ದೇಶದ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬದಲು ಮಣ್ಣಿನ ಕಪ್ ಬಳಕೆ
ಜೈಪುರ್, ನವೆಂಬರ್.30: ಭಾರತೀಯ ರೈಲ್ವೆ ನಿಲ್ದಾಣಗಳಲ್ಲಿ ಇನ್ನು ಮುಂದೆ ಪ್ಲಾಸ್ಟಿಕ್ ಕಪ್ ಬದಲಾಗಿ ಪ್ರಾಕೃತಿಕ ಮಣ್ಣಿನಿಂದ ಸಿದ್ಧಪಡಿಸಿದ ಕಪ್ ಗಳಲ್ಲಿ ಚಹಾ ಮಾರಾಟ ಮಾಡಲಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಹೇಳಿದ್ದಾರೆ.
ವಾಯುವ್ಯ ವಿಭಾಗದ ಧಿಗವರ-ಬಂಡಿಕುಯ್ ಮಾರ್ಗವನ್ನು ವಿದ್ಯುತ್ಯೀಕರಣಗೊಳಿಸುವುದರ ಹಿನ್ನೆಲೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಧಿಗವರ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಥುರಾದಲ್ಲಿ ಚಹಾ ಸೇವಿಸಿದ ನಂತರ ಇಬ್ಬರು ಸಾಧುಗಳ ಸಾವು: ತನಿಖೆಗೆ ಆಗ್ರಹ
ಪ್ಲಾಸ್ಟಿಕ್ ಕಪ್ ಗಳ ಬದಲಿಗೆ ಮಣ್ಣಿನಿಂದ ಸಿದ್ಧಪಡಿಸಿದ ಕಪ್ ಗಳಲ್ಲಿ ಚಹಾ ನೀಡುವುದರಿಂದ ಭಾರತೀಯ ರೈಲ್ವೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
400 ರೈಲ್ವೆ ನಿಲ್ದಾಣಗಳಲ್ಲಿ ಈ ಯೋಜನೆ:
ಭಾರತದ 400 ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬದಲು ಮಣ್ಣಿನಿಂದ ಸಿದ್ಧಪಡಿಸಿದ (ಕುಲ್ಹಾದ್) ಕಪ್ ಗಳಲ್ಲಿ ಚಹಾವನ್ನು ನೀಡುವುದಕ್ಕೆ ಉದ್ದೇಶಿಸಲಾಗಿದೆ. ರೈಲ್ವೆ ನಿಲ್ದಾಣಗಳಲ್ಲಿ ಕೇವಲ ಮಣ್ಣಿನ ಕಪ್ ಗಳನ್ನು ಮಾತ್ರ ಬಳಸುವುದಕ್ಕೆ ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ಪ್ಲಾಸ್ಟಿಕ್ ಮುಕ್ತ ರೈಲ್ವೆ ನಿಲ್ದಾಣಗಳ ನಿರ್ಮಾಣ ಸಾಧ್ಯವಾಗುತ್ತದೆ. ಕುಲ್ಹಾದ್ ಗಳ ಬಳಕೆಯಿಂದಾಗಿ ಪರಿಸರ ಸಂರಕ್ಷಣೆ ಜೊತೆಗೆ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಸಿದಂತೆ ಆಗುತ್ತದೆ ಎಂದು ಪಿಯೂಶ್ ಗೋಯೆಲ್ ಹೇಳಿದ್ದಾರೆ.