ರಾಜಸ್ತಾನದ ಬರ್ಮರ್ ನಲ್ಲಿ ಮಳೆ-ಗಾಳಿಗೆ ಪೆಂಡಾಲ್ ಕುಸಿದು ಕನಿಷ್ಠ 14 ಮಂದಿ ಸಾವು
ಜೈಪುರ್ (ರಾಜಸ್ತಾನ), ಜೂನ್ 23: ರಾಜಸ್ತಾನದ ಬರ್ಮರ್ ನಲ್ಲಿ ಭಾನುವಾರ ಭಾರೀ ಮಳೆ, ಗಾಳಿಗೆ ಟೆಂಟ್ ಕುಸಿದು, ಕನಿಷ್ಠ ಹದಿನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಐವತ್ತು ಮಂದಿಯಷ್ಟು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.
ಜೈಪುರ್ ನಿಂದ ಐನೂರು ಕಿಲೋಮೀಟರ್ ದೂರ ಇರುವ ಬರ್ಮರ್ ಜಿಲ್ಲೆಯ ಜಸೋಲ್ ಹಳ್ಳಿಯ ರಾಣಿ ಭಟಿಯಾನಿ ದೇಗುಲದ ಬಳಿ ಇರುವ ಶಾಲಾ ಮೈದಾನದಲ್ಲಿ ಈ ಘಟನೆಯು ಸಂಭವಿಸಿದೆ. ಧಾರ್ಮಿಕ ಕಾರ್ಯಕ್ರಮದ ಸಲುವಾಗಿ ಇಲ್ಲಿ ಜನರು ಸೇರಿದ್ದರು.
ಮೂಲಗಳ ಪ್ರಕಾರ, ಟೆಂಟ್ ನ ಅಡಿಯಲ್ಲಿ ಕೆಲವರು ಸಿಕ್ಕಿಕೊಂಡು, ಅಲ್ಲಿದ್ದ ಜನರೇಟರ್ ನಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲು ರಾಜ್ಯ ಸರಕಾರ ಆದೇಶ ನೀಡಿದೆ.

ಯಾರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರೋ ಅವರು ರಾಮಕಥಾ ನಡೆಯುವಾಗ ಮಧ್ಯ ಪ್ರವೇಶಿಸಿ, ವಿಪರೀತ ಗಾಳಿ ಬೀಸುತ್ತಿದೆ. ಸುರಕ್ಷಿತವಾಗಿ ಇಲ್ಲಿಂದ ಹೊರಕ್ಕೆ ಹೋಗಿ ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಜಿಲ್ಲಾ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ರಾಜಸ್ತಾನದ ಬರ್ಮರ್ ನಲ್ಲಿ ನಡೆದ ಪೆಂಡಾಲ್ ಕುಸಿತ ದುರದೃಷ್ಟಕರ. ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹೇಳಬಯಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ರಾಜಸ್ತಾನದ ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications