ಪಂಜಾಬ್ ಬಳಿಕ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿದ ರಾಜಸ್ಥಾನ ಸರ್ಕಾರ
ಜೈಪುರ, ನವೆಂಬರ್ 10: ಇತರ ರಾಜ್ಯಗಳಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು (ವ್ಯಾಟ್) ಕಡಿತಗೊಳಿಸುವುದಾಗಿ ರಾಜಸ್ಥಾನ ಸರ್ಕಾರ ಮಂಗಳವಾರ ಪ್ರಕಟಿಸಿದೆ. ಮುಖ್ಯಮಂತ್ರಿ ಅಶೋಕ್ ಸಿಂಗ್ ಗೆಹ್ಲೋಟ್ ಅವರು ಜೋಧ್ಪುರ ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, "ಎಲ್ಲಾ ರಾಜ್ಯಗಳು ಬೆಲೆಗಳನ್ನು ಕಡಿಮೆ ಮಾಡಿದಾಗ, ನಾವು ಅದನ್ನು ಕಡಿಮೆ ಮಾಡಬೇಕಾಗುತ್ತದೆ. ನಮ್ಮ ಸರ್ಕಾರವು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡುವ ಮೂಲಕ ಜನರಿಗೆ ಪರಿಹಾರವನ್ನು ನೀಡುತ್ತದೆ" ಎಂದು ಅವರು ಹೇಳಿದರು.
ಇಂಧನ ಬೆಲೆ ಹೆಚ್ಚಳದ ಬಗ್ಗೆ ಮೋದಿ ಸರ್ಕಾರದ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ ಗೆಹ್ಲೋಟ್, ಇಂಧನದ ಮೇಲೆ ಭಾರಿ ತೆರಿಗೆ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಜನರನ್ನು "ಲೂಟಿ" ಮಾಡಿದೆ ಎಂದು ಹೇಳಿದರು. "ಈಗ, ಅವರು ಅಲ್ಪ ಪರಿಹಾರವನ್ನು ಒದಗಿಸಿದ್ದಾರೆ" ಅವರು ಕಿಡಿ ಕಾರಿದ್ದಾರೆ.
ಜೊತೆಗೆ ಪಂಜಾಬ್ ಸರ್ಕಾರವು 2022 ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕ್ರಮವಾಗಿ ರೂ 10 ಮತ್ತು ರೂ 5 ರಷ್ಟು ಕಡಿಮೆ ಮಾಡುವುದಾಗಿ ಘೋಷಿಸಿದೆ. ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರು ಡೀಸೆಲ್ ಮೇಲೆ ವಿಧಿಸಲಾದ ಮೌಲ್ಯವರ್ಧಿತ ತೆರಿಗೆಯಲ್ಲಿನ ಇಳಿಕೆಯಿಂದಾಗಿ ಬೆಲೆಗಳನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದರು. ಪಂಜಾಬ್ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪರಿಷ್ಕೃತ ದರ ಸೋಮವಾರದಿಂದ (ನ.8) ಜಾರಿಗೆ ಬಂದಿದೆ.

ನವೆಂಬರ್ 7 ಪಂಜಾಬ್ ಸಚಿವ ಸಂಪುಟ ಸಭೆ ನಂತರ ಚನ್ನಿ ಈ ಕ್ರಮವನ್ನು ಘೋಷಿಸಿದರು. ಇದು ರಾಜ್ಯದ ಬೊಕ್ಕಸಕ್ಕೆ ವಾರ್ಷಿಕವಾಗಿ 1000 ಕೋಟಿ ವೆಚ್ಚವಾಗಲಿದೆ. 70 ವರ್ಷಗಳಲ್ಲಿ ಇಂತಹ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ ಚನ್ನಿ, ಪಂಜಾಬ್ನಲ್ಲಿ ಪೆಟ್ರೋಲ್ ಈ ಪ್ರದೇಶದಲ್ಲಿ ಅಗ್ಗವಾಗಿದೆ ಎಂದು ಹೇಳಿದರು. "ದೆಹಲಿಗೆ ಹೋಲಿಸಿದರೆ, ಪಂಜಾಬ್ನಲ್ಲಿ ಪೆಟ್ರೋಲ್ ಈಗ 9 ರೂಪಾಯಿ ಕಡಿಮೆಯಾಗಿದೆ" ಎಂದು ಚನ್ನಿ ಅವರು ಹೇಳಿದರು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮೂಲ ತೈಲ ಬೆಲೆ, ಮೌಲ್ಯವರ್ಧಿತ ತೆರಿಗೆ, ಕೇಂದ್ರೀಯ ಅಬಕಾರಿ ಮತ್ತು ಡೀಲರ್ಗಳಿಗೆ ಕಮಿಷನ್ ಅನ್ನು ಒಳಗೊಂಡಿರುತ್ತದೆ. ಇಂಧನ ಬೆಲೆ ಏರಿಕೆಯಾಗುತ್ತಲೇ ಇದ್ದು, ಕೇಂದ್ರ ಸರ್ಕಾರ ಕಳೆದ ವಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 5 ರೂಪಾಯಿ ಮತ್ತು ಡೀಸೆಲ್ಗೆ 10 ರೂಪಾಯಿ ಕಡಿತಗೊಳಿಸುವುದಾಗಿ ಘೋಷಿಸಿದೆ. ಪ್ರಸ್ತುತ, ಪಂಜಾಬ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕ್ರಮವಾಗಿ ಲೀಟರ್ಗೆ 106.20 ಮತ್ತು 89.83 ರೂ ಆಗಿದೆ.
ಶಿರೋಮಣಿ ಅಕಾಲಿದಳ, ಭಾರತೀಯ ಜನತಾ ಪಕ್ಷ ಮತ್ತು ಆಮ್ ಆದ್ಮಿ ಪಕ್ಷವು ಗ್ರಾಹಕರಿಗೆ ಪರಿಹಾರ ನೀಡಲು ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದವು.
ಈ ಹಿಂದೆ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 5 ಮತ್ತು 10 ರೂ.ಗಳಷ್ಟು ಕಡಿತಗೊಳಿಸುವುದಾಗಿ ಘೋಷಿಸಿತು, ಅವುಗಳ ಚಿಲ್ಲರೆ ದರಗಳನ್ನು ದಾಖಲೆಯ ಗರಿಷ್ಠ ಮಟ್ಟದಿಂದ ಇಳಿಸಿತು. ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಕೇಂದ್ರ ಸರ್ಕಾರವು ಗ್ರಾಹಕರಿಗೆ ಪರಿಹಾರ ನೀಡಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಲು ರಾಜ್ಯಗಳನ್ನು ಒತ್ತಾಯಿಸಿದೆ. ಜನಾಕ್ರೋಶದ ನಂತರ ಪಂಜಾಬ್ ಸರ್ಕಾರ ಕೊನೆಗೂ ತೈಲ ಬೆಲೆಯನ್ನು ಇಳಿಸಿದೆ. ಕೇಂದ್ರ ಸರ್ಕಾರ ಅಬಕಾರಿ ಶುಲ್ಕ ಕಡಿತಗೊಳಿಸಿದ ನಂತರ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸರ್ಕಾರಗಳು ತನ್ನ ಪಾಲಿನ ತೆರಿಗೆ ಕಡಿತವನ್ನು ಘೋಷಿಸಿತ್ತು. ಸದ್ಯ ರಾಜಸ್ಥಾನ ಸರ್ಕಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿತಗೊಳಿಸುವುದಾಗಿ ಹೇಳಿದೆ.












Click it and Unblock the Notifications