ ಬಳಕೆಯ ಸಿಲಿಂಡರ್ ಬದಲಾಗಿ ವಿಶೇಷ 5 ಕೆಜಿ ತೂಕದ ಸಿಲಿಂಡರ್ ಬಳಕೆ ಮಾಡುವುದರಿಂದ ಗ್ರಾಹಕರಿಗೆ ಪ್ರತಿ ಸಿಲಿಂಡರ್ಗೆ ತಗುಲುವ ವೆಚ್ಚ ಸುಮಾರು ಅರ್ಧದಷ್ಟು ಕಡಿಮೆಯಾಗಲಿದೆ.
ಮುಖ್ಯಮಂತ್ರಿ ಅನಿಲಭಾಗ್ಯ ಮತ್ತು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದಿರುವ ಫಲಾನುಭವಿಗಳು ಅಡುಗೆ ಅನಿಲ ಬಳಕೆಯನ್ನು ಸಮರ್ಪಕವಾಗಿ ಮುಂದುವರಿಸದೇ ಇರುವುದು ಕಂಡು ಬಂದಿದ್ದು, ಆರಂಭದಲ್ಲಿ ನೀಡಲಾಗಿದ್ದ ಉಚಿತ ಸಿಲಿಂಡರ್ ಬಳಕೆ ಮಾಡಿದ್ದು, ಮುಂದೆ ರಿಫೀಲ್ ಪಡೆಯಲು ವಿಳಂಬ ಮಾಡುತ್ತಿದ್ದಾರೆಂದು ಇತ್ತೀಚೆಗೆ ತೈಲ ಕಂಪನಿಗಳಿಂದ ಪಡೆದಿರುವ ಮಾಹಿತಿಯಿಂದ ತಿಳಿದು ಬಂದಿರುತ್ತದೆ.
ಕಲಬುರಗಿ ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳು ಅಡುಗೆ ಅನಿಲವನ್ನು ಬಳಸುವಂತೆ ಹಾಗೂ ಸೀಮೆಎಣ್ಣೆ ವಿತರಣೆಯನ್ನು ಸ್ಥಗಿತಗೊಳಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕಗಳನ್ನು ಕಲಬುರಗಿ ಜಿಲ್ಲೆಯಲ್ಲಿ ನೀಡಲಾಗಿದೆ.












Click it and Unblock the Notifications