ರಾಜಸ್ಥಾನ ಕಾಂಗ್ರೆಸ್ ನಲ್ಲಿ ಬಂಡಾಯ ಸ್ಫೋಟ, ಪೈಲಟ್ ಸಿಎಂ?
ಜೈಪುರ, ಜೂನ್ 06: ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ರಾಜಸ್ಥಾನ ರಾಜಕೀಯದಲ್ಲಿ ಬಹುದೊಡ್ಡ ಬದಲಾವಣೆಯೊಂದು ಸಂಭವಿಸಬಹುದಾದ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನ ಪ್ರಮುಖ ನಾಯಕ ಪೃಥ್ವಿರಾಜ್ ಮೀನಾ ಅವರೇ ಒತ್ತಾಯಿಸಿದ್ದು, ಬಂಡಾಯ ಸ್ಫೋಟವಾದಂತಾಗಿದೆ. ರಾಜಸ್ಥಾನದಲ್ಲಿ ಎರಡು ಬಣಗಳಾಗಿ ಕಾಂಗ್ರೆಸ್ ಒಡೆದಿದ್ದು, ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಜೊತೆಗೆ ಇದೀಗ ವಿಧಾನಸಭೆಯ ಗೆಲುವನ್ನೂ ಉಳಿಸಿಕೊಳ್ಳುವುದು ಕಾಂಗ್ರೆಸ್ ಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.
ಯುವ ನಾಯಕರಿಗೆ ಒತ್ತು ನೀಡಬೇಕು, ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಬೇಕು ಎಂದು ಬಂಡಾಯ ನಾಯಕರು ಪಟ್ಟುಹಿಡಿದು ಕೂತಿದ್ದಾರೆ. ಈ ಬಗ್ಗೆ ಹೈಕಮಾಂಡ್ ಮೇಲೂ ಒತ್ತಡ ಹೇರಲು ಅವರು ಮುಂದಾಗಿದ್ದಾರೆ.
2018 ರಲ್ಲಿ ಡೆದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 200 ಕ್ಷೇತ್ರಗಳ ರಾಜಸ್ಥಾ ವಿಧಾನಸಭೆಯಲ್ಲಿ 199 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ 99 ಕ್ಷೇತ್ರಗಳಲ್ಲಿ ಗೆದ್ದರೆ, ಬಿಜೆಪಲಿ 73 ಕ್ಷೇತ್ರಗಳಲ್ಲಷ್ಟೇ ಗೆಲ್ಲಲು ಸಮರ್ಥವಾಗಿತ್ತು. ನಂತರ ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸಿತ್ತು.
ಆದರೆ ಆಗಿನಿಂದಲೂ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ರೂವಾರಿಯೇ ಸಚಿನ್ ಪೈಲಟ್. ಆದರೆ ಹಿರಿತನದ ಆದಾರದ ಮೇಲೆ ಅಶೋಕ್ ಗೆಹ್ಲೋಟ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು.

ಭಿನ್ನಮತ ಸ್ಫೋಟ
ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಭಿನ್ನಮತೀಯರ ಧ್ವನಿ ಏರಿದ್ದು, ಗೆಹ್ಲೋಟ್ ಅವರು ರಾಜೀನಾಮೆ ನೀಡಬೇಕು. ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ರಾಜಸ್ಥಾನದ ತೊಡಾಭೀಮ್ ಶಾಸಕ ಪೃಥ್ವಿರಾಜ್ ಮೀನಾ ಒತ್ತಾಯಿಸಿದ್ದಾರೆ. ರಾಜಸ್ಥಾನಕ್ಕೆ ಯುವ ನಾಯಕರು ಬೇಕು ಎಂದೂ ಅವರು ಹೇಳಿದ್ದಾರೆ.

ಸೋಲಿನ ಹೊಣೆ ಹೊತ್ತುಕೊಳ್ಳಲು ಯಾರೂ ಸಿದ್ಧರಿಲ್ಲ!
ರಾಜಸ್ಥಾನದಲ್ಲಿ ಲೋಕಸಭೆ ಚುನಾವಣೆಯಲ್ಲಿ 25 ಕ್ಕೆ 25 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋತಿದ್ದು ಅದರ ಸೋಲಿಗೆ ಯಾರು ಕಾರಣ ಎಂದು ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಇತ್ತೀಚೆಗೆ ಶಾಸಕರಾದ ರಮೇಶ್ ಮೀನಾ ಮತ್ತು ಉದಯ್ ಲಾಲ್ ಅಂಜನಾ ಬೇಡಿಕೆ ಇಟ್ಟಿದ್ದರು. ಪರೋಕ್ಷವಾಗಿ ಸೋಲಿಗೆ ಅಶೋಕ್ ಗೆಹ್ಲೋಟ್ ಕಾರಣ ಎಂದಿದ್ದರು.

ಮಗನ ಸೋಲಿನ ಸಂಕಟ
ಗೆಹ್ಲೋಟ್ ಅವರಿಗೆ ತೀವ್ರ ಹಿನ್ನಡೆಯಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಅವರ ಪುತ್ರ ವೈಭವ್ ಗೆಹ್ಲೋಟ್ ಸೋಲು! ಕಾಂಗ್ರೆಸ್ ಹೈಕಮಾಂಡ್ ಗೆ ಇಷ್ಟವಿಲ್ಲದಿದ್ದರೂ ಪುತ್ರನಿಗಾಗಿ ಟಿಕೆಟ್ ಗೆ ಹಠ ಬಿದ್ದ ಗೆಹ್ಲೋಟ್, ರಾಜ್ಯದಲ್ಲೂ ಕಾಂಗ್ರೆಸ್ ಮುಖಂಡರ ವಿರೊಧ ಕಟ್ಟಿಕೊಂಡು ಮಗನಿಗೆ ಟಿಕೆಟ್ ಗಿಟ್ಟಿಸಿಕೊಂದಿದ್ದರು. ಆದರೆ ಜೋಧಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೈಭವ್ ಗೆಹ್ಲೋಟ್ ಅವರನ್ನು ಬಿಜೆಪಿಯ ಹಾಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರ ವಿರುದ್ಧ ಕಣಕ್ಕಿಳಿಸಲಾಗಿತ್ತು. ಆದರೆ ಅವರು ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳ ಭಾರೀ ಅಂತರದಿಂದ ಸೋಲನುಭವಿಸಿದ್ದರು.

ಮಗನ ಸೋಲಿಗೆ ಪೈಲಟ್ ಕಾರಣ!
"ನನ್ನ ಮಗನನ್ನು ಜೋಧಪುರದಿಂದ ಚುನಾವಣೆಗೆ ನಿಲ್ಲಿಸುವ ಸಲಹೆ ನೀಡಿದ್ದೇ ಸಚಿನ್ ಪೈಲಟ್. ಅವರು ಭಾರೀ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನೂ ಪೈಲಟ್ ನೀಡಿದ್ದರು. ಆದರೆ ವೈಭವ್ ಸೋತಿರುವುದಕ್ಕೆ ಕಾರಣ ಸಚಿನ್ ಪೈಲಟ್. ನನ್ನ ಮಗನ ಸೋಲಿನ ಜವಾಬ್ದಾರಿಯನ್ನು ಸಚಿನ್ ಪೈಲಟ್ ಅವರೇ ಹೊತ್ತುಕೊಳ್ಳಬೇಕು ಎಂದು ಅಶೋಕ್ ಗೆಹ್ಲೋಟ್ ಆರೋಪಿಸಿದ್ದರು. ಗೆಹ್ಲೋಟ್ ಪುತ್ರನನ್ನು ಚುನಾವಣೆಗೆ ನಿಲ್ಲಿಸಲು ಕಾಂಗ್ರೆಸ್ ನಲ್ಲೇ ವಿರೋಧವಿತ್ತಾದರೂ, ಹಠ ಬಿಡದ ಗೆಹ್ಲೋಟ್ ಮಗನಿಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಗೆಹ್ಲೋಟ್ ಮಗ ಚುನಾವಣೆಗೆ ಸ್ಪರ್ಧಿಸುವುದು ಸಚಿತ್ ಪೈಲಟ್ ಗೂ ಇಷ್ಟವಿರಲಿಲ್ಲ!












Click it and Unblock the Notifications