ಸಚಿನ್ ಪೈಲೆಟ್ ಅನರ್ಹತೆ ನೋಟಿಸ್; ಕೇಂದ್ರ ಸರ್ಕಾರ ಪ್ರತಿವಾದಿ!
ಜೈಪುರ, ಜುಲೈ 24 : ರಾಜಸ್ಥಾನ ಕಾಂಗ್ರೆಸ್ ಶಾಸಕರ ಅನರ್ಹತೆ ಪ್ರಕರಣದ ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯಾಗಿ ಮಾಡಲಾಗಿದೆ. ರಾಜಸ್ಥಾನ ಹೈಕೋರ್ಟ್ ಕೇಂದ್ರವನ್ನು ಪ್ರತಿವಾದಿಯಾಗಿಸಿದೆ.
ರಾಜಸ್ಥಾನ ಸ್ಪೀಕರ್ ಸಿ. ಪಿ. ಜೋಶಿ ಪರವಾಗಿ ರಾಜಸ್ಥಾನ ಹೈಕೋರ್ಟ್ನಲ್ಲಿ ವಾದ ಮಂಡನೆ ಮಾಡಲಿರುವ ವಕೀಲ ಪ್ರದೀಪ್ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕೋರ್ಟ್ ಅನರ್ಹತೆ ಪ್ರಕರಣದ ತೀರ್ಪನ್ನು ಇಂದು ನೀಡಲಿದೆ.

ಸ್ಪೀಕರ್ ಸಿ. ಪಿ. ಜೋಶಿ ನೀಡಿರುವ ಅನರ್ಹತೆ ನೋಟಿಸ್ ಪ್ರಶ್ನೆ ಮಾಡಿ ಸಚಿನ್ ಪೈಲೆಟ್ ಮತ್ತು 18 ಕಾಂಗ್ರೆಸ್ ಶಾಸಕರು ರಾಜಸ್ಥಾನ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಪ್ರತಿವಾದಿಯಾಗಿದ್ದು, ಹೆಚ್ಚುವರಿ ಸಾಲಿಟರ್ ಜನರಲ್ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಲಿದ್ದಾರೆ.
ಸ್ಪೀಕರ್ ಅನರ್ಹತೆ ನೋಟಿಸ್ ನೀಡಿರುವುದನ್ನು ಪ್ರಶ್ನೆ ಮಾಡಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ರಾಜಸ್ಥಾನ ಹೈಕೋರ್ಟ್ ಪೂರ್ಣಗೊಳಿಸಿದೆ. ಶುಕ್ರವಾರ ಅರ್ಜಿಯ ತೀರ್ಪನ್ನು ಪ್ರಕಟಿಸಬೇಕಿದೆ.
ರಾಜಸ್ಥಾನ ಹೈಕೋರ್ಟ್ ಆದೇಶ ಪ್ರಕಟವಾಗುವ ತನಕ ಅನರ್ಹತೆ ನೋಟಿಸ್ ವಿಚಾರದಲ್ಲಿ ಕ್ರಮ ಕೈಗೊಳ್ಳದಂತೆ ಸ್ಪೀಕರ್ಗೆ ಕೋರ್ಟ್ ತಡೆ ನೀಡಿದೆ. ಇದನ್ನು ಸ್ಪೀಕರ್ ಸಿ. ಪಿ. ಜೋಶಿ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿದೆ. ಜುಲೈ 27ರ ಸೋಮವಾರಕ್ಕೆ ತೀರ್ಪು ಕಾಯ್ದಿರಿಸಿದೆ. ಶುಕ್ರವಾರ ಹೈಕೋರ್ಟ್ ತೀರ್ಪು ಪ್ರಕಟಿಸಬಹುದು ಎಂದು ಹೇಳಿದೆ.
ಶಾಸಕರ ಅನರ್ಹತೆ ವಿಚಾರದಲ್ಲಿ ರಾಜಸ್ಥಾನ ಹೈಕೋರ್ಟ್ ಇಂದು ನೀಡಲಿರುವ ತೀರ್ಪು ಸೋಮವಾರ ಸುಪ್ರೀಂಕೋರ್ಟ್ ನೀಡಲಿರುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.












Click it and Unblock the Notifications