ತನ್ನ ವಿರುದ್ದದ ಪ್ರಕರಣಕ್ಕೆ ತಾನೇ ವಕೀಲನಾದ ಜೈಪುರದ ನುರಿತ ಕಳ್ಳ
ಜೈಪುರ, ಜೂ.23: ವಕೀಲರಿಗೆ ಹಣ ನೀಡುವುದನ್ನು ತಪ್ಪಿಸಲು ನುರಿತ ಕಳ್ಳನೊಬ್ಬ ತನ್ನ ಪ್ರಕರಣಗಳನ್ನು ವಾದಿಸಲು ಮುಂದಾಗಿದ್ದಾನೆ ಎಂದು ವರದಿಯಾಗಿದೆ. ''ಜವಾಹರ್ ವೃತ್ತದಲ್ಲಿ ಸೋಮವಾರ ಬಂಧಿಸಲ್ಪಟ್ಟ 26 ವರ್ಷದ ಈ ಕಳ್ಳನು ಕಾನೂನು ಚೆನ್ನಾಗಿ ತಿಳಿದಿದ್ದಾನೆ,'' ಎಂದು ನಗರ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉತ್ತರ ಪ್ರದೇಶದ ಮೀರತ್ ಜಿಲ್ಲೆ ಮೂಲದ ಸಲೀಂ ಶೇಖ್ನನ್ನು ಜೈಪುರ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ. ಈಗ ತನ್ನ ಈ ಪ್ರಕರಣದ ವಾದ ಮಾಡಲು ತಾನೇ ಮುಂದಾಗಿದ್ದಾನೆ ಸಲೀಂ ಶೇಖ್.
"ಸಲೀಂ ಶೇಖ್ ಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ಇದು ಮೊದಲೇನಲ್ಲ. ಆತ ಅಭ್ಯಾಸದ ಅಪರಾಧಿ. ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ," ಎಂದು ಜವಾಹರ್ ಸರ್ಕಲ್ ಎಸ್ಎಚ್ಒ ನೇಮಿ ಚಂದ್ ತಿಳಿಸಿದ್ದಾರೆ.

ಶೇಖ್ ತನ್ನ ಮೂವರು ಸಹಾಯಕರಾದ ಮಿಲನ್ ಖಾನ್, ಸೂರಜ್ ಜೋಶಿ, ಅಲಿಯಾಸ್ ಬಾದ್ಶಾ ಮತ್ತು ಗುಲ್ಶನ್ ಅಲಿಯಾಸ್ ಗುಲ್ಲು ಎಂಬವರೊಂದಿಗೆ ಈ ಕಳ್ಳತನ ನಡೆಸಿದ್ದಾನೆ ಎಂದು ವರದಿಯಾಗಿದೆ. ''ಆರೋಪಿ ನುರಿತ ಕಳ್ಳನಾಗಿದ್ದು, ಆತನ ಪೋಷಕರು ಸೇರಿದಂತೆ ಇಡೀ ಕುಟುಂಬವು ಕ್ರಿಮಿನಲ್ ದಾಖಲೆಗಳನ್ನು ಹೊಂದಿದೆ. ಆತನ ಹಲವು ಸಂಬಂಧಿಕರು ಸಹ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ,'' ಎಂದು ತನಿಖೆಯಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದ್ದಾರೆ.
''ಆರೋಪಿ ಸಂಬಂಧಿಕರೊಬ್ಬರು ಕಾನೂನಿನ ಪ್ರಕಾರ ನ್ಯಾಯಾಲಯದಲ್ಲಿ ತಮ್ಮನ್ನು ತಾವು ಪ್ರತಿನಿಧಿಸಬಹುದು ಎಂದು ಶೇಖ್ಗೆ ಸಲಹೆ ನೀಡಿದ್ದಾರೆ. ಇದರಂತೆ ತನ್ನ ಪ್ರಕರಣಕ್ಕೆ ತಾನೇ ವಕೀಲನಾಗಿದ್ದಾನೆ,'' ಎಂದು ಕೂಡಾ ಪೊಲೀಸರು ಎಂದಿದ್ದಾರೆ.
''ಆತ ಕಳ್ಳತನದಲ್ಲಿ ಬಹಳ ನುರಿತವನಾಗಿದ್ದಾರೆ. ಆತನ ವಿರುದ್ಧ ಸುಮಾರು ಒಂದು 12ಕ್ಕೂ ಅಧಿಕ ಕಳ್ಳತನದ ಪ್ರಕರಣಗಳಿವೆ. ಆತ ಎಲ್ಪಿಜಿ ಸಿಲಿಂಡರ್ನಿಂದ ಹಿಡಿದು, ಎಲ್ಇಡಿ ಟಿವಿವರೆಗೆ ಕಳ್ಳತನ ಮಾಡಿದ್ದಾನೆ,'' ಎಂದು ಅಧಿಕಾರಿಗಳು ಹೇಳಿದರು.
''ನ್ಯಾಯಾಲಯದಲ್ಲಿ ವಾದಿಸುವ ಕಲೆಯ ಹೊರತಾಗಿ, ವಿಚಾರಣೆಯ ಸಮಯದಲ್ಲಿ ಎಷ್ಟು ಮಾತನಾಡಬೇಕೆಂದು ಅವನಿಗೆ ತಿಳಿದಿದೆ. ಹಿಂದಿನ ಕ್ರಿಮಿನಲ್ ಪ್ರಕರಣಗಳನ್ನು ಮತ್ತೆ ಮಾಡಿರುವುದರ ಬಗ್ಗೆ ನಾವು ಆತನನ್ನು ಕೇಳಿದಾಗಲೆಲ್ಲಾ, ಆತ ಬಹಳ ಜಾಗರೂಕನಾಗಿ ಉತ್ತರ ನೀಡುತ್ತಾನೆ. ಎಂದಿಗೂ ಏನನ್ನೂ ಬಹಿರಂಗಪಡಿಸಲ್ಲ. ಕೊಂಚ ಕಾನೂನು ಕೂಡಾ ಆತನಿಗೆ ತಿಳಿದಿದೆ. ಆತನಿಗೆ ಈ ಪ್ರಕರಣದಲ್ಲಿ ಕಠಿಣ ಶಿಕ್ಷೆ ದೊರೆಯುವಂತೆ ಮಾಡುವುದು ಕೊಂಚ ಕಷ್ಟವೇ ಸರಿ,'' ಎಂದು ಮತ್ತೋರ್ವ ಅಧಿಕಾರಿ ಅಭಿಪ್ರಾಯಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications